ಬಂಗಾರದ ಕೋಳಿ ಉಳಿಸಿಕೊಳ್ಳಿ: ಸಚಿವ ಜೋಶಿ ಸಲಹೆ

| Published : Aug 23 2025, 02:00 AM IST

ಬಂಗಾರದ ಕೋಳಿ ಉಳಿಸಿಕೊಳ್ಳಿ: ಸಚಿವ ಜೋಶಿ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ಸೌಹಾರ್ದ ಸಹಕಾರಿ ಚಳವಳಿಯ ರಜತ ಮಹೋತ್ಸವ’ ಸಮಾರಂಭದಲ್ಲಿ ಕೇಂದ್ರ ಪ್ರಹ್ಲಾದ್‌ ಜೋಶಿ ಅವರು ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಹಕಾರ ಕ್ಷೇತ್ರ ಬಂಗಾರದ ಮೊಟ್ಟೆ ಇಡುವ ಕೋಳಿ. ಸಹಕಾರಿಗಳು ಜನರ ನಂಬಿಕೆ. ವಿಶ್ವಾಸ ಉಳಿಸಿಕೊಳ್ಳಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಹ್ಲಾದ್‌ ಜೋಶಿ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸೌಹಾರ್ದ ಸಹಕಾರಿ ಕಾಯ್ದೆ ಹಾಗೂ ಸೌಹಾರ್ದ ಸಹಕಾರಿ ಚಳವಳಿಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಸಹಕಾರ ಕ್ಷೇತ್ರಕ್ಕೆ ಶತಮಾನದ ಇತಿಹಾಸವಿದೆ. ಸಹಕಾರ ಕ್ಷೇತ್ರ ಬಂಗಾರದ ಮೊಟ್ಟೆ ಇಡುವ ಕೋಳಿಯಾಗಿದ್ದು, ಸರಿಯಾಗಿ ಉಪಯೋಗಿಸಿಕೊಂಡರೆ ಬಂಗಾರದ ಮೊಟ್ಟೆ ಸಿಗುತ್ತಲೇ ಇರುತ್ತದೆ. ಆದರೆ ಬಂಗಾರದ ಆಸೆಗೆ ಬಿದ್ದರೆ ಕೋಳಿಯೂ ಇರುವುದಿಲ್ಲ. ಮೊಟ್ಟೆಯೂ ಇರುವುದಿಲ್ಲ. ಆದ್ದರಿಂದ ಸಹಕಾರಿಗಳು ಜನರ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಳ್ಳಬೇಕು ಎಂದು ಸೂಚ್ಯವಾಗಿ ಹೇಳಿದರು.

ಬ್ಯಾಂಕಿಂಗ್‌ ವ್ಯವಸ್ಥೆಗಿಂತ ಮೊದಲು ಜನರು ಸಹಕಾರ ಕ್ಷೇತ್ರವನ್ನೇ ಅವಲಂಬಿಸಿದ್ದರು. 1914-15 ರಲ್ಲಿ ರಾಜ್ಯದಲ್ಲಿ 725 ಸಹಕಾರಿ ಸಂಘಗಳಲ್ಲಿ 50 ಸಾವಿರಕ್ಕಿಂತ ಅಧಿಕ ಸದಸ್ಯರಿದ್ದರು. ಆ ಕಾಲದಲ್ಲೇ 30 ಲಕ್ಷ ರು. ಬಂಡವಾಳ ಹೂಡಿಕೆ ಮಾಡಿದ್ದರು. 725 ಸಂಘಗಳಲ್ಲಿ 621 ವ್ಯವಸಾಯ ಸಹಕಾರ ಸಂಘಗಳಾಗಿದ್ದವು. ಇವೆಲ್ಲವೂ ಕೃಷಿ ಮೂಲವಾಗಿದ್ದು ಹಳ್ಳಿಗಳಲ್ಲಿದ್ದವು. ಇದು ಈ ಮಣ್ಣಿಗೆ ಮಾಡಿದ ಸೇವೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರಾದ ಅರಗ ಜ್ಞಾನೇಂದ್ರ, ಬಿ.ಆರ್‌.ಪಾಟೀಲ್‌, ಸುನೀಲ್‌ ಪಾಟೀಲ್‌, ಜಗದೀಶ್‌ ಗುಡಗುಂಟಿ, ಯಶಪಾಲ್‌ ಸುವರ್ಣ, ಮಹಂತೇಶ ಕವಟಗಿಮಠ, ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ.ನಂಜನಗೌಡ, ಉಪಾಧ್ಯಕ್ಷ ಎ.ಆರ್‌.ಪ್ರಸನ್ನ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ಸಬ್ಸಿಡಿ ಅನ್ಯಾಯ ಪರಿಶೀಲಿಸುವ ಭರವಸೆ

ಕೇಂದ್ರ ಸರ್ಕಾರ ನಬಾರ್ಡ್‌ ಮೂಲಕ ನೀಡುತ್ತಿದ್ದ ಸಬ್ಸಿಡಿಯನ್ನು ಶೇ.12ಕ್ಕೆ ಇಳಿಸಿದೆ. ಇದರಿಂದ ಲಕ್ಷಾಂತರ ಕೃಷಿಕರಿಗೆ ಅನ್ಯಾಯವಾಗಿದ್ದು, ಇದನ್ನು ಸರಿಪಡಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭರವಸೆ ನೀಡಿದ್ದಾರೆ ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್‌ ಸ್ಪಷ್ಟಪಡಿಸಿದರು.

ಸಬ್ಸಿಡಿ ಕಡಿತದಿಂದಾಗಿ ಡಿಸಿಸಿ ಬ್ಯಾಂಕ್‌ಗಳು ತಂತಿಯ ಮೇಲೆ ನಡೆಯುವ ಪರಿಸ್ಥಿತಿ ಉಂಟಾಗಿದ್ದು, 3500 ಕೋಟಿ ರು. ಹೊರೆಯಾಗುತ್ತದೆ. ಇದನ್ನು ಡಿಸಿಸಿ, ಅಪೆಕ್ಸ್‌ ಬ್ಯಾಂಕ್‌ಗಳು ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಜೋಶಿ ಅವರ ಬಳಿ ಹೇಳಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು ಎಂದು ತಿಳಿಸಿದರು.