ಸಾರಾಂಶ
ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ನೂತನ ಹೆಲಿಕಾಪ್ಟರ್ ಅನ್ನು ಖರೀದಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ನೂತನ ಹೆಲಿಕಾಪ್ಟರ್ ಅನ್ನು ಖರೀದಿಸಿದ್ದಾರೆ.ಬೆಂಗಳೂರು ಸಮೀಪದ ಜಕ್ಕೂರು ಏರೋಡ್ರೋಮ್ನಲ್ಲಿ ಶುಕ್ರವಾರ ನೂತನ ಹೆಲಿಕಾಪ್ಟರ್ ಪರಿಶೀಲಿಸಿದ ಸಚಿವರು, ಶೀಘ್ರವೇ ಇದು ನಮ್ಮೊಂದಿಗೆ ಹಾರಾಟಕ್ಕೆ ಸಿದ್ಧವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸ್ವಂತ ಹೆಲಿಕಾಪ್ಟರ್ ಹೊಂದಿರುವ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಅಪ್ಪಟ ಶಿಷ್ಯರಾಗಿದ್ದು, ರಾಜ್ಯದಲ್ಲಿ ಅಹಿಂದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ರಾಜ್ಯಾದ್ಯಂತ ಪಕ್ಷ ಸಂಘಟನೆ ಸೇರಿದಂತೆ 2028ರ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಹೆಲಿಕಾಪ್ಟರ್ ಅನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನೂತನ ಹೆಲಿಕಾಪ್ಟರ್ ಪರಿಶೀಲಿಸುತ್ತಿರುವ ಸಚಿವರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ನೂತನ ಹೆಲಿಕಾಪ್ಟರ್ ಪರಿಶೀಲಿಸಿದ ಸಚಿವರ ಜೊತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್ ಹುನಮಣ್ಣರ, ಅಲಿ ಗೊರವನಕೋಲ್ ಇದ್ದರು.ಹೆಲಿಕಾಪ್ಟರ್ ವಿಶೇಷತೆಗಳೇನು:
ಇತ್ತೀಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಅತ್ಯಾಧುನಿಕ ಡಬಲ್ ಎಂಜಿನ್ ಹೊಂದಿರುವ ಹೆಲಿಕಾಪ್ಟರ್ ಇದಾಗಿದ್ದು, ಐದು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್ ಅನ್ನು ಸಾಗಿಸುವ ವ್ಯವಸ್ಥೆ ಹೊಂದಿದೆ.ಈ ಹೆಲಿಕಾಪ್ಟರ್ ಎತ್ತರದಿಂದಲೂ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಸಾಮರ್ಥ್ಯ ಹೊಂದಿದೆ. ಚಾಪರ್ ಶಕ್ತಿ ಹೀರಿಕೊಳ್ಳುವ ಆಸನಗಳನ್ನು ಹೊಂದಿದೆ. ಇದು ಅಪಘಾತದ ಸಂದರ್ಭದಲ್ಲಿ ಅದರ ಪ್ರಯಾಣಿಕರ ಸುರಕ್ಷತೆ ಖಚಿತಪಡಿಸುತ್ತದೆ. ಸುಧಾರಿತ ವೈರ್ಲೆಸ್ ಸಂವಹನ ವ್ಯವಸ್ಥೆಯನ್ನು ಸಹ ಹೊಂದಿದೆ.