ವೇಶ್ಯಾವಾಟಿಕೆ ಹೆಸರಿನ ದಂಧೆ: ಅಂತರ್‌ಜಿಲ್ಲಾ ತಂಡ ಸೆರೆ

| Published : Jul 10 2024, 12:41 AM IST

ಸಾರಾಂಶ

ವೇಶ್ಯಾವಾಟಿಕೆ ಹೆಸರಿನಲ್ಲಿ ದಂಧೆ ನಡೆಸಿ ಅಮಾಯಕರನ್ನು ವಂಚಿಸುತ್ತಿದ್ದ ಅಂತರ್‌ಜಿಲ್ಲಾ ತಂಡವನ್ನು ಕುಶಾಲನಗರ ಪೊಲೀಸರು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಎರಡು ಕಾರು, 17 ಮೊಬೈಲ್, ಒಂದು ಟ್ಯಾಬ್ ಒಂದು ಲ್ಯಾಪ್‌ಟಾಪ್‌ ಹಾಗೂ 24,800 ರು. ನಗದು ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ವೇಶ್ಯಾವಾಟಿಕೆ ಹೆಸರಿನಲ್ಲಿ ದಂಧೆ ನಡೆಸಿ ಅಮಾಯಕರನ್ನು ವಂಚಿಸುತ್ತಿದ್ದ ಅಂತರ್‌ಜಿಲ್ಲಾ ತಂಡವನ್ನು ಕುಶಾಲನಗರ ಪೊಲೀಸರು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಒಟ್ಟು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಎರಡು ಕಾರು, 17 ಮೊಬೈಲ್, ಒಂದು ಟ್ಯಾಬ್ ಒಂದು ಲ್ಯಾಪ್‌ಟಾಪ್‌ ಹಾಗೂ 24,800 ರು. ನಗದು ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.

ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್, ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಕುಶಾಲನಗರದ ಮಡಿಕೇರಿ ರಸ್ತೆಯಲ್ಲಿರುವ ಲಾಡ್ಜ್ ಹೆಸರು ಹೇಳಿಕೊಂಡು ಹಲವು ಜನರಿಗೆ ವಂಚಿಸಿ ಆರೋಪಿಗಳು 3 ಲಕ್ಷ ರು.ಗೂ ಹೆಚ್ಚು ಹಣ ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರದ ಎಂಟು ಜನ ಆರೋಪಿಗಳನ್ನು ಬೆಂಗಳೂರಿಗೆ ತೆರಳಿ ಬಂಧಿಸಲಾಗಿದೆ.

ಸಕಲೇಶಪುರದ ಮಂಜುನಾಥ (29), ಸಂದೀಪ್ ಕುಮಾರ್ ಸಿಎಸ್ (25), ಸಿ ಬಿ ರಾಕೇಶ್ (24), ಕೆ ಜಯಲಕ್ಷ್ಮಿ (29), ಸಹನ (19), ಪಲ್ಲವಿ (30), ಅಭಿಷೇಕ್ (24) ಮತ್ತು ಅಪ್ರಾಪ್ತ ಬಾಲಕಿಯೊಬ್ಬಳನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅಂತರ್ಜಾಲ ಮೂಲಕ ಮಹಿಳೆಯರಿಂದ ಸೆಕ್ಸ್ ಮಸಾಜ್ ವೇಶ್ಯಾವಾಟಿಕೆ ಸೇವೆಗಳು ಲಭ್ಯ ಎಂಬುದಾಗಿ ಮೊಬೈಲ್ ಸಂಖ್ಯೆ ನೀಡಿ ಕರೆ ಮಾಡುವಂತೆ ಸೃಷ್ಟಿಸಿರುವ ವೆಬ್‌ಸೈಟ್‌ ಮೂಲಕ ಅಮಾಯಕನನ್ನು ವಂಚನೆಗೆ ಒಳಗಾಗುವಂತೆ ಮಾಡುವ ಜಾಲ ಇದಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆಪ್ ಮೂಲಕ ಕುಶಾಲನಗರದಲ್ಲಿ ವೇಶ್ಯಾವಾಟಿಕೆಗೆ ಮಹಿಳೆಯರು ದೊರೆಯುತ್ತಾರೆ ಎಂದು ವೆಬ್ಸೈಟ್ ಮೂಲಕ ಜಾಹೀರಾತು ನೀಡುತ್ತಿರುವುದು ಈ ಜಾಲದ ದಂಧೆಯಾಗಿತ್ತು. ಕುಶಾಲನಗರ ಲಾಡ್ಜ್ ಒಂದರ ಹೆಸರು ಹೇಳಿಕೊಂಡು ವಂಚಕರು ಕಾರ್ಯಾಚರಣೆ ಮಾಡುತ್ತಿದ್ದರು.

ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸ್ಥಳಿಯ ಪೊಲೀಸ್ ಅಪರಾಧ ಪತ್ತೆ ತಂಡದ ಮೂಲಕ ವಂಚಕರನ್ನು ಪತ್ತೆ ಮಾಡುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಎಂದು ರಾಮರಾಜನ್ ತಿಳಿಸಿದರು.

ಈ ದಂಧೆಗೆ ಕೆಲವರು ಮಾರು ಹೋಗಿ, ಮೊಬೈಲ್ ಮೂಲಕ ಬೇಡಿಕೆ ಇಟ್ಟ ಹಣ ನೀಡಿ ವಂಚನೆಗೆ ಒಳಗಾಗಿದ್ದಾರೆ. ಜಿಲ್ಲೆ ಸೇರಿದಂತೆ ನೆರೆಯ ಮೈಸೂರು ಬೆಂಗಳೂರು ಮತ್ತಿತರ ಕಡೆ ಕೂಡ ಇದೇ ರೀತಿ ಈ ತಂಡ ವಂಚನೆ ನಡೆಸಿದೆ ಎಂದು ರಾಮರಾಜನ್ ವಿವರ ನೀಡಿದರು.

ಪ್ರಕರಣದ ಬೆನ್ನು ಬಿದ್ದ ಪೊಲೀಸ್ ಕಾರ್ಯಾಚರಣೆ ತಂಡ ಕುಶಾಲನಗರ ಡಿ ವೈ ಎಸ್ ಪಿ ಆರ್ ವಿ ಗಂಗಾಧರಪ್ಪ, ಇನ್‌ಸ್ಪೆಕ್ಟರ್ ಬಿ.ಜಿ.ಪ್ರಕಾಶ್‌, ಠಾಣಾಧಿಕಾರಿಗಳಾದ ಎಚ್ ವಿ ಚಂದ್ರಶೇಖರ್, ಎಚ್‌.ಟಿ.ಗೀತಾ ಮತ್ತು ಸಿಬ್ಬಂದಿ ವಿಶೇಷ ತಂಡ ರಚಿಸಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಸಾಕ್ಷಾಧಾರಗಳನ್ನು ಕಲೆಹಾಕಿ ತನಿಖೆ ಕೈಗೊಂಡು ಆರೋಪಿಗಳು ಮತ್ತು ಅವರು ಬಳಸುತ್ತಿದ್ದ ಕಾರು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ

ಪತ್ರಕರ್ತರೊಬ್ಬರು ಮಡಿಕೇರಿಯಲ್ಲಿ ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿ ರಂಜಿತ್ ,ಬಾಬು, ಉದಯ್ ಮತ್ತಿತರರು ಪಾಲ್ಗೊಂಡಿದ್ದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಇದ್ದರು.