ಸಾರಾಂಶ
ಶಾಂತಿವನದಲ್ಲಿ ಬೆಳೆದಿರುವ ಸಿರಿಭತ್ತ ಪ್ರಾತ್ಯಕ್ಷಿಕೆಗೆ ಭೇಟಿ ನೀಡಿದ್ದ ದಾವಣಗೆರೆ ಜಿಲ್ಲೆಯ ಕೃಷಿ ಸಖಿಯರು, ಸಿರಿಗೆರೆಯ ಶಾಂತಿವನದಲ್ಲಿ ಕೃಷಿ ಸಖಿಯರೊಂದಿಗೆ ತರಳಬಾಳು ಶ್ರೀಗಳು ಸಂವಾದ ನಡೆಸಿದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಸಾಂಪ್ರಾದಾಯಿಕ ಕೂರಿಗೆ ಬಿತ್ತನೆ ಪದ್ಧತಿಯಲ್ಲಿ ಬೆಳೆಯಬಹುದಾದ ನೂತನ ಬೀಜಗಳ ಆವಿಷ್ಕಾರಗಳು ಬಂದಿದ್ದು, ರೈತರು ಇಂತಹ ಬೀಜಗಳನ್ನು ಬಳಸಿ ಕೂರಿಗೆ ಪದ್ಧತಿ ಯಲ್ಲಿಯೇ ಭತ್ತವನ್ನು ಬೆಳೆಯಲು ಮುಂದಾಗಬೇಕೆಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ರೈತ ಮಹಿಳೆಯರಿಗೆ ಕಿವಿಮಾತು ಹೇಳಿದರು.ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜಿಲ್ಲೆಯ ಎನ್ಆರ್ಎಲ್ಎಂ ಯೋಜನೆಯಡಿ ತರಬೇತಿಗೆ ಆಯ್ಕೆಯಾಗಿರುವ ಸಿರಿಗೆರೆ ಶಾಂತಿವನದಲ್ಲಿನ ಸಿರಿಭತ್ತ ಪ್ರಾತ್ಯಕ್ಷಿಕೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಗಳು ಮಾತನಾಡಿದರು.
ಮಠದ ಶಾಂತಿವನದಲ್ಲಿ ಪ್ರಾಯೋಗಿಕವಾಗಿ ಎರಡು ಬಾರಿ ಸಿರಿಭತ್ತ ಬೆಳೆಯಲಾಗಿದೆ. ಇದಕ್ಕೆ ತಗಲುವು ಖರ್ಚು ಕಡಿಮೆ. ಈ ಪದ್ಧತಿಯ ಬಿತ್ತನೆ ಮಾಡಲು ರೈತರಿಗೆ ಸೂಚಿಸು ವಂತೆ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಭತ್ತದ ಪ್ರಾತ್ಯಕ್ಷಿಕೆ ನೋಡಿರುವ ಕೃಷಿ ಸಖಿಯರಾದ ನೀವುಗಳೆಲ್ಲಾ ಕನಿಷ್ಠ ಅರ್ಧ ಎಕರೆಯಷ್ಟು ಪ್ರದೇಶದಲ್ಲಿ ಯಾದರೂ ಹೆಚ್ಚು ನೀರು ಬೇಡದ ಸಿರಿಭತ್ತ ಬೆಳೆಯಲು ಮುಂದಾಗಿ ಎಂದರು.ಕೃಷಿ ಸಖಿಯರು ಸಿರಿಭತ್ತ ಬೆಳೆದು ರೈತರಿಗೆ ಮಾರ್ಗದರ್ಶನ ನೀಡಲು ಮುಂದಾದ ಶ್ರೀಗಳಿಗೆ ಕೃತಜ್ಞತೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಕೆವಿಕೆಯ ಬೇಸಾಯ ತಜ್ಞರಾದ ಬಿ.ಓ. ಮಲ್ಲಿಕಾರ್ಜುನ, ಕೃಷಿ ವಿಸ್ತರಣಾ ತಜ್ಞ ಜೆ. ರಘುರಾಜ, ಶಾಂತಿವನದ ವಿನಾಯಕ ಹಾಗೂ ದಾವಣಗೆರೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಂದ ಆಗಮಿಸಿದ್ದ ಕೃಷಿ ಸಖಿಯರು ಭಾಗವಹಿಸಿದ್ದರು.1 ಕೆ.ಜಿ.ಅಕ್ಕಿ ಬೆಳೆಯಲು೫೦೦೦ ಲೀಟರ್ ನೀರು!
ಗದ್ದೆಗಳಲ್ಲಿ ಮಡಿಗಳನ್ನು ಮಾಡಿ ಬೆಳೆಯುವ ಭತ್ತಕ್ಕೂ ಕೂರಿಗೆ ಪದ್ಧತಿಯಲ್ಲಿ ಬೆಳೆಯುವ ಸಿರಿಭತ್ತಕ್ಕೂ ಹಲವು ವ್ಯತ್ಯಾಸಗಳಿಗೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಒಂದು ಕೆ.ಜಿ.ಅಕ್ಕಿ ಬೆಳೆಯಲು ಸುಮಾರು ೫೦೦೦ ಲೀಟರ್ ನೀರು ಬೇಕಾಗುತ್ತದೆ. ಆದರೆ ಕೂರಿಗೆ ಪದ್ಧತಿಯ ಬೇಸಾಯಕ್ರಮದಲ್ಲಿ ೧೫೦೦ ಲೀಟರ್ ನೀರು ಸಾಕಾಗುತ್ತದೆ. ಇದನ್ನು ಹಲವು ವಿಜ್ಞಾನಿಗಳು ಪುಷ್ಠೀಕರಿಸಿದ್ದಾರೆ ಎಂದರು ಶ್ರೀಗಳು ತಿಳಿಸಿದದರು.