ಕನಕಪುರ: ವಿದ್ಯಾರ್ಥಿಗಳು ಶಾಲಾ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲರ ಸ್ಮರಣೆಯಲ್ಲಿ ಉಳಿಯುವಂತಹ ಸಾಧನೆ ಮಾಡಿ ಪೋಷಕರಿಗೆ ಕೀರ್ತಿ ತರಲು ಇಂದಿನಿಂದಲೇ ತಾವೆಲ್ಲರು ದೃಢಸಂಕಲ್ಪ ಮಾಡಬೇಕೆಂದು ಶಾಲಾ ನಿರ್ದೇಶಕಿ ಐಶ್ವರ್ಯ ಡಿಕೆಎಸ್ ಹೆಗ್ಡೆ ತಿಳಿಸಿದರು.

ಡಿಕೆಎಸ್ ಹಿಲ್ ವ್ಯೂವ್ ಪಬ್ಲಿಕ್ ಶಾಲೆಯಲ್ಲಿ ಸಂಕಲ್ಪ ಉತ್ಸವ ಎಂಬ ಶೀರ್ಷಿಕೆಯಡಿ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಓದಿನಷ್ಟೇ ವ್ಯಕ್ತಿತ್ವ ವಿಕಸನಕ್ಕೂ ಆದ್ಯತೆ ನೀಡಬೇಕು. ಬಾಲ್ಯದಿಂದಲೇ ಸಾಮಾಜಿಕ ಕಾಳಜಿ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರು ಸಮಾಜದ ಜವಾಬ್ದಾರಿಯುತ ಸದಸ್ಯರಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.

ಶಾಲಾ ವಿಜ್ಞಾನ ಪ್ರಯೋಗಾಲಯಕ್ಕೆ ವೈಜ್ಞಾನಿಕ ಉಪಕರಣಗಳನ್ನು ಕೊಡುಗೆ ನೀಡಿದ ನಿಶ್ಚಲ್ ಸ್ಮಾರ್ಟ್ ಲರ್ನಿಂಗ್ ಫೌಂಡೇಶನ್ ಸಂಸ್ಥಾಪಕ ನಿಶ್ಚಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಾಲಾ ವಾರ್ಷಿಕೋತ್ಸವಗಳು ಮಕ್ಕಳ ಪ್ರತಿಭಾ ಅನಾವರಣಗೊಳಿಸಲು ಅವಕಾಶ ದೊರೆತಂತಾಗುತ್ತದೆ ಎಂದು ಹೇಳಿದರು.

ಇದೇ ವೇಳೆ 2024-25ನೇ ಸಾಲಿನ ಸಿಬಿಎಸ್‌ಇ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಹರಿಣಿ, ಬಾನುಪ್ರಿಯ ಹಾಗೂ ಪೋಷಕರನ್ನು ಸನ್ಮಾನಿಸಲಾಯಿತು.

ಶಾಲಾ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಬ್ಯಾಂಡ್ ತಂಡಗಳು ಶಿಸ್ತಿನಿಂದ ಮುಖ್ಯ ಅತಿಥಿಗಳಿಗೆ ತಿಲಕವಿಟ್ಟು ಬ್ಯಾಡ್ಜ್ ತೊಡಿಸಿ ಗೌರವಯುತವಾಗಿ ವೇದಿಕೆಗೆ ಸ್ವಾಗತಿಸಿದರು. ಡಿಸಿಎ ಡಿಕೆಶಿ ತಾಯಿ ಗೌರಮ್ಮ ಕೆಂಪೇಗೌಡ, ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಸದಸ್ಯರು ಹಾಗೂ ವಕೀಲರಾದ ಚಿನ್ನರಾಜು, ಶಾಲಾ ಉಸ್ತುವಾರಿ ರೋಹಿತ್ ದೇಶಪಾಂಡೆ, ಶಾಲಾ ಶೈಕ್ಷಣಿಕ ನಿರ್ದೇಶಕಿ ಬನ್ಸಿ ವಾಸ್ವಾನಿ ಪಾಲ್ಗೊಂಡಿದ್ದರು. ಪ್ರಾಂಶುಪಾಲರಾದ ಅಂತೋಣಿ ಮೇರಿ ಶಾಲಾ ವಾರ್ಷಿಕ ವರದಿ ವಾಚಿಸಿದರು. ಶಾಲಾ ಹಿಂದಿ ಶಿಕ್ಷಕ ರಾಮಕೃಷ್ಣ ಗಣ್ಯರನ್ನು ಸ್ವಾಗತಿಸಿದರು.


ಕೆ ಕೆ ಪಿ ಸುದ್ದಿ 01:

ಕನಕಪುರದಲ್ಲಿ ಡಿಕೆಎಸ್ ಹಿಲ್ ವ್ಯೂವ್ ಪಬ್ಲಿಕ್ ಶಾಲೆಯಲ್ಲಿ ಸಂಕಲ್ಪ ಉತ್ಸವ ಎಂಬ ಶೀರ್ಷಿಕೆಯಡಿ ಶಾಲಾ ವಾರ್ಷಿಕೋತ್ಸವ ಅದ್ಧೂರಿಯಾಗಿ ನೆರವೇರಿತು.