ಸಾರಾಂಶ
ಚಿಕ್ಕಮಗಳೂರು, ಭಕ್ತರು, ದೇವಾಲಯಗಳಿಗೆ ಹೋಗುವುದರಿಂದ ಸಂಸ್ಕಾರದ ಜತೆಗೆ ಧಾರ್ಮಿಕ ಭಾವನೆ ಹೆಚ್ಚಾಗುತ್ತದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.
ಬೆಳವಾಡಿಯಲ್ಲಿ ಚಿಕ್ಕ ಕಲ್ಲೇಶ್ವರ ದೇವಸ್ಥಾನ ಜೀರ್ಣೋದ್ಧಾರ । ಶ್ರೀ ಬಸವೇಶ್ವರ ಸಮುದಾಯ ಭವನ ಪ್ರಾರಂಭೋತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭಕ್ತರು, ದೇವಾಲಯಗಳಿಗೆ ಹೋಗುವುದರಿಂದ ಸಂಸ್ಕಾರದ ಜತೆಗೆ ಧಾರ್ಮಿಕ ಭಾವನೆ ಹೆಚ್ಚಾಗುತ್ತದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.
ಬೆಳವಾಡಿಯಲ್ಲಿ ಚಿಕ್ಕ ಕಲ್ಲೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಶ್ರೀ ಬಸವೇಶ್ವರ ಸಮುದಾಯ ಭವನ ಪ್ರಾರಂಭೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚೆಗೆ ಹಳ್ಳಿಗಿಂತಲೂ ನಗರ ವ್ಯಾಪ್ತಿಯಲ್ಲಿ ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವಿದೆ. ತಮ್ಮ ಬದುಕಿನ ಜಂಜಾಟದ ಜೊತೆಗೆ ಆಧ್ಯಾತ್ಮದ ಕಡೆ ಆಸಕ್ತಿ ವಹಿಸಿದಾಗ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.ದೇವಸ್ಥಾನ ಒಳಗೆ ಹೋದ ತೆಂಗಿನ ಕಾಯಿ, ಬಾಳೇಹಣ್ಣು ಪ್ರಸಾದವಾಗಿ ನೀರು ತೀರ್ಥವಾಗಿ ಹೊರಬಂದಂತೆ ಹಾಗೆ ನಾವು ದೇವರ ದರ್ಶನ ಪಡೆದ ಬಳಿಕ ಸಂಸ್ಕಾರವಂತರಾಗಿ ಹೊರಬರುತ್ತೇವೆ ಎಂದ ಅವರು, ಈ ಉದ್ದೇಶದಿಂದಲೇ ನಮ್ಮ ಪೂರ್ವಜರು ದೇವಾಲಯಗಳ ನಿರ್ಮಾಣದ ಮೂಲಕ ಜನರಲ್ಲಿ ಭಕ್ತಿ ಬಿತ್ತಲು ಸಹಕರಿಸಿದ್ದರು ಎಂದರು.
ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ಬಳ್ಳ ಎಂಬಂತೆ ಸರ್ವರ ಸೇವೆಯ ಪರಿಶ್ರಮದಿಂದ ಮಾತ್ರ ದೇವಾಲಯ ನಿರ್ಮಾಣ ಸಾಧ್ಯ. ಈ ಸುಂದರ ದೇವಾಲಯ ಮತ್ತು ಸಮುದಾಯ ಭವನ ಉದ್ಘಾಟನೆಗೆ ಬಂದಿರುವುದು ಸಂತಸ ತಂದಿದೆ. ಈ ಅವಕಾಶ ಕಲ್ಪಿಸಿದ ಮತದಾರ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದ ಹೇಳಿದರು.ದೇವಾಲಯಗಳ ನಿರ್ಮಾಣ ಮತ್ತು ಜೀರ್ಣೋದ್ಧಾರದಿಮದ ನೆಮ್ಮದಿ ಇದೆ. ದೇವಾಲಯ ನಿರ್ಮಾಣ ಮಾಡುವುದು ದೊಡ್ಡದಲ್ಲ, ನಿತ್ಯವೂ ಅಲ್ಲಿ ಪೂಜೆ ಕೈಂಕರ್ಯ ನಡೆಯಬೇಕು. ಇದಕ್ಕೆ ಹೊಸದಾಗಿ ಅರ್ಚಕ ನೇಮಕವಾಗಬೇಕು. ಇಂದು ಎಲ್ಲರೂ ವಿದ್ಯಾವಂತರಾಗುತ್ತಿರುವುದರಿಂದ ಪೌರೋಹಿತ್ಯ ಮಾಡಲು ಯಾರೂ ಮುಂದೆ ಬರುತ್ತಿಲ್ಲ ಎಂದು ವಿಷಾಧಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ತನ್ನಂತೆ ಪರರ ಬಗೆದೊಡೆ ಕೈಲಾಸ ಎಂದು ಬಸವಣ್ಣ ಹೇಳಿದ್ದಾರೆ. ನಮ್ಮೊಳಗೆ ಇರದ ದೇವರನ್ನು ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಅದಕ್ಕಾಗಿ ಉಳ್ಳವರು ಶಿವಾಲಯ ಮಾಡುವರು ನಾನೇನ ಮಾಡಲಿ ಬಡವನಯ್ಯ, ಎನ್ನಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ ಎಂಬಂತೆ ನಮ್ಮೊಳಗೆ ಭಗವಂತನ ಕಾಣುವ ಬಗೆಯನ್ನು ಸರಳವಾಗಿ ತೋರಿಸುವ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.ಅಂತರಂಗದಲ್ಲಿ ಭಕ್ತಿ ಇದ್ದರೆ ಮಾತ್ರ ದೇವರ ವಿಗ್ರಹದ ಮುಂದೆ ನಿಂತು ಸಂಪರ್ಕ ಸಾಧಿಸಲು ಸಾಧ್ಯ. ಅಂತರಂಗದ ಭಕ್ತಿ ವಿದ್ಯುಚ್ಚಕ್ತಿ ಹಾಗೆ ಭಗವಂತನೊಂದಿಗೆ ಸೇರಲು ಸಂಪರ್ಕ ಸೇತುವೆಯಾಗುತ್ತದೆ. ಭಕ್ತಿ ಇಲ್ಲದಿದ್ದರೆ ಭಗವಂತನನ್ನು ಕಾಣಲು ಸಾಧ್ಯವಿಲ್ಲ ಎಂದರು.ಭಗವಂತನ ಕಾಣಲು ದೇವಾಲಯಗಳು ಪೂರಕ. ದೇವರು ಎಲ್ಲೆಡೆ ಇದ್ದಾನೆ ಎಂಬುದಕ್ಕೆ ದೇವಾಲಯಗಳು ಸಾಕ್ಷಿ ಯಾಗಿವೆ. ಸಂಸ್ಕಾರ ಮತ್ತು ಸಂಸ್ಕೃತಿ ಮರೆತರೆ ಅಧಃಪತನವಾಗುತ್ತದೆ. ನಮ್ಮ ನಾಶಕ್ಕೆ ಕಾರಣವಾಗುವುದರಿಂದ ಸಂಸ್ಕಾರ, ಸಂಸ್ಕೃತಿ ಉಳಿಸಿಕೊಂಡು ದೇವಾಲಯದ ಪರಂಪರೆ ಬೆಳೆಸೋಣ ಎಂದು ಕರೆ ನೀಡಿದರು.ದೇವಾಲಯ ಸಮಾಜವನ್ನು ಒಟ್ಟುಗೂಡಿಸಲು ಪ್ರೇರಣೆಯಾಗಲಿ, ದೇವರು ಯಾರಿಗೂ ತಾರತಮ್ಯ ಮಾಡಿಲ್ಲ, ಯಾವುದೇ ಭೇದಭಾವ ಮಾಡದೆ ಸಮಾಜ ಮತ್ತು ಗ್ರಾಮವನ್ನು ಒಟ್ಟುಗೂಡಿಸಲು ದೇವಾಲಯಗಳು ಸಹಕಾರಿ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಮನೆಗೊಂದು ತಾಯಿ, ಊರಿಗೊಂದು ದೇವಾಲಯ ಇರಬೇಕು. ಹಾಗೆಯೇ ಭಾರತೀಯ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಜನರಲ್ಲಿ ಧಾರ್ಮಿಕ ಭಾವನೆ ಬಿತ್ತಲು ದೇವಾಲಯಗಳು ಪೂರಕ ಎಂದರು.ಕಾರ್ಯಕ್ರಮದ ಸಾನಿಧ್ಯವನ್ನು ಬಸವತತ್ವ ಪೀಠದ ಡಾ.ಶ್ರೀ ಬಸವ ಮುರುಳಸಿದ್ದ ಸ್ವಾಮಿ, ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಮಹಾ ಸ್ವಾಮಿ, ಸಿಂದಿಗೆರೆ ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಮಹಾ ಸ್ವಾಮಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸಾಹಿತಿ ಬಾರಂದೂರು ಪ್ರಕಾಶ್, ಗ್ರಾಪಂ ಅಧ್ಯಕ್ಷೆ ಕಾವೇರಮ್ಮ ಬಸವರಾಜ್, ಉಪಾಧ್ಯಕ್ಷೆ ಭಾಗ್ಯ ಚಂದ್ರಶೇಖರ್, ವೀರಶೈವ ಸಮಾಜದ ಅಧ್ಯಕ್ಷ ಎಂ.ಎಸ್ ನಿರಂಜನ್, ಡಾ. ಎಸ್. ವಿನಾಯಕ್ ಸಿಂದಗೆರೆ, ಶಂಕರೇ ಗೌಡ, ಬೀರೇಗೌಡ, ಜಿಪಂ ಮಾಜಿ ಸದಸ್ಯ ರವೀಂದ್ರ, ತಾಪಂ ಮಾಜಿ ಅಧ್ಯಕ್ಷ ಬಸವರಾಜು, ವಿರೂಪಾಕ್ಷ, ಪರಮೇಶ್ವರಪ್ಪ ಭಾಗವಹಿಸಿದ್ದರು. 13 ಕೆಸಿಕೆಎಂ 2ಚಿಕ್ಕಮಗಳೂರು ತಾಲೂಕಿನ ಬೆಳವಾಡಿಯಲ್ಲಿ ಚಿಕ್ಕ ಕಲ್ಲೇಶ್ವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಶ್ರೀ ಬಸವೇಶ್ವರ ಸಮುದಾಯ ಭವನ ಪ್ರಾರಂಭೋತ್ಸವವನ್ನು ಡಾ.ಶ್ರೀ ಬಸವ ಮುರುಳಸಿದ್ದ ಸ್ವಾಮೀಜಿ ಉದ್ಘಾಟಿಸಿದರು. ಎಚ್.ಡಿ. ತಮ್ಮಯ್ಯ, ಸಿ.ಟಿ. ರವಿ, ಗಾಯತ್ರಿ ಶಾಂತೇಗೌಡ ಇದ್ದರು.