ಸತ್ಯ ಸಾಯಿಗೆ ಶೀಘ್ರ ಅಂರಾ ವಿವಿ ಸ್ಥಾನಮಾನ

| Published : Oct 31 2025, 02:15 AM IST

ಸಾರಾಂಶ

ಸನಾತನ ಸಂಸ್ಕೃತಿಯ ದೀಪ ಮತ್ತೆ ಪ್ರಜ್ವಲವಾಗುತ್ತಿದೆ ಎನ್ನುವುದನ್ನು ಸತ್ಯ ಸಾಯಿ ಗ್ರಾಮದಲ್ಲಿ ಕಾಣುತ್ತಿದ್ದೇವೆ. ಸಾಂಸ್ಕೃತಿಕ ದೀಪವು ಬೆಳಗುತ್ತಿರುವ ಕಾರಣದಿಂದಲೇ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ದೇವರಂಥ ಮನುಷ್ಯರು ಇರುತ್ತಾರೆ ಎನ್ನುವುದಕ್ಕೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರೇ ಸಾಕ್ಷಿ. ಅವರು ಮಾಡುತ್ತಿರುವ ಸೇವೆಗಳು ಕಣ್ಣೆದುರು ಕಾಣುತ್ತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸತ್ಯ ಸಾಯಿ ವಿಶ್ವವಿದ್ಯಾಲಯವು ಕರ್ನಾಟಕದಲ್ಲಿ ಮಾತ್ರವಲ್ಲದೆ ತನ್ನ ಸೇವೆಯನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಲಿದೆ. ಶೀಘ್ರದಲ್ಲಿಯೇ ಇದು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಆಗಲಿದೆ ಎಂದು ಸದ್ಗುರು ಶ್ರೀ ಮಧುಸೂಧನ ಸಾಯಿ ಹೇಳಿದರು.

ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ''''ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಉತ್ಸವ''''ದ 74ನೇ ದಿನ ಆಶೀರ್ವಚನ ನೀಡಿದ ಸದ್ಗುರು, ನಮ್ಮ ವಿಶ್ವವಿದ್ಯಾಲಯವು ಮುಂದಿನ ದಿನಗಳಲ್ಲಿ ಆಫ್ರಿಕಾ ಮತ್ತು ಪೂರ್ವ ದೇಶಗಳಲ್ಲಿ ಅಗತ್ಯವಿರುವ ಮಕ್ಕಳಿಗೆ ಶಿಕ್ಷಣವನ್ನು ಒದಗಿಸಲಿದೆ ಎಂದರು.

ಸನಾತನ ಸಂಸ್ಕೃತಿಯ ದೀಪ

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸನಾತನ ಸಂಸ್ಕೃತಿಯ ದೀಪ ಮತ್ತೆ ಪ್ರಜ್ವಲವಾಗುತ್ತಿದೆ ಎನ್ನುವುದನ್ನು ಸತ್ಯ ಸಾಯಿ ಗ್ರಾಮದಲ್ಲಿ ಕಾಣುತ್ತಿದ್ದೇವೆ. ಸಾಂಸ್ಕೃತಿಕ ದೀಪವು ಬೆಳಗುತ್ತಿರುವ ಕಾರಣದಿಂದಲೇ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ದೇವರಂಥ ಮನುಷ್ಯರು ಇರುತ್ತಾರೆ ಎನ್ನುವುದಕ್ಕೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರೇ ಸಾಕ್ಷಿ. ಅವರು ಮಾಡುತ್ತಿರುವ ಸೇವೆಗಳು ಕಣ್ಣೆದುರು ಕಾಣುತ್ತಿದೆ ಎಂದರು.

ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ಸತ್ಯ ಸಾಯಿ ಆಸ್ಪತ್ರೆಯಲ್ಲಿ ನೀಡುವ ಚಿಕಿತ್ಸೆಗೆ ಒಂದು ರುಪಾಯಿ ಕೂಡ ಪಡೆಯುವುದಿಲ್ಲ. ಇಲ್ಲಿ ಎಲ್ಲ ಸೇವೆಗಳೂ ಉಚಿತವಾಗಿ ಸಿಗುತ್ತವೆ ಎಂದು ಹೇಳಿದರು.

ಸಾಧಕರಿಗೆ, ದಾನಿಗಳಿಗೆ ಸದ್ಗುರುಗಳಿಂದ ಪುರಸ್ಕಾರ

ಇಂಡಿಯಾಸ್ಪೊರಾ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಎಂ.ಆರ್.ರಂಗಸ್ವಾಮಿ ಮತ್ತು ಎಚ್‌ಡಿಎಫ್‌ಸಿ ಅಸೆಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವನೀತ್ ಮುನೋಟ್ ಅವರಿಗೆ ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಅದಮ್ಯ ಚೇತನ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಲಾಯಿತು. .