ಸಾರಾಂಶ
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆ ಸಭೆಯನ್ನು ಇನ್ಸ್ಪೆಕ್ಟರ್ ಮುದ್ದಮಾದೇವ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದು ಕೊರತೆ ಸಭೆಯನ್ನು ಇನ್ಸ್ಪೆಕ್ಟರ್ ಮುದ್ದುಮಾದೇವ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.ಪ್ರತಿ ತಿಂಗಳು ಪರಿಶಿಷ್ಟ ಜಾತಿಯ ಕುಂದು ಕೊರತೆ ಸಭೆಯನ್ನು ದಲಿತ ಮುಖಂಡರುಗಳೆಲ್ಲರನ್ನು ಒಗ್ಗೂಡಿಸಿ ನಡೆಸಲಾಗುತ್ತಿದೆ. ಹಿಂದಿನ ತಿಂಗಳಲ್ಲಿ ಹಲವು ಮುಖಂಡರ ಹಲವು ಸಮಸ್ಯೆಗಳಿಗೆ ಕಾರ್ಯ ರೂಪದಲ್ಲಿ ಉತ್ತರ ನೀಡಿದ್ದೇವೆ. ಅಲ್ಲದೆ ಲಿಕ್ಕರ್ ಸಮಸ್ಯೆ ಬಗ್ಗೆ ಹೆಚ್ಚಿನದಾಗಿ ದೂರುಗಳಿದ್ದವು ಅದರಂತೆ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಚರಣೆಯಲ್ಲಿ ಸುಮಾರು 8 ಲೀಟರ್ ಸರಾಯಿ, ಒಂದು ಬ್ಯಾರಲ್ ಸರಾಯಿ ಗಂಜಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಂಡಿದ್ದೇವೆ ಎಂದು ಇನ್ಸ್ಪೆಕ್ಟರ್ ತಿಳಿಸಿದರು.
ಸಭೆಯಲ್ಲಿ ರಾಜಪ್ಪ ಮಾತನಾಡಿ, ಅಬ್ಬಿಮಠ ಗ್ರಾಮದ ಬಸ್ ನಿಲ್ದಾಣ ಮತ್ತು ಯಡೂರು ಬಸ್ ನಿಲ್ದಾಣದಲ್ಲಿ ಸಿಗರೇಟು ಮತ್ತು ಹೆಂಡದ ಬಾಟಲ್ಗಳು ತುಂಬಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು. ಇಲ್ಲಿ ಸಾರ್ವಜನಿಕರು ಕೂರಲು ಆಗದಂತಹ ಪರಿಸ್ಥಿತಿ ಇದೆ. ಸಂಜೆ ಆಗುತ್ತಿದ್ದಂತೆ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪುಂಡ ಪೋಕರಿಗಳ ಹಾವಳಿ ಜಾಸ್ತಿಯಾಗಿದ್ದು, ಇಲಾಖೆ ಕಡಿವಾಣ ಹಾಕಬೇಕಿದೆ ಎಂದರು.ಎಸ್.ಎ. ಪ್ರತಾಪ್ ಮಾತನಾಡಿ, ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆ ತುಂಬಾ ಹದಗೆಟ್ಟಿದೆ. ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಯೋಗೇಶ್. ಹೂವಯ್ಯ. ಪಿ.ಕೆ. ವಸಂತ ಮತ್ತಿತರರಿದ್ದರು.