ಕುಕನೂರು ತಾಲೂಕಿನ ಕುದರಿಮೋತಿ ಬ್ರೈಟ್ ಫ್ಯೂಚರ್ ಇಂಗ್ಲಿಷ್ ಮೀಡಿಯಂ ಶಾಲೆಯ 8ನೇ ವಾರ್ಷಿಕೋತ್ಸವ ಹಾಗೂ ಶಾಲಾ ಮಕ್ಕಳ ಸಾಂಸ್ಕೃತಿಕ ವೈಭವ ನಡೆಯಿತು.

ಕುಕನೂರು: ಶಾಲಾ ವಾರ್ಷಿಕೋತ್ಸವ ವಿದ್ಯಾರ್ಥಿಗಳ ಪ್ರತಿಭೆ, ಶೈಕ್ಷಣಿಕ ಸಾಧನೆ ಮತ್ತು ಸಾಂಸ್ಕೃತಿಕ ಕೌಶಲ್ಯಗಳನ್ನು ಪ್ರದರ್ಶಿಸುವ ಒಂದು ಸಂಭ್ರಮದ ಹಬ್ಬವಾಗಿದೆ ಎಂದು ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕೃತ ದೇವರೆಡ್ಡಿ ಬಿ. ಹೇಳಿದರು.

ತಾಲೂಕಿನ ಕುದರಿಮೋತಿ ಬ್ರೈಟ್ ಫ್ಯೂಚರ್ ಇಂಗ್ಲಿಷ್ ಮೀಡಿಯಂ ಶಾಲೆಯ 8ನೇ ವಾರ್ಷಿಕೋತ್ಸವ ಹಾಗೂ ಶಾಲಾ ಮಕ್ಕಳ ಸಾಂಸ್ಕೃತಿಕ ವೈಭವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಟಕ, ನೃತ್ಯ, ಗಾಯನ ಮತ್ತು ಕ್ರೀಡಾ ಚಟುವಟಿಕೆ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ತಂಡದ ಕೆಲಸ ಮತ್ತು ಸೃಜನಶೀಲತೆಯನ್ನು ವಾರ್ಷಿಕೋತ್ಸವ ಉತ್ತೇಜಿಸುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಹೆಚ್ಚಿನ ಒಲವು ತೋರಿದಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದರೆ ಇತ್ತೀಚಿನ ವಿದ್ಯಾರ್ಥಿಗಳು ಕೇವಲ ಮೊಬೈಲ್ ಮತ್ತು ಟಿವಿ ನೋಡುತ್ತಾ ಕಾಲ ಕಳೆಯುತ್ತಿರುವುದು ಸರಿಯಲ್ಲ. ಅಲ್ಲದೇ ಮಕ್ಕಳ ಸುಧಾರಣೆಯಲ್ಲಿ ಕೇವಲ ಶಿಕ್ಷಕರ ಪಾತ್ರ ಅಷ್ಟೇ ಮುಖ್ಯ ಅಲ್ಲ, ಜತೆಗೆ ಪಾಲಕರ ಜವಾಬ್ದಾರಿ ಬಹಳಷ್ಟಿದೆ ಎಂದರು.

ಕುದರಿಮೋತಿಯ ಶ್ರೀ ವಿಜಯಮಹಾಂತ ಸ್ವಾಮೀಜಿ ಮಾತನಾಡಿ, ಮಕ್ಕಳ ಪ್ರತಿಭೆಗೆ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಶಿಕ್ಷಕ ವೃಂದ ಹಾಗೂ ಪೋಷಕ ವರ್ಗ ಶ್ರಮಿಸಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ಅಶೋಕ ಗಟ್ಟೆಪ್ಪನವರ್, ಗೌರವ ಅಧ್ಯಕ್ಷ ಮಂಜುನಾಥ ಗಟ್ಟೆಪ್ಪನವರ್, ದಳಪತಿ ಹನುಮಗೌಡ ಪೊಲೀಸ್‌ಪಾಟೀಲ್, ಬ್ರೈಟ್ ಫ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ವಿಜಯಕುಮಾರ್ ದಾಸರ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹುಚ್ಚಮ್ಮ ಬಸಪ್ಪ ಚೌದ್ರಿ, ಉಪನ್ಯಾಸಕ ಶರಣಪ್ಪ ಉಮಚಗಿ, ಪೌಲ್ಟ್ರಿ ಫಾರಂ ಮ್ಯಾನೇಜರ್ ತ್ರೀನಾಥ ರೆಡ್ಡಿ, ಗ್ರಾಮದ ಶಿಕ್ಷಣ ಪ್ರೇಮಿ ರಾಮರಾವ್ ಕುಲಕರ್ಣಿ, ಸರ್ಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಈಶಪ್ಪ ವಣಗೇರಿ, ಗ್ರಾಮದ ಮುಖಂಡರಾದ ಸುಭಾಷ್ ಈಡಿಗೇರ್, ಉಮೇಶ ತಲ್ಲೂರು, ರವೀಂದ್ರ ಈಡಿಗೇರ್, ರೈತಪರ ಹೋರಾಟಗಾರ ಸುರೇಶ ಚೌಡ್ಕಿ, ಸುಭಾಷ್, ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶೇಖಪ್ಪ ದೊಡ್ಡಮನಿ, ಉಮೇಶ ದಾಸರ್, ಬಸಯ್ಯ ಹಿರೇಮಠ, ಫಕೀರಪ್ಪ ದೊಡ್ಡಮನಿ, ಪ್ರಶಾಂತ ಅಬಕಾರಿ ಇದ್ದರು.