ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಾಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದ್ದು, ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಿ ಅಧಿಕಾರಿಗಳನ್ನು ತಹ ಬದಿಗೆ ತರದೇ ಮೆದು ಧೋರಣೆ ತೋರಿರುವ ತಹಸೀಲ್ದಾರ್ ಸುರೇಶಾಚಾರ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು.
ಕನ್ನಡಪ್ರಭ ವಾರ್ತೆ ಟಿ.ನರಸೀಪುರ
ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಾಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದ್ದು, ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಿ ಅಧಿಕಾರಿಗಳನ್ನು ತಹ ಬದಿಗೆ ತರದೇ ಮೆದು ಧೋರಣೆ ತೋರಿರುವ ತಹಸೀಲ್ದಾರ್ ಸುರೇಶಾಚಾರ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ-ಹಸಿರುಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಸತೀಶ್ ಒತ್ತಾಯಿಸಿದ್ದಾರೆ.ಪಟ್ಟಣದ ಕರ್ನಾಟಕ ರಾಜ್ಯ ರೈತ ಸಂಘ-ಹಸಿರುಸೇನೆ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಸಂಘಟನೆಯು ತಾಲೂಕಿನ 5 ಹೋಬಳಿಗಳ ರೈತ ಸಮಸ್ಯೆಗಳ ಬಗ್ಗೆ ದೀರ್ಘವಾಗಿ ಅಧ್ಯಯನಮಾಡಿ ಮಾಹಿತಿ ಕಲೆ ಹಾಕಿದೆ. ತಾಲೂಕು ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಸಂಪೂರ್ಣವಾಗಿ ವಿಫಲವಾಗಿರುವುದು ಗಮನಕ್ಕೆ ಬಂದಿದೆ. ತಾಲೂಕು ಆಡಳಿತ ರೈತರ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡಿಲ್ಲ, ತಹಸೀಲ್ದಾರ್ ಅವರ ಕೈ ಕೆಳಗೆ ಕೆಲಸ ಮಾಡುವ ಅಧಿಕಾರಿಗಳು ರೈತರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ನಿರ್ಲಕ್ಷ್ಯ ಭಾವನೆ ತೋರುತ್ತಿದ್ದಾರೆ ಎಂದು ದೂರಿದರು.ಭೂ ಸರ್ವೆ ಕಾರ್ಯದಲ್ಲಿ ವಿಳಂಬ, ಅಳತೆಗಳಲ್ಲಿ ತಪ್ಪುಗಳು, ದಾಖಲೆಗಳ ಸರಿಯಾದ ನವೀಕರಣವಾಗದಿರುವುದು ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಇದರಿಂದ ರೈತರು ಮತ್ತು ಜಮೀನು ಮಾಲೀಕರು ಅನಾವಶ್ಯಕ ತೊಂದರೆ ಅನುಭವಿಸುತ್ತಿದ್ದಾರೆ. ಸರ್ವೆ ಸಮಯಕ್ಕೆ ಆಗದೇ ಇರುವುದರಿಂದ ಜಮೀನು ಗಡಿಭಾಗದ ವಿವಾದಗಳು ಹೆಚ್ಚಾಗುತ್ತಿವೆ. ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ತಪ್ಪು ದಾಖಲೆಗಳು ಸೃಷ್ಟಿಯಾಗುತ್ತಿವೆ,
ಇನ್ನೂ ಕೆಲವು ಜನರು, ಅರ್ಜಿಗಳನ್ನು ಸಲ್ಲಿಸಿದ ಬಳಿಕ ತಿಂಗಳಗಟ್ಟಲೆ ಕಾಯಬೇಕಾಗುತ್ತಿದೆ. ಕೆಲವು ಕಡೆ ಮಧ್ಯವರ್ತಿಗಳ ಹಸ್ತಕ್ಷೇಪದಿಂದ ಪಾರದರ್ಶಕತೆ ಕುಂದುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ ಎಂದು ಅವರು ಆರೋಪಿಸಿದರು.ತಾಲೂಕಿನ ಸಾರ್ವಜನಿಕ ಹಾಗೂ ರೈತರ ಸಮಸ್ಯೆಗಳನ್ನು ತಕ್ಷಣ ಪರಿಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ, ರಸ್ತೆ ತಡೆ ಸೇರಿದಂತೆ ವಿವಿಧ ರೀತಿಯ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಗೌರವಾಧ್ಯಕ್ಷ ಮಹದೇವಸ್ವಾಮಿ, ತಾಲೂಕು ಅಧ್ಯಕ್ಷ ಮಹದೇವ, ತಾಲೂಕು ಗೌರವಾಧ್ಯಕ್ಷ ಮಹದೇವಸ್ವಾಮಿ, ಮಹಿಳಾ ಅಧ್ಯಕ್ಷೆ ಶ್ವೇತಾ, ನಂಜನಗೂಡು ಘಟಕದ ಉಪಾಧ್ಯಕ್ಷ ಮಹದೇವನಾಯಕ, ತಾಲೂಕು ಪ್ರಧಾನಕಾರ್ಯದರ್ಶಿ ಶಿವನಂಜು, ಟೌನ್ ಅಧ್ಯಕ್ಷ ಶಾಂತರಾಜು, ತಾಲೂಕು ಉಪಾಧ್ಯಕ್ಷ ಸೋಮಣ್ಣ, ಕಸಬಾ ಹೋಬಳಿ ಅಧ್ಯಕ್ಷ ಪ್ರಕಾಶ್, ಮೂಗೂರು ಹೋಬಳಿ ಅಧ್ಯಕ್ಷ ಶಾಂತರಾಜು, ಸೋಸಲೆ ಹೋಬಳಿ ಅಧ್ಯಕ್ಷ ಮಹೇಶ್, ಬನ್ನೂರು ಹೋಬಳಿ ಅಧ್ಯಕ್ಷ ಜಗದೀಶ್, ತಲಕಾಡು ಹೋಬಳಿ ಅಧ್ಯಕ್ಷ ಚೆಲುವರಾಜು, ತಾಲೂಕು ಸಹ ಕಾರ್ಯದರ್ಶಿ ರಾಜೇಂದ್ರ, ರಾಮಸ್ವಾಮಿ, ಶಂಕರೇಗೌಡ, ಲೋಕೇಶ್, ಸಿದ್ದರಾಜು ಇದ್ದರು.