ಭಾರತವು ಒಂದು ಕಾಲದಲ್ಲಿ ಸಮೃದ್ಧ ರಾಷ್ಟ್ರವಾಗಿದ್ದರೂ ನಮ್ಮೊಳಗಿನ ಭಿನ್ನಾಭಿಪ್ರಾಯ ಮತ್ತು ಸ್ವಾರ್ಥ ಮನೋಭಾವದಿಂದ ವಿದೇಶಿ ಆಕ್ರಮಣಕಾರರ ಆಳ್ವಿಕೆಗೆ ಒಳಗಾಯಿತು

ಕೊಪ್ಪಳ: ದೇಶದ ಹಿತಕ್ಕಾಗಿ ಬದುಕುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಉತ್ತಮ ನಾಗರಿಕನಾಗಿ ಜೀವನ ನಡೆಸುವ ಸಂಸ್ಕಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಲಿಸುತ್ತದೆ ಎಂದು ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತದ ಸಹ ಬೌದ್ಧಿಕ ಪ್ರಮುಖ ರಾಮಚಂದ್ರ ಏಡಿಕೆ ಹೇಳಿದರು.

ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷದ ಅಂಗವಾಗಿ ಆಯೋಜಿಸಿದ್ದ ಜಿಲ್ಲೆಯ ವಿವಿಧ ವೃತ್ತಿಯ ಪ್ರಮುಖ ನಾಗರಿಕರ ಗೋಷ್ಠಿಯಲ್ಲಿ ಮಾತನಾಡಿದರು.

ಭಾರತವು ಒಂದು ಕಾಲದಲ್ಲಿ ಸಮೃದ್ಧ ರಾಷ್ಟ್ರವಾಗಿದ್ದರೂ ನಮ್ಮೊಳಗಿನ ಭಿನ್ನಾಭಿಪ್ರಾಯ ಮತ್ತು ಸ್ವಾರ್ಥ ಮನೋಭಾವದಿಂದ ವಿದೇಶಿ ಆಕ್ರಮಣಕಾರರ ಆಳ್ವಿಕೆಗೆ ಒಳಗಾಯಿತು. ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಅನೇಕ ದೇಶಭಕ್ತರಿಗೆ ನಮ್ಮವರೇ ಮಾಡಿದ ದ್ರೋಹ ದೇಶದ ಇತಿಹಾಸದ ಕಹಿ ಅಧ್ಯಾಯವಾಗಿದೆ. ಈ ಪರಿಸ್ಥಿತಿ ಮನಗಂಡು ಡಾ. ಕೇಶವ ಬಲಿರಾಮ ಹೆಡ್ಗೆವಾರ್ ದೇಶದ ಜನರಲ್ಲಿ ರಾಷ್ಟ್ರಭಕ್ತಿ, ಶಿಸ್ತು ಮತ್ತು ಸಂಸ್ಕಾರ ಬೆಳೆಸುವ ಉದ್ದೇಶದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪಿಸಿದರು ಎಂದು ಹೇಳಿದರು.

ಸಂಘವು ಯಾರನ್ನೂ ವಿರೋಧಿಸಲು ಅಥವಾ ದ್ವೇಷಿಸಲು ಹುಟ್ಟಿದ ಸಂಸ್ಥೆಯಲ್ಲ. ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಯೊಂದಿಗೆ ದೇಶಕ್ಕಾಗಿ ಬದುಕುವ ಮನೋಭಾವ ಬೆಳೆಸುವುದು ಸಂಘದ ಧ್ಯೇಯವಾಗಿದೆ. ಸಂಘದ ಪಥಸಂಚಲನ ಮೆರವಣಿಗೆಯಲ್ಲ, ಶಿಸ್ತು ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿದೆ. ಸ್ವಯಂರಕ್ಷಣೆಗಾಗಿ ದಂಡ ಹಿಡಿಯುತ್ತೇವೆ ಹೊರತು ಅದು ಹಿಂಸೆಯ ಸಂಕೇತವಲ್ಲ ಎಂದು ಸ್ಪಷ್ಟಪಡಿಸಿದರು.

ಸಂಘದ ಕುರಿತು ಅಪಪ್ರಚಾರ ಮಾಡುವವರು ಮೊದಲು ಸಂಘದ ಕಾರ್ಯವೈಖರಿ ಅರಿತುಕೊಳ್ಳಬೇಕು. ಶತಮಾನೋತ್ಸವ ಅಂಗವಾಗಿ ಸಂಸ್ಕೃತ ಕುಟುಂಬ, ಸ್ವದೇಶಿ ಆಚರಣೆ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ ಹಾಗೂ ನಾಗರಿಕ ಶಿಷ್ಟಾಚಾರ ಎಂಬ ಪಂಚಪರಿವರ್ತನೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಂಘ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಉತ್ತರ ಪ್ರಾಂತ ಸಂಘಚಾಲಕ ಬಸವರಾಜ ಡಂಬಳ್ ಉಪಸ್ಥಿತರಿದ್ದರು. ಸದ್ಭಾವನಾ ವಿಭಾಗದ ಪ್ರಮುಖ ನಾಗರಾಜ್ ಗುತ್ತೇದಾರ ನಿರೂಪಿಸಿದರು. ಬಂಗಾರ ಶೆಟ್ಟರ್ ಸ್ವಾಗತಿಸಿ, ಬಸವರಾಜ ಪೂಜಾರ ವಂದಿಸಿದರು. ಜಿಲ್ಲೆಯ ವ್ಯಾಪಾರಸ್ಥರು, ವಕೀಲರು, ವೈದ್ಯರು, ಕೃಷಿಕರು ಹಾಗೂ ವಿವಿಧ ಸಮಾಜಗಳ ಗಣ್ಯರು ಗೋಷ್ಠಿಯಲ್ಲಿ ಭಾಗವಹಿಸಿದ್ದರು.