ಭಾರತೀ ಕಾಲೇಜಿನಲ್ಲಿ ಜ.13 ರಂದು ಸಂಕ್ರಾಂತಿ ಸಂಭ್ರಮ: ಡಾ.ಮಹದೇವಸ್ವಾಮಿ

| Published : Jan 12 2025, 01:18 AM IST

ಸಾರಾಂಶ

ಕೆ.ಎಂ.ದೊಡ್ಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎತ್ತಿನಗಾಡಿಗಳೊಂದಿಗೆ ದೇಶಿ ಉಡುಪುಗಳನ್ನು ತೊಟ್ಟು ಪೂಜಾ ಕುಣಿತ, ವೀರಗಾಸೆ, ತಮಟೆ- ನಗಾರಿ, ಡೊಳ್ಳುಕುಣಿತ, ಬೊಂಬೆ ನೃತ್ಯ ಜಾನಪದ ಕಲಾ ತಂಡಗಳೊಂದಿಗೆ ಭಾರತೀ ಕಾಲೇಜಿನ ಆವರಣದವರೆಗೂ ಮೆರವಣಿಗೆ ಮೂಲಕ ಆಗಮಿಸಿ ಕೃಷಿ ಪ್ರದಾನ ಹಬ್ಬ ಸಂಕ್ರಾತಿಯನ್ನು ಸಂಭ್ರಮದಿಂದ ಆಚರಿಸಲಾಗುವುದು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಭಾರತೀ ಎಜುಕೇಷನ್ ಟ್ರಸ್ಟ್‌ನ ವಿವಿಧ ಅಂಗ ಸಂಸ್ಥೆಗಳ ವತಿಯಿಂದ ಜ.13ರಂದು ಸಂಕ್ರಾಂತಿ ಸಂಭ್ರಮ ಮತ್ತು ಭಾರತೀವಾಣಿ ಮಾಸ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್. ಮಹದೇವಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ದೇಶಿ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಮೂಲೆ ಗುಂಪು ಮಾಡುತ್ತಿರುವ ದಿನಗಳಲ್ಲಿ ನಮ್ಮ ಮೂಲ ಸಂಸ್ಕೃತಿ ವಿಜೃಂಭಿಸಲು ವಿದ್ಯಾರ್ಥಿಗಳು ಸಂಕ್ರಾಂತಿ ಮೆರಗು ನೀಡುತಿದ್ದಾರೆ ಎಂದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎತ್ತಿನಗಾಡಿಗಳೊಂದಿಗೆ ದೇಶಿ ಉಡುಪುಗಳನ್ನು ತೊಟ್ಟು ಪೂಜಾ ಕುಣಿತ, ವೀರಗಾಸೆ, ತಮಟೆ- ನಗಾರಿ, ಡೊಳ್ಳುಕುಣಿತ, ಬೊಂಬೆ ನೃತ್ಯ ಜಾನಪದ ಕಲಾ ತಂಡಗಳೊಂದಿಗೆ ಭಾರತೀ ಕಾಲೇಜಿನ ಆವರಣದವರೆಗೂ ಮೆರವಣಿಗೆ ಮೂಲಕ ಆಗಮಿಸಿ ಕೃಷಿ ಪ್ರದಾನ ಹಬ್ಬ ಸಂಕ್ರಾತಿಯನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದರು.

ಹಳ್ಳಿಯಲ್ಲಿ ರೈತರು ಸಂಕ್ರಾತಿ ದಿನವನ್ನು ಹೇಗೆ ಆಚರಿಸುತ್ತಾರೊ ಅದೇ ರೀತಿಯಲ್ಲಿ ಕಬ್ಬನ್ನು ಜೋಡಿಸಿ ,ರೈತ ಬೆಳೆದ ದವಸ, ಧಾನ್ಯಗಳನ್ನು ಇಟ್ಟು ರಾಶಿ ಪೂಜೆ ನೆರವೆರೆಸಿ ಸುಗ್ಗಿ ಹಬ್ಬವನ್ನು ವಿಶೇಷವಾಗಿ ಆಚರಿಸಲು ಚಾಲನೆ ನೀಡಲಾಗುವುದು ಎಂದರು.

ಕಾಲೇಜು ಆವರಣದಲ್ಲಿ ಜನಪದ ಸೊಗಡಿನ 40ಕ್ಕೂ ಹೆಚ್ಚು ಕಾರ್ಯಕ್ರಮ ಹಮ್ಮಿಕೊಂಡಿದ್ದು, 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವರು. ವಿದ್ಯಾರ್ಥಿಗಳೇ ತಯಾರಿ ಮಾಡಿದ ದೇಶಿ ತಿಂಡಿಗಳ ತಯಾರಿ ಮತ್ತು ಮಾರಾಟ ಹಾಗೂ ಪ್ರದರ್ಶನ ನಡೆಯಲಿದೆ. ಜೊತೆಗೆ ರೈತರ ಸಂತೆ, ಸಾಂಸ್ಕೃತಿಕ ಕಾರ್ಯಕ್ರ್ರಮಗಳು ಜರುಗಲಿವೆ ಎಂದರು.

ಸಂಸ್ಥೆಯ ಶಾಲಾ -ಕಾಲೇಜು ವಿದ್ಯಾರ್ಥಿಗಳು ಮತ್ತು ಎಲ್ಲಾ ಅಧ್ಯಾಪಕ ವೃಂದದವರು ದೇಶಿಯ ಉಡುಗೆ ತೋಡುಗೆಗಳನ್ನು ತೊಟ್ಟು ಭಾಗವಹಿಸುವರು. ಜಾನಪದ ಆಟಗಳನ್ನು ಉಳಿಸುವ ನಿಟ್ಟಿನಲ್ಲಿ ಬುಗುರಿ, ಲಗೋರಿ, ಕೋಲಾಟ ಚಿಣ್ಣಿದಾಂಡು ಆಟಗಳ ಸ್ಪರ್ಧೆ ಸೇರಿದಂತೆ ಹಲವು ವೈವಿದ್ಯಮಯ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ವಿಶೇಷವಾಗಿ ಕಜ್ಜಾಯದ ಬುಟ್ಟಿಯನ್ನು ಅದೃಷ್ಟವಂತರಿಗೆ ನೀಡಲಾಗುವುದು. ಇದಲ್ಲದೆ ಭೋಗಿ(ಮಡೆ) ಕಾರ್ಯಕ್ರಮ ಜರುಗಲಿದೆ ಎಂದು ವಿವರಿಸಿದರು.

ಕಾರ್ಯಕ್ರಮವನ್ನು ಬಿಇಟಿ ಟ್ರಸ್ಟ್ ಕಾರ್ಯದರ್ಶಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ, ಬಿಇಟಿ ಅಧ್ಯಕ್ಷ ಮಧು ಜಿ.ಮಾದೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ತುಮಕೂರಿನ ಮರಳೂರು ಶ್ರೀಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ ಭಾರತೀ ವಾಣಿ ಪತ್ರಿಕೆ ಬಿಡುಗಡೆ ಮಾಡುವರು. ಆಹಾರ ಮಳಿಗೆಗೆ ಕಾರ್ಯನಿರ್ವಾಹಕ ಟ್ರಸ್ಟಿ ಆಶಯ್ ಮಧು ಚಾಲನೆ ನೀಡಲಿದ್ದಾರೆ. ಅತಿಥಿಗಳಾಗಿ ಬಿಇಟಿ ಕಾರ್ಯಧ್ಯಕ್ಷ ಬಿ.ಬಸವರಾಜು, ಕಾರ್ಯದರ್ಶಿ ಸಿದ್ದೇಗೌಡ, ಮಾದೇಗೌಡ, ಟ್ರಸ್ಟಿಗಳಾದ ಎಸ್. ಜಯರಾಮು, ಮುದ್ದಯ್ಯ, ಎಸ್. ಬಸವೇಗೌಡ ಭಾಗವಹಿಸಲಿದ್ದಾರೆ ಎಂದರು.

ಸರಿಗಮಪ ಖ್ಯಾತಿಯ ಆಶಾಭಟ್ ಮತ್ತು ತಂಡದಿಂದ ರಸಮಂಜರಿ ಮತ್ತು ಬೆಂಗಳೂರಿನ ಮಹೇಶ್ ನೃತ್ಯ ತಂಡದಿಂದ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ಜರುಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ಎಸ್. ರೇವಣ್ಣ, ಸಂಘಟನಾ ಕಾರ್ಯದರ್ಶಿ ಪ್ರೊ.ಬಿ.ಕೆ.ಕೃಷ್ಣ, ಗ್ರಂಥಪಾಲಕ ಎ.ಎಸ್.ಸಂಜೀವ್ ಸೇರಿದಂತೆ ಹಲವರಿದ್ದರು.