ಸಾರಾಂಶ
ಬನಹಟ್ಟಿಯ ವೃಕ್ಷ ಉದ್ಯಾನದಲ್ಲಿ ಅರಣ್ಯ ಇಲಾಖೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಡಲಾಯಿತು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಪರಿಸರ ದಿನಾಚರಣೆ ಕೇವಲ ಒಂದು ದಿನದ ಆಡಂಬರದ ಆಚರಣೆಯಾಗದೆ, ಅದು ನಿತ್ಯದ ಕಾಯಕವಾಗಬೇಕು. ಗಿಡಮರಗಳನ್ನು ನೆಡುವುದರ ಜೊತೆಗೆ ಅವುಗಳ ರಕ್ಷಣೆಯಲ್ಲಿಯೂ ನಾವು ತೊಡಗಬೇಕು. ಅಂದಾಗ ನಿತ್ಯ ನೂತನ ಪರಿಶುದ್ಧ ಪರಿಸರ ನಮ್ಮದಾಗುತ್ತದೆ. ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಬನಹಟ್ಟಿಯ ದಿವಾಣಿ ನ್ಯಾ.ಸುಷ್ಮಾ ಟಿ.ಸಿ. ತಿಳಿಸಿದರು.ಬನಹಟ್ಟಿಯ ವೃಕ್ಷ ಉದ್ಯಾನದಲ್ಲಿ ಅರಣ್ಯ ಇಲಾಖೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜೀವ ಸಂಕುಲ ಸಂರಕ್ಷಣೆಗಾಗಿ ಪ್ರತಿಯೊಬ್ಬರು ಸಸಿ ನೆಟ್ಟು ಅದರ ಪೋಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಜಮಖಂಡಿ ವಲಯ ಅರಣ್ಯಾಧಿಕಾರಿ ಪವನ ಕುರಣಿಂಗ ಮಾತನಾಡಿ, ಆರ್ಥಿಕ ಅಭಿವೃದ್ಧಿ ಜೊತೆ ಪರಿಸರ ಸಂರಕ್ಷಣೆ ಅಗತ್ಯವಿದ್ದು, ಪ್ರತಿಯೊಬ್ಬರು ಮುಂದಿನ ಭವಿಷ್ಯದ ದಿನಗಳಲ್ಲಿ ಮನುಕುಲದ ಸಂರಕ್ಷಣೆಗೆ ಅರಣ್ಯ ರಕ್ಷಣೆಯಲ್ಲಿ ತೊಡಗಬೇಕು ಎಂದರು.ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ ನಾವಿ, ಮಹೇಶ ಜಿ, ಗಸ್ತು ಅರಣ್ಯ ಅಧಿಕಾರಿಗಳು, ಮಹಾಂತೇಶ ಚಂಡಕಿ, ಲಕ್ಷ್ಮಣ ಪಾಟೀಲ, ವಕೀಲರಾದ ಸುಜಾತಾ ನಿಡೋಣಿ, ವರ್ಧಮಾನ ಕೋರಿ, ಎಸ್.ಜಿ.ಸಲಬನ್ನವರ, ಜುಬೇರ ಖಲಿಪ, ಕಾರ್ತಿಕ ಭೂತಿ, ಮಹೇಶ ಕೆಂದೂಳಿ, ಬಸವರಾಜ ಕುಂಬಾರ ಮುಂತಾದವರಿದ್ದರು.