ಸಾರಾಂಶ
ವಿವಿಧ ವಾದ್ಯ ವೈಭವಗಳೊಂದಿಗೆ ಮಂಗಳವಾರ ರಾತ್ರಿ ೧೦ರಿಂದ ಬುಧವಾರ ಬೆಳಗಿನ ೧೦ರ ವರೆಗೆ ನಡೆದ ರಥೋತ್ಸವ ಸಹಸ್ರ ಸಹಸ್ರ ಸಂಖ್ಯೆ ಭಕ್ತರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತು.
ಕನ್ನಡಪ್ರಭ ವಾರ್ತೆ ಹಾನಗಲ್ಲ
ಶತಮಾನಗಳ ಇತಿಹಾಸದ ಸಾಂವಸಗಿಯ ಶ್ರೀ ವೀರಭದ್ರೇಶ್ವರ ರಥೋತ್ಸವ ಧರ್ಮ, ಶ್ರದ್ಧೆಯ ಉತ್ಸವವಾಗಿದ್ದು, ಈ ಸಂಭ್ರಮದಲ್ಲಿ ಎಲ್ಲರೂ ಕೂಡಿ ಖುಷಿಪಡುವ ಒಂದು ಸಾಂಸ್ಕೃತಿಕ ಹೆಗ್ಗಳಿಕೆ ಇದೆ ಎಂದು ಹೋತನಹಳ್ಳಿ ಸಿಂದಗಿ ಮಠದ ಶಂಭುಲಿಂಗ ಶಿವಾಚಾರ್ಯರು ತಿಳಿಸಿದರು.ಶ್ರೀ ವೀರಭದ್ರೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷಿ ಸಮುದಾಯ ವರ್ಷಕ್ಕೊಮ್ಮೆ ದೇವರ ಜಾತ್ರೆಗಳನ್ನು ಮಾಡುವ ಮೂಲಕ ಧಾರ್ಮಿಕ ಸಂತಸವನ್ನು ಹಂಚಿಕೊಳ್ಳುತ್ತದೆ. ತೇರನ್ನು ಭಕ್ತಿಯಿಂದ ಎಳೆಯುವ ಮೂಲಕ ಮನದ ಕಲ್ಮಶಗಳನ್ನು ಕಳೆದುಕೊಂಡು ಹೊಸ ಉತ್ಸಾಹಕ್ಕೆ ಮುಂದಾಗುತ್ತಾರೆ. ಎಲ್ಲರೂ ಕೂಡಿ ಬಾಳುವುದೇ ಸ್ವರ್ಗ ಸುಖ. ಒಂದಾಗಿ ಬದುಕುವುದಕ್ಕೆ ಪುಷ್ಟಿ ನೀಡುವ ಜಾತ್ರೆಗಳು ಸಮಾಜದ ಮುಖ್ಯ ಭಾಗಗಳಾಗಿವೆ ಎಂದರು..ವಿವಿಧ ವಾದ್ಯ ವೈಭವಗಳೊಂದಿಗೆ ಮಂಗಳವಾರ ರಾತ್ರಿ ೧೦ರಿಂದ ಬುಧವಾರ ಬೆಳಗಿನ ೧೦ರ ವರೆಗೆ ನಡೆದ ರಥೋತ್ಸವ ಸಹಸ್ರ ಸಹಸ್ರ ಸಂಖ್ಯೆ ಭಕ್ತರ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತು. ವಾದ್ಯ ಸಂಗೀತ, ಡೊಳ್ಳು ಕುಣಿತ, ಪುರವಂತಿಕೆ, ನಂದಿಕೋಲು ಕುಣಿತವೂ ಸೇರಿ ಸಂಭ್ರಮದ ಜಾತ್ರೆಯಾಯಿತು.
ಶ್ರೀ ವೀರಭದ್ರೇಶ್ವರ ಟ್ರಸ್ಟ್ ಸಮಿತಿಯ ಸದಸ್ಯರು, ಜಾತ್ರಾ ಸಮಿತಿಯ ಪಂಚ ಸಮಿತಿಯ ಮಲ್ಲಪ್ಪ ಬೆಣ್ಣಿ, ನಾರಾಯಣ ಬಡಿಗೇರ, ಟಾಕನಗೌಡ ಪಾಟೀಲ, ಈಶ್ವರ ಕುಲಕರ್ಣಿ, ಶಾಂತಪ್ಪ ದೊಡ್ಡಮನಿ, ಶಿವಾನಂದಪ್ಪ ಹಳ್ಳಿಗುಡಿ, ಇರಸಂಗಪ್ಪ ಗುರಣ್ಣನವರ, ಯಲ್ಲಪ್ಪ ಚಂದ್ರಗೇರಿ, ಸುಭಾಸ ಮೂಡುರು, ಪ್ರಕಾಶ ಈಳಿಗೇರ, ಶಿವಪ್ಪ ಈಳಿಗೇರ, ಲಕ್ಷಪ್ಪ ಓಲೇಕಾರ, ಬಸಪ್ಪ ವಾಲಗದ ೬ ದಿನಗಳ ವಿಶೇಷವಾದ ಹಬ್ಬವನ್ನು ಗ್ರಾಮಸ್ಥರ ಸಹಕಾರದೊಂದಿಗೆ ವಿಜೃಂಭಣೆಯಿಂದ ನಡೆಸಿಕೊಟ್ಟರು.