- ಸಾತ್ಕೋಳಿ ಶಾಲೆ ಮಕ್ಕಳಿಗೆ ಬೀಳ್ಕೊಡುಗೆ । ದಾನಿಗಳಿಂದ ಪ್ರಿಂಟರ್, ಶಾಲಾ ಬ್ಯಾಗ್ ವಿತರಣೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸುವುದು ಹಾಗೂ ಸರ್ಕಾರಿ ಶಾಲೆಗೆ ನಮ್ಮ ಮಕ್ಕಳನ್ನು ಕಳುಹಿಸಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮುತ್ತಿನಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಹಾಗೂ ದಾನಿ ಮೇಘರ್ಷ ತಿಳಿಸಿದರು.

ಶುಕ್ರವಾರ ಸಾತ್ಕೋಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 5 ನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ, ವಾರ್ಷಿಕ ಸರಸ್ವತಿ ಪೂಜೆ ಸಮಾರಂಭದಲ್ಲಿ ₹16 ಸಾವಿರ ಮೌಲ್ಯದ ಪ್ರಿಂಟರ್, ಜೆರಾಕ್ಸ್ ಯಂತ್ರ ಕೊಡುಗೆಯಾಗಿ ನೀಡಿ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಶಾಲೆಯ ಯಾವುದೇ ವಿದ್ಯಾರ್ಥಿ ಉನ್ನತ ವ್ಯಾಸಂಗ, ಸ್ಪರ್ಧಾತ್ಮಕ ಪರೀಕ್ಷೆ ತೆಗೆದು ಕೊಂಡು ಓದಿದರೆ ಅದರ ಸಂಪೂರ್ಣ ವೆಚ್ಚ ಭರಿಸುತ್ತೇನೆ. ಶಾಲೆ ಮೂಲಭೂತ ಸೌಕರ್ಯಕ್ಕೆ ಸಹಕಾರ ನೀಡುತ್ತೇನೆ ಎಂಬ ಭರವಸೆ ನೀಡಿದರು.

ಸಮೂಹ ಸಂಪನ್ಮೂಲ ವ್ಯಕ್ತಿ ಶಿವಣ್ಣ ನಾಯ್ಕ ಮಾತನಾಡಿ ಶಾಲೆ ಶೈಕ್ಷಣಿಕ ಮತ್ತು ಭೌತಿಕ ಅಭಿವೃದ್ಧಿಗೆ ಪೋಷಕರು, ಎಸ್.ಡಿ.ಎಂ ಸಿ, ಗ್ರಾಮಸ್ಥರು, ದಾನಿಗಳ ಸಹಕಾರ ಬಹಳ ಮುಖ್ಯ. ಆಗ ಮಾತ್ರ ಶಿಕ್ಷಕರು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದರು.


ಮುಖ್ಯ ಶಿಕ್ಷಕ ರಂಗಪ್ಪ ಮಾತನಾಡಿ, ಈ ಶಾಲೆಗೆ ಬಹಳಷ್ಟು ಸೌಕರ್ಯಗಳ ಅವಶ್ಯಕತೆ ಇದೆ. ಶಾಲೆಗೆ ಬಹಳ ಮುಖ್ಯವಾಗಿ ಬೇಕಾಗಿದ್ದ ಪ್ರಿಂಟರ್ ನ್ನು ನೀಡಿದ್ದಕ್ಕೆ ಕೃತಜ್ಞತೆ ಅರ್ಪಿಸಿದರು.

ಜಪಾನ್‌ನಲ್ಲಿ ಎಂಜಿನಿಯರ್ ಆಗಿರುವ ಪ್ರಶಾಂತ್ ಬೆಳವಾಡಿ ಮತ್ತು ಅನಘ ಸಾತ್ಕೋಳಿ ಶಾಲೆ ಹಾಗೂ ಅಂಗನವಾಡಿಗೆ ಶಾಲಾ ಬ್ಯಾಗ್ ಮತ್ತು ಪೌಚ್‌ಗಳನ್ನು ದಾನವಾಗಿ ನೀಡಿದರು. ಈ ವೇಳೆ ಮೇಘರ್ಷ, ಪ್ರಶಾಂತ ಬೆಳವಾಡಿ ಮತ್ತು ಅನಘರನ್ನು ಸನ್ಮಾನಿಸಲಾಯಿತು.

ಎಸ್.ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ನಾಗರತ್ನ, ಅಂಗನವಾಡಿ ಶಿಕ್ಷಕಿ ಸವಿತ, ಎಸ್‌.ಡಿಎಂಸಿ ಸದಸ್ಯರು, ಎಸ್‌.ಕೆ.ರಂಗಪ್ಪ , ಪ್ರದೀಪ್ ಕುಮಾರ್ ಇದ್ದರು.