ಅಹಿಂಸಾ ತತ್ವಗಳ ಪ್ರತಿಪಾದಕನಿಗೆ ನಮನ

| Published : Apr 11 2025, 12:31 AM IST

ಸಾರಾಂಶ

ಅಹಿಂಸಾ ತತ್ವಗಳ ಪ್ರತಿಪಾದಕ ಭಗವಾನ್ ಮಹಾವೀರ ಜಯಂತಿ ಅಂಗವಾಗಿ ನಗರದಲ್ಲಿ ಗುರುವಾರ ಮಹಾವೀರರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಕೊಪ್ಪಳ:

ಅಹಿಂಸಾ ತತ್ವಗಳ ಪ್ರತಿಪಾದಕ ಭಗವಾನ್ ಮಹಾವೀರ ಜಯಂತಿ ಅಂಗವಾಗಿ ನಗರದಲ್ಲಿ ಗುರುವಾರ ಮಹಾವೀರರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಭಗವಾನ್ ಮಹಾವೀರರ ಜಯಂತಿಯನ್ನು ಜಿಲ್ಲಾ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೆರವಣಿಗೆಗೆ ನಗರದ ಅಶೋಕ ವೃತ್ತದಲ್ಲಿ ಚಾಲನೆ ನೀಡಲಾಯಿತು. ಈ ವೇಳೆ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ತಹಸೀಲ್ದಾರ್‌ ವಿಠ್ಠಲ ಚೌಗಲಾ, ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರು ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಸಂಸದ ರಾಜಶೇಖರ ಹಿಟ್ನಾಳ ಮೆರವಣಿಗೆಯಲ್ಲಿ ಪಾಲ್ಗೊಂಡು, ಸಮಾಜದವರಿಗೆ ಶುಭ ಕೋರಿದರು. ಈ ವೇಳೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರಪಾಶಾ ಪಲ್ಟನ್, ಸದಸ್ಯರಾದ ಮಹೀಂದ್ರಾ ಛೋಪ್ರಾ, ರಾಜಶೇಖರ ಆಡೂರ, ಜೈನ ಸಮಾಜದ ಮುಖಂಡರಾದ ಹೀರೋ ಜಿರಾವಲಾ, ರಾಜೇಂದ್ರ ಜೈನ, ರಾಜೇಶ ಲುಂಕಡ, ಮಹಾವೀರ ಸಂಕಲೇಚಾ, ಮಹೇಂದ್ರ ಲುಂಕಡ, ಪ್ರಮೋದ ಜೈನ, ದೀಪಚಂದ ನಿರ್ಮಲ ಚೋಪ್ರಾ, ಭರತ ಮೆಹ್ತಾ, ಜವಾಹರಲಾಲ, ಅಶೋಕ, ದಿಲೀಪ, ಮಹಾವೀರ ವಿನಾಯಕಿಯಾ, ಗೌತಮ ಪಾಲರೇಚಾ, ಕವಿತಾ ಜಿರಾವಲಾ, ವೈಶಾಲಿ ಧಾನೇಶಾ, ಜ್ಯೋತಿ ಪಾರಿಜಾತ, ಸಂಗೀತಾ ಚೋಪ್ರಾ, ಅನಿತಾ ಚೋಪ್ರಾ ಉಪಸ್ಥಿತರಿದ್ದರು.

ಅದ್ಧೂರಿ ಮೆರವಣಿಗೆ:

ಮಹಾವೀರರ ಭಾವಚಿತ್ರದ ಮೆರವಣಿಗೆ ಅಶೋಕ ವೃತ್ತದಿಂದ ಪ್ರಾರಂಭಗೊಂಡು ಜವಾಹರ ರಸ್ತೆ, ಗಡಿಯಾರ ಕಂಬದ ಮಾರ್ಗವಾಗಿ ಕೋಟೆ ರಸ್ತೆಯ ಜೈನ್ ಬಸದಿ ವರೆಗೆ ಸಾಗಿ, ಅಲ್ಲಿ ಪೂಜಾ ಕಾರ್ಯಕ್ರಮ ಜರುಗಿತು. ನಂತರ ಅಲ್ಲಿಂದ ಪುನಃ ಗಡಿಯಾರ ಕಂಬದ ಮಾರ್ಗವಾಗಿ ಗೋಶಾಲೆ ರಸ್ತೆಯ ಜೈನ್ ಮಂದಿರದ ವರೆಗೆ ನಡೆಯಿತು. ಮೆರವಣಿಗೆಯಲ್ಲಿ ಸಮಾಜದ ಮುಖಂಡರು, ಮಹಿಳೆಯರು, ಮಕ್ಕಳು ಮತ್ತು ಕಲಾ ತಂಡದವರು ಭಾಗವಹಿಸಿದ್ದರು.