- ಘನ ತ್ಯಾಜ್ಯವಸ್ತುಗಳ ನಿರ್ವಹಣೆ, ವಿಂಗಡನೆ ಹಾಗೂ ವಿಲೇವಾರಿ ಬಗ್ಗೆ ಅರಿವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪಟ್ಟಣದ ಡಿಸಿಎಂಸಿಯ ಸಿಬಿಎಸ್ ಸಿ ವಿಭಾಗದ ವಿದ್ಯಾರ್ಥಿಗಳು ಶುಕ್ರವಾರ ಪಟ್ಟಣ ಪಂಚಾಯಿತಿಗೆ ಸೇರಿದ ರಾವೂರಿನ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ, ವಿಂಗಡನೆ ಹಾಗೂ ವಿಲೇವಾರಿ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಪಟ್ಟಣದ ವ್ಯಾಪ್ತಿಯಲ್ಲಿ ಪ್ರತಿ ದಿನ ನಾಲ್ಕು ಟನ್ ಕಸ ಸಂಗ್ರಹವಾಗುತ್ತದೆ. ಆದರೆ, ಸಾರ್ವಜನಿಕರಿಗೆ ಹಸಿ ಕಸ, ಒಣ ಕಸವನ್ನು ಬೇರ್ಪಡಿಸಿ ನೀಡಿ ಎಂದರೂ ನೀಡುವುದಿಲ್ಲ. ಇದರಿಂದ ಕಸ ವಿಂಗಡನೆ ಕಷ್ಟವಾಗುತ್ತದೆ. ಪ.ಪಂ. ವತಿಯಿಂದ ಜನರಲ್ಲಿ ಅರಿವು ಮೂಡಿಸುವಂತಹ ಸಾಕಷ್ಟು ಪ್ರಯತ್ನಗಳು ಮಾಡಿದರೂ ಸಹ ಸಾರ್ವಜನಿಕರು ಕಸವನ್ನು ಬೇರ್ಪಡಿಸಿ ನೀಡುವುದಿಲ್ಲ ಎಂದರು.ಪ.ಪಂ. ಮಾಜಿ ಅಧ್ಯಕ್ಷೆ ಜುಬೇದಾ ಮಾಹಿತಿ ನೀಡಿ, ಕಸ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆ ಆಗಿದೆ. ಜನರು ಎಲ್ಲಿಂದರಲ್ಲಿ ರಸ್ತೆ ಬದಿಗಳಲ್ಲಿ ಕಸವನ್ನು ಎಸೆದು ಹೋಗುತ್ತಿದ್ದಾರೆ. ಹಸಿಕಸ, ಒಣಕಸಗಳನ್ನು ಬೇರ್ಪಡಿಸದೆ ಹಾಗೆ ಕಸವನ್ನು ವಾಹನಕ್ಕೆ ನೀಡುತ್ತಾರೆ. ಇದರಿಂದ ಪೌರಕಾರ್ಮಿಕರಿಗೆ ಸಮಸ್ಯೆಯಾಗುತ್ತಿದ . ನಮ್ಮ ಅಧಿಕಾರವಧಿಯಲ್ಲಿ ಕಸ ವಿಲೇವಾರಿ ಘಟಕಕ್ಕೆ ಡ್ರಾ ಮಿಲ್ ಹಾಗೂ ಬೇಲಿಂಗ್ ಮಿಷನ್ ಅನ್ನು ತರಿಸಲಾಗಿದೆ. ಇದರಿಂದ ಕಸವನ್ನು ಬೇರ್ಪಡಿಸಲು ಸಹಾಯವಾಗಿದೆ ಎಂದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಮಾಹಿತಿ ನೀಡಿ, 700 ಜನಕ್ಕೆ ಒಬ್ಬ ಪೌರ ಕಾರ್ಮಿಕರಂತೆ ನಮ್ಮ ಪಟ್ಟಣ ಪಂಚಾಯಿತಿಯಲ್ಲಿ ಸುಮಾರು 11 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಸಹ ನಮಗೆ ಪೌರಕಾರ್ಮಿಕರ ಕೊರತೆ ಇದ್ದು ಜನರು ಸಹಕಾರ ನೀಡಬೇಕಾಗಿ ಕೋರಿದರು ಡಿಸಿಎಂಸಿ ಶಾಲೆಯ ಪ್ರಾಂಶುಪಾಲೆ ಪದ್ಮಾರಮೇಶ್ ಮಾತನಾಡಿ, ಮಕ್ಕಳಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಕಸ ವಿಲೇವಾರಿ ಬಗ್ಗೆ ಮಾಹಿತಿಯನ್ನು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ಮತ್ತು ಅರಿವನ್ನು ನೀಡಿದರೆ ಮಾತ್ರ ಅವರು ಮನೆಗಳಿಗೆ ಹೋಗಿ ಕಸವಿಲೇವಾರಿಯ ಬಗ್ಗೆ ತಮ್ಮ ಮನೆಗಳಲ್ಲಿ ತಿಳಿಸುತ್ತಾರೆ. ಅವರಿಗೂ ಪರಿಸರದಲ್ಲಿ, ಸಮಾಜದಲ್ಲಿ ಕಸದ ಬಗ್ಗೆ ಅರಿವು ಮೂಡುತ್ತದೆ.ಮಕ್ಕಳಲ್ಲಿ ಈ ಜಾಗೃತಿ ಉಂಟಾದಲ್ಲಿ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದರು. ಕಸ ವಿಲೇವಾರಿ ಮಾಡುವ ವಿವಿಧ ಬಗೆಯ ಯಂತ್ರಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ಮಕ್ಕಳಿಗೆ ವಿವರಿಸಲಾಯಿತು.ಈ ಸಂದರ್ಭದಲ್ಲಿ ಪ.ಪಂ. ವಿಜಯಕುಮಾರ್, ಡಿ.ಸಿ.ಎಂ.ಸಿ. ಶಾಲೆಯ ಶಿಕ್ಷಕರು ಹಾಗೂ 150 ವಿದ್ಯಾರ್ಥಿಗಳು ಇದ್ದರು.