ಸಾರಾಂಶ
ಅಮೃತ ಬಿಂದು ತಾಯಂದಿರ ಎದೆಹಾಲಿನ ಬ್ಯಾಂಕ್ನ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ. ಧನಂಜಯ್ ಸರ್ಜಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗಅಮೃತಕ್ಕೆ ಸಮವಾಗಿರುವ ತಾಯಿಯ ಎದೆಹಾಲು ಕೊಡುವುದರಿಂದ ಒಂದು ವರ್ಷದಲ್ಲಿ 8 ಲಕ್ಷಕ್ಕೂ ಹೆಚ್ಚು ಮಕ್ಕಳ ಪ್ರಾಣವನ್ನು ಉಳಿಸಬಹುದು ಎಂದು ಸರ್ಜಿ ಪೌಂಡೇಶನ್ ಅಧ್ಯಕ್ಷ ಡಾ. ಧನಂಜಯ್ ಸರ್ಜಿ ಹೇಳಿದರು.ನಗರದ ಸರ್ಜಿ ತಾಯಿ-ಮಗು ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಸರ್ಜಿ ಆಸ್ಪತ್ರೆಗಳ ಸಮೂಹದ ಸಹಯೋಗ ದೊಂದಿಗೆ ಬುಧವಾರ ಅಮೃತ ಬಿಂದು ಹೆಸರಿನ ತಾಯಂದಿರ ಎದೆಹಾಲಿನ ಬ್ಯಾಂಕ್ನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಒಂದು ಅಂಕಿ ಅಂಶದ ಪ್ರಕಾರ ಶೇ.46ರಷ್ಟು ನವಜತ ಶಿಶುಗಳಿಗೆ ಸಮರ್ಪಕವಾಗಿ ಸ್ತನ್ಯ ಪಾನವಾಗುತ್ತಿಲ್ಲ ಎಂದು ತಿಳಿದು ಬರುತ್ತಿದೆ. ಇದರ ಪರಿಣಾಮ ಮಕ್ಕಳಲ್ಲಿ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ತಿಳಿಸಿದರು.ಇದರ ಪ್ರಾಮುಖ್ಯತೆ ಅರಿತೇ ಎಲ್ಲ ನವ ಜತ ಶಿಶುಗಳಿಗೂ ತಾಯಂದಿರ ಎದೆಹಾಲು ದೊರೆಯಬೇಕೆಂಬ ಸದುದ್ದೇಶದೊಂದಿಗೆ ಎದೆ ಹಾಲಿನ ಬ್ಯಾಂಕ್ನ್ನು ಪ್ರಪಂಚಾದ್ಯಂತ ಸ್ಥಾಪನೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಮಧ್ಯ ಕರ್ನಾಟಕದಲ್ಲಿ ಅಮೃತ ಬಿಂದು ಶಿವಮೊಗ್ಗ ಸರ್ಜಿ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಿದೆ. ಎದೆಹಾಲಿನಲ್ಲಿ ಅನೇಕ ಉತ್ತಮ ಅಂಶಗಳಿವೆ. ಇನ್ನು ಇದರ ಬಗ್ಗೆ ಸಂಶೋಧನೆ ನಡೆಯುತ್ತ ಇದೆ. ಎಲ್ಲವನ್ನು ನೀಗಿಸುವ ಶಕ್ತಿ ಎದೆಹಾಲಿನಲ್ಲಿ ಇದೆ ಎಂದರು.ಆಸಕ್ತಿ ಇರುವ ಹೆಚ್ಚುವರಿ ಹಾಲು ಲಭ್ಯವಿರುವ ತಾಯಂದಿರು ಸ್ವಯಂ ಪ್ರೇರಿತರಾಗಿ ಎದೆ ಹಾಲನ್ನು ದಾನ ಮಾಡಲು ಮುಂದೆ ಬಂದಿದ್ದಾರೆ. ಈಗಾಗಲೇ ೫ ಮಕ್ಕಳಿಗೆ ನಮ್ಮ ಆಸ್ಪತ್ರೆಯಲ್ಲಿ ಎದೆಹಾಲು ನೀಡಿ, ಪ್ರಾಣಾಪಾಯದಿಂದ ರಕ್ಷಿಸಿದ್ದೇವೆ. ಅದನ್ನು ಶೇಖರಿಸಿ ಪಾಶ್ಚರೀಕರಿಸಿ ಲ್ಯಾಬ್ನಲ್ಲಿ ಪರೀಕ್ಷೆ ಮಾಡಿದ ನಂತರ ಮಗುವಿಗೆ ಯೋಗ್ಯ ಎಂದು ಕಂಡುಬಂದಲ್ಲಿ ಅದಕ್ಕೆ ಗ್ರೀನ್ಲೇಬಲ್ ಹಚ್ಚಿ ಬಾಟಲಿಯಲ್ಲಿ ಸಂಗ್ರಹಿಸಲಾಗುವುದು. ಒಂದು ಎಂಎಲ್ ಹಾಲಿಗೆ 4ರಿಂದ 6ರು.ಗಳ ಖರ್ಚು ಬರುತ್ತಿದ್ದು, ಸಂಗ್ರಹಿಸಿದ ಹಾಲನ್ನು ಶೇ.30ರಷ್ಟು ಸರ್ಕಾರಿ ಆಸ್ಪತ್ರೆಗೆ ಬಡ ಮಕ್ಕಳಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು. ತಾಯಂದಿರ ಎದೆಹಾಲಿನ ಬ್ಯಾಂಕ್ ಉದ್ಘಾಟಿಸಿ ಮಾತನಾಡಿದ ಕೋಡಿಮಠದ ಶ್ರೀ ಡಾ. ಶಿವಾನಂದ ರಾಜೇಂದ್ರ ಸ್ವಾಮೀಜಿ, ಪುರಾತನ ಕಾಲದಿಂದಲೂ ತಾಯಿ ಎದೆ ಹಾಲೇ ಶ್ರೇಷ್ಠ ಎಂಬ ಪರಂಪರೆಯನ್ನು ಇಡೀ ಜಗತ್ತೆ ಹೊಂದಿದೆ. ಎದೆಹಾಲಿನಿಂದ ಬರುವ ಶಕ್ತಿ ಅಪಾರ ವಾದದ್ದು ಮತ್ತು ಅದು ಎಲ್ಲಿಯೂ ಸಿಗುವುದಿಲ್ಲ ಇಂತಹ ಒಂದು ಮಹತ್ಕಾರ್ಯಕ್ಕೆ ಮುಂದಾಗಿರುವ ಸರ್ಜಿ ಆಸ್ಪತ್ರೆಯ ಕಾರ್ಯ ಶ್ಲಾಘನೀಯ ಎಂದರು.ಇಂದಿನ ಆಧುನಿಕ ಸೌಲಭ್ಯಗಳಿಗೆ ಮಾರುಹೋದ ನಮ್ಮ ಹೆಣ್ಣು ಮಕ್ಕಳು, ಮಕ್ಕಳಿಗೆ ಹಾಲುಣ್ಣಿಸುವಲ್ಲಿ ಯೋಚಿಸುತ್ತಿದ್ದಾರೆ. ಜೊತೆಗೆ ವಿವಿಧ ಕಾರಣಗಳಿಂದ ಮಗುವಿಗೆ ಎದೆಹಾಲು ಸಿಗದೇ ಹೋಗುತ್ತಿದೆ. ಇದರಿಂದ ಮಗು ಅನಾರೋಗ್ಯಕ್ಕೆ ತುತ್ತಾಗುತ್ತದೆ. ಸರ್ಜಿ ಆಸ್ಪತ್ರೆಯವರು ಒಂದು ಮಹತ್ತರ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಯಶಸ್ವಿಯಾಗಲಿ ಎಂದು ಆರೈಸಿದರು.ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಬಿ.ಸಿ. ಗೀತಾ, ಬೆಂಗಳೂರು ದಯಾನಂದ ಸಾಗರ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ.ಆಶಾ ಬೆನಕಪ್ಪ, ವೈದ್ಯ ಡಾ.ಪಿ.ನಾರಾಯಣ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್ ಜೀ, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ, ರೋಟರಿ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಎಚ್.ಪಿ. ಶಿವರಾಜ್,.ಜೆ.ಪಿ.ಚಂದ್ರು, ಸರ್ಜಿ ಆಸ್ಪತ್ರೆ ಮೆಡಿಕಲ್ ಸೂಪರಿಂಟ್ಂಡೆಂಟ್ ಡಾ. ಎಸ್.ವಿ.ಪ್ರಶಾಂತ್ ಉಪಸ್ಥಿತರಿದ್ದರು.