ದೇಶದ ಮಣ್ಣಿನ ಪ್ರತಿ ಕಣಕಣದಲ್ಲಿದೆ ಪಾವಿತ್ರ್ಯತೆ

| Published : Mar 13 2025, 12:54 AM IST

ಸಾರಾಂಶ

ನಮ್ಮ ದೇಶದ ಮಣ್ಣಿನ ಪ್ರತಿ ಕಣಕಣದಲ್ಲೂ ಪಾವಿತ್ರ್ಯತೆಯಿದೆ.

ಶಿರಸಿ: ಸ್ತ್ರೀಯರಲ್ಲಿ ಮಾತೃತ್ವದ ಉಚ್ಚ ಆದರ್ಶವನ್ನು ಕಂಡ ಶ್ರೇಷ್ಠ ಸಂಸ್ಕೃತಿ ಭಾರತದ್ದು ಎಂದು ರಾಷ್ಟ್ರ ಸೇವಿಕಾ ಸಮಿತಿಯ ಸದಸ್ಯೆ ಯಶೋದಾ ಭಟ್ಟ ಹೇಳಿದರು.ಅವರು ನಗರದ ಪ್ರಗತಿನಗರದ ಯೋಗ ತರಗತಿಯಲ್ಲಿ ಮಹಿಳಾ ಪತಂಜಲಿ ಯೋಗ ಸಮಿತಿ ಸಹಯೋಗದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶದ ಮಣ್ಣಿನ ಪ್ರತಿ ಕಣಕಣದಲ್ಲೂ ಪಾವಿತ್ರ್ಯತೆಯಿದೆ. ದೇಶದಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣುವ ಗುಣ ಇದೆ. ಸ್ತ್ರೀಗೆ ಮಾತೃತ್ವ ಉಚ್ಚ ಆದರ್ಶ ನೀಡಿದ ದೇಶ ನಮ್ಮದು. ವಿದೇಶಗಳಲ್ಲಿ ಸ್ತ್ರೀ ಸಮಾನತೆ ಇಲ್ಲ. ಅದಕ್ಕಾಗಿ ಅಲ್ಲೆಲ್ಲ ಹೋರಾಟಗಳು ನಡೆಯುತ್ತಿವೆ. ಭಾರತದ ದೇಶದ ಹೆಸರಿನಲ್ಲಿಯೇ ಭಾವ, ರಾಗ, ತಾಳಗಳ ಸಮನ್ವಯತೆಯಿದೆ. ಆದರೆ ಇಂತಹ ದೇಶದ ಪಠ್ಯಪುಸ್ತಗಳಲ್ಲಿ ಗುಲಾಮಗಿರಿಯ ಆಳ್ವಿಕೆಯ ಇತಿಹಾಸ, ಸಂಸ್ಕೃತಿಯ ಬಗ್ಗೆ ತಿಳಿಸುವ ಕೆಲಸ ಆಗುತ್ತಿದೆ. ಆದರೆ ಶಾಲಾ ಪಠ್ಯಗಳಲ್ಲಿ ಭಾರತದ ಶ್ರೇಷ್ಠ ಇತಿಹಾಸ, ಸಂಸ್ಕೃತಿ ತಿಳಿಸುವ ಕೆಲಸ ಮಾಡಬೇಕಿದೆ. ಈ ಮೂಲಕ ನಮ್ಮ ಸಂಸ್ಕೃತಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ತೋರಬೇಕು ಎಂದರು.

ಈ ವೇಳೆ ಯಶೋದಾ ಭಟ್ಟ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಯೋಗ ಶಿಕ್ಷಕಿ ಮಂಗಲಾ ಹಬ್ಬು ಜತೆಯಲ್ಲಿ ಆಶಾ ಹೆಗಡೆ, ಮಾಲಿನಿ ಹೆಗಡೆ, ತನುಜಾ ಹೆಗಡೆ, ಕುಸುಮಾ ಹೆಗಡೆ, ನಾಗವೇಣಿ ಹೆಗಡೆ ಸನ್ಮಾನ ನೆರವೇರಿಸಿದರು.

ನಂತರ ಯೋಗ ತರಗತಿಯ ಸದಸ್ಯೆಯರು ಹಾಡು, ನೃತ್ಯ, ಭಜನೆ, ಭಕ್ತಿಗೀತೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆ ತೋರಿದರು.

ನಿವೇದಿತಾ ಪ್ರಾರ್ಥಿಸಿದರು. ಜಯಶ್ರೀ ಪಾಟೀಲ್ ಪರಿಚಯಿಸಿದರು. ಹೇಮಾ ನಿರೂಪಿಸಿದರು. ಚಂದ್ರಕಲಾ ಕೋಡಿಯಾರ್ ವಂದಿಸಿದರು. ಯೋಗ ತರಗತಿಯ ಸರ್ವ ಸದಸ್ಯರು ಪಾಲ್ಗೊಂಡರು.