ಕರಾವಳಿ ಉತ್ಸವದಲ್ಲಿ ಹಾಡು ಹೇಳಿದ ಸತೀಶ ಸೈಲ್
ಕನ್ನಡ ಹಾಡುಗಳ ರಸದೌತಣ ಉಣಬಡಿಸಿದ ಗುರುಕಿರಣ್ಕನ್ನಡಪ್ರಭ ವಾರ್ತೆ ಕಾರವಾರ
ಇಲ್ಲಿನ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವ-2025ರ ವೇದಿಕೆಯಲ್ಲಿ ಮಂಗಳವಾರ ರಾತ್ರಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ರಸಮಂಜರಿ ಕಾರ್ಯಕ್ರಮ ಜನಸಾಗರವನ್ನೇ ಸೆಳೆದಿತ್ತು.ಕಾರ್ಯಕ್ರಮದ ನಡುವೆ ಗಾಯಕ ಗುರುಕಿರಣ್ ಶಾಸಕ ಸತೀಶ್ ಸೈಲ್ ಅವರನ್ನು ವೇದಿಕೆಗೆ ಬರಮಾಡಿಕೊಂಡಿದ್ದು, ಇತ್ತೀಚೆಗೆ ಜನ್ಮದಿನ ಆಚರಿಸಿಕೊಂಡಿದ್ದಕ್ಕೆ ಶಾಸಕರಿಗೆ ಶುಭಾಶಯ ಕೋರಿದರು. ಬಳಿಕ ಹಾಡು ಹಾಡುವಂತೆ ಪ್ರೀತಿಯಿಂದ ಆಹ್ವಾನಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಹಿಂಜರಿಯದೆ ಮೈಕ್ ಹಿಡಿದು ವೇದಿಕೆಯಲ್ಲಿ ಗಾಯಕಿಯೊಂದಿಗೆ ಹಾಡು ಹೇಳಿದರು.
ಜೋಗಿ ಚಿತ್ರದ ಎಲ್ಲೋ ಜೋಗಪ್ಪ ನಿನ್ನ ಅರಮನೆ ಹಾಡಿನೊಂದಿಗೆ ಕಾರ್ಯಕ್ರಮ ಆರಂಭಿಸಿದ ಗುರುಕಿರಣ್ ಕಾರವಾರದಲ್ಲೇ ನನ್ನ ಅರಮನೆ ಎಂದು ಹಾಡುವ ಮೂಲಕ, ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಬಳಿಕ ಸುದೀರ್ಘ ಎರಡೂವರೆ ಗಂಟೆಗಳ ಕಾಲ ಹತ್ತಾರು ಕನ್ನಡ ಚಿತ್ರಗೀತೆಗಳನ್ನು ಹಾಡುವ ಮೂಲಕ ಸುಮಧುರ ಗೀತೆಗಳನ್ನು ಕಲಾರಸಿಕರಿಗೆ ಉಣಬಡಿಸಿದರು. ಇದೇ ವೇಳೆ ಕೊಂಕಣಿಯಲ್ಲಿ ಮಾತನಾಡಿದ ಅವರು ಕಾಲೇಜು ದಿನಗಳಲ್ಲಿ ಕಾರವಾರದಲ್ಲಿ ಕಾರ್ಯಕ್ರಮ ನೀಡಿದ್ದನ್ನು ನೆನಪಿಸಿಕೊಂಡು ಕರಾವಳಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಗುರುಕಿರಣ್ ಅವರಿಗೆ ಖ್ಯಾತ ಗಾಯಕಿ ಅನುರಾಧಾ ಭಟ್ ಸೇರಿದಂತೆ ಯುವ ಗಾಯಕರು ಸಾಥ್ ನೀಡಿದ್ದು, ಅವರ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ನೃತ್ಯ ತಂಡಗಳು ನೆರೆದಿದ್ದವರನ್ನು ರಂಜಿಸಿದವು. ಅಲ್ಲದೇ ಗುರುಕಿರಣ್ ಅವರ ಹಾಡಿಗೆ ಯುವಕ-ಯುವತಿಯರು ಕುಣಿದು ಕುಪ್ಪಳಿಸುವ ಮೂಲಕ ಕಾರ್ಯಕ್ರಮವನ್ನು ಎಂಜಾಯ್ ಮಾಡಿದರು.ಕರಾವಳಿ ಉತ್ಸವದಲ್ಲಿ ಇಂದು:
ಕರಾವಳಿ ಉತ್ಸವದ ಅಂಗವಾಗಿ ಡಿ.25ರಂದು ಮಧ್ಯಾಹ್ನ 3 ಗಂಟೆಗೆ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ಗಾಳಿಪಟ ಮತ್ತು ಮರಳು ಕಲೆ, ಸಂಜೆ 5.30ರಿಂದ ನೃತ್ಯಾಮೃತ ಕಲಾ ಕೇಂದ್ರದಿಂದ ನೃತ್ಯ, ಮೇದಾ ಭಟ್ಟ ಅವರಿಂದ ಶಾಸ್ತ್ರೀಯ ಸಂಗೀತ, ನಾಣ್ಯರಾಣಿ ಭರತನಾಟ್ಯ ನೃತ್ಯ ಕಲಾ ಕೇಂದ್ರ ಸಮಿತಿಯ ನಾಗವೇಣಿ ಎಂ. ಹೆಗಡೆ ಅವರಿಂದ ಭರತನಾಟ್ಯ, ವೈಶಾಲಿ ಮಾಂಜ್ರೇಕರ ಅವರಿಂದ ಸಂಗೀತ, ಸ್ಟಾರ್ಚಾಯ್ಸ್ ನೃತ್ಯ ಕಲಾ ತಂಡದಿಂದ ನೃತ್ಯ ನಡೆಯಲಿದೆ. ನಂತರ ರಫ್ತಾರ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.