ಸಾರಾಂಶ
-ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣ ದುರ್ಬಳಕೆ ಖಂಡಿಸಿ ಪ್ರತಿಭಟನೆ
ದೊಡ್ಡಬಳ್ಳಾಪುರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ 14,000 ಕೋಟಿ ರು. ಇತರೆ ಉದ್ದೇಶಗಳಿಗೆ ಬಳಸಿದ್ದಾರೆಂದು ಸ್ವಾಭಿಮಾನಿ ಎಸ್ಸಿ, ಎಸ್ಟಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಆರೋಪಿಸಿದರು.ನಗರದ ತಹಸೀಲ್ದಾರ್ ಕಚೇರಿ ಮುಂದೆ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಹಗರಣ, ಎಸ್ಸಿ/ಎಸ್ಟಿ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಕಡಿತ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ದಲಿತ ಸಮುದಾಯದ ಅಭಿವೃದ್ಧಿಗಾಗಿ 2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಎಸ್ಸಿಪಿ- ಟಿಎಸ್ಪಿ ಯೋಜನೆ ಜಾರಿಗೆ ತಂದಿತು. ಆದರೆ 2013ರಿಂದ ಹಣವನ್ನು ಬೇರೆ ಬೇರೆ ಅಭಿವೃದ್ಧಿ ಕೆಲಸಗಳಿಗೆ ಬಳಸಿ ದಲಿತರಿಗೆ ದ್ರೋಹ ಮಾಡಲಾಗಿದೆ. ಇಲ್ಲಿಯವರೆಗೂ 14 ಸಾವಿರ ಕೋಟಿ ರು. ದುರ್ಬಳಕೆಯಾಗಿದ್ದು, ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಸಂಪುಟದಲ್ಲಿ ದಲಿತ ಸಚಿವರಿದ್ದಾರೆ, ಆದರೆ ದಲಿತರ ಹಣ ದುರ್ಬಳಕೆ ಬಗ್ಗೆ ಧ್ವನಿಯೆತ್ತಿಲ್ಲ. ಸರ್ಕಾರದ ವಿರುದ್ಧ ಪ್ರತಿ ತಾಲೂಕಿನಲ್ಲೂ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಮಾಡುವುದಾಗಿ ಹೇಳಿದರು.ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಮುತ್ತೂರು ಬಿ.ಎನ್. ಓಬಳೇಶ್, ರಾಜ್ಯ ಸಮಿತಿ ಸದಸ್ಯ ಓಂಕಾರಪ್ಪ, ನಗರ ಅಧ್ಯಕ್ಷ ಇಮ್ರಾನ್ ಪಾಷ, ತಾಲೂಕು ಮಹಿಳಾ ಅಧ್ಯಕ್ಷರಾದ ರತ್ನಮ್ಮ ಕೊನಘಟ್ಟ, ನಗರ ಸಮಿತಿಯ ಸುನಂದಮ್ಮ , ಪಿವಿಸಿ ಸ್ವಾಭಿಮಾನ ಜಿಲ್ಲಾ ಆಧ್ಯಕ್ಷ ದೊಡ್ಡರಾಜು ಟಿ ಸಿ, ನೆಲಮಂಗಲ ತಾಲೂಕು ಅಧ್ಯಕ್ಷೆ ಸಿದ್ದಲಿಂಗಮ್ಮ, ನಗರ ಅಧ್ಯಕ್ಷರಾದ ವಿಜಯಲಕ್ಷ್ಮೀ, ಸಿದ್ದಗಂಗಮ್ಮ ಇತರರಿದ್ದರು.