ಸಾರಾಂಶ
ದೇಶದ ವಿವಿಧ ರಾಜ್ಯಗಳಲ್ಲಿ ಎನ್.ಎಚ್.ಎಂ ಸಿಬ್ಬಂದಿಗಳನ್ನು ಖಾಯಂಗೊಳಿಸಿದ ಹಾಗೆ ಕರ್ನಾಟಕ ಸರ್ಕಾರವು ಖಾಯಂಗೊಳಿಸಲು ಮುಂದಾಗಬೇಕು ಮತ್ತು 195 ಆಶಾ ಮೆಂಟರ್ಗಳನ್ನು ಬಿಡುಗಡೆಗೊಳಿಸುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು.
ಧಾರವಾಡ: ಇತ್ತಿಚೆಗೆ ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್.ಎಚ್.ಎಂ. ಯೋಜನೆ ಅಡಿ ಗುತ್ತಿಗೆ ಆಧಾರದ ಮೇಲೆ ಸುಮಾರು ಹತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ 195 ಆಶಾ ಮೆಂಟರ್ಗಳನ್ನು ದಿಢೀರನೇ ಕರ್ತವ್ಯದಿಂದ ಬಿಡುಗಡೆಗೊಳಿಸಿ ಅವರನ್ನು ಬೀದಿಪಾಲು ಮಾಡುವ ಸರ್ಕಾರದ ನಿರ್ಧಾರವನ್ನು ವಿಪ ಸದಸ್ಯ ಎಸ್.ವಿ. ಸಂಕನೂರ ಖಂಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ ಸರ್ಕಾರವು ಕಳೆದ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಎನ್.ಎಚ್.ಎಂ ಸಿಬ್ಬಂದಿಯನ್ನು ಖಾಯಂಗೊಳಿಸುವುದಾಗಿ ಹೇಳಿ ಮತ್ತು ಇತ್ತೀಚೆಗೆ ಅವರು ನಡೆಸಿದ ಹೋರಾಟದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಖುದ್ದಾಗಿ ಹೋಗಿ ಬೆಂಬಲ ನೀಡಿ ಖಾಯಂ ಮಾಡುವುದಾಗಿ ಹೇಳಿದ್ದರು. ಆದರೆ, ಈಗ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸುತ್ತಿರುವುದು ಮೋಸದ ಹಾಗೂ ಅನ್ಯಾಯದ ಸಂಗತಿ.ದೇಶದ ವಿವಿಧ ರಾಜ್ಯಗಳಲ್ಲಿ ಎನ್.ಎಚ್.ಎಂ ಸಿಬ್ಬಂದಿಗಳನ್ನು ಖಾಯಂಗೊಳಿಸಿದ ಹಾಗೆ ಕರ್ನಾಟಕ ಸರ್ಕಾರವು ಖಾಯಂಗೊಳಿಸಲು ಮುಂದಾಗಬೇಕು ಮತ್ತು 195 ಆಶಾ ಮೆಂಟರ್ಗಳನ್ನು ಬಿಡುಗಡೆಗೊಳಿಸುವ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಸಂಕನೂರ ಒತ್ತಾಯಿಸಿದ್ದಾರೆ.