ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರರು ತಮ್ಮ ಜೀವಿತಾವಧಿಯಲ್ಲಿ ₹5 ಲಕ್ಷದವರೆಗೂ ವೈಯಕ್ತಿಕ ಸೌಲಭ್ಯಗಳನ್ನು ಪಡೆಯಬಹುದು.
ಗಜೇಂದ್ರಗಡ: ನರೇಗಾ ಯೋಜನೆಯಲ್ಲಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಜತೆಗೆ ಶಾಲೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಕಡ್ಡಾಯವಾಗಿ ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕು. ಅಲ್ಲದೇ ನರೇಗಾದಲ್ಲಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ತಿಳಿಸಿದರು.
ತಾಲೂಕಿನ ಕುಂಟೋಜಿ ಗ್ರಾಪಂ ವ್ಯಾಪ್ತಿಯ ಬೆಣಚಮಟ್ಟಿ ಗ್ರಾಮದಲ್ಲಿ 2026- 27ನೇ ಸಾಲಿನ ನರೇಗಾ ಕ್ರಿಯಾಯೋಜನೆ ತಯಾರಿಸುವ ಕುರಿತು ಗುರುವಾರ ನಡೆದ ಗ್ರಾಮಸಭೆಯಲ್ಲಿ ಮಾತನಾಡಿದರು.ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರರು ತಮ್ಮ ಜೀವಿತಾವಧಿಯಲ್ಲಿ ₹5 ಲಕ್ಷದವರೆಗೂ ವೈಯಕ್ತಿಕ ಸೌಲಭ್ಯಗಳನ್ನು ಪಡೆಯಬಹುದು. ಅದರಲ್ಲಿ ಕೃಷಿ ಹೊಂಡ, ಎರೆಹುಳು ಘಟಕ, ಕೊಳವೆ ಬಾವಿ ಮರುಪೂರಣ ಘಟಕ, ಮೇಕೆ ಶೆಡ್, ದನದ ದೊಡ್ಡಿ, ತೋಟಗಾರಿಕೆ ಇಲಾಖೆಯಲ್ಲಿ ಪಪ್ಪಾಯಿ ಮತ್ತು ಬಾಳೆ ಹೊರತುಪಡಿಸಿ ಉಳಿದಂತೆ ಮಾವು, ಕರಿಬೇವು, ಸೀಬೆ, ನುಗ್ಗೆ, ತೆಂಗು, ಸೀತಾಫಲ ಸೇರಿದಂತೆ ದೀರ್ಘಕಾಲಿಕ ಬೆಳೆಗಳನ್ನು ನರೇಗಾದಲ್ಲಿ ಮಾಡಿಕೊಳ್ಳಲು ಅವಕಾಶವಿದೆ ಎಂದರು.ಶಾಲೆ ಅಭಿವೃದ್ಧಿಗೆ ಮೊದಲ ಆದ್ಯತೆ: ನರೇಗಾ ಯೋಜನೆಯಡಿ ಶಾಲೆಗೆ ಬೇಕಾಗುವಂತ ಶೌಚಾಲಯ, ಅಡುಗೆ ಕೋಣೆ, ಕಾಂಪೌಂಡ್, ಆಟದ ಮೈದಾನಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಪ್ರತಿ ಶಾಲೆಗಳಲ್ಲಿ ಶೌಚಾಲಯ, ಅಡುಗೆ ಕೋಣೆ, ಕಾಂಪೌಂಡ್, ಆಟದ ಮೈದಾನ ಪರಿಶೀಲಿಸಿ, ಯಾವ ಶಾಲೆಗೆ ಯಾವುದು ಅವಶ್ಯಕವಾಗಿದೆ, ಅವುಗಳನ್ನು ಕಡ್ಡಾಯವಾಗಿ ಹೆಸರನ್ನು ಸೇರಿಸಿ ಕ್ರಿಯಾಯೋಜನೆಯಲ್ಲಿ ತಯಾರಿಸಬೇಕು ಎಂದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ಪೂನಾಬಾಯಿ ರಾಠೋಡ, ಸದಸ್ಯರಾದ ಲಿಂಬಣ್ಣ ಗಡಾದ, ದೊಡ್ಡಮ್ಮ ಅಗಸಿಮನಿ, ಲಕ್ಷ್ಮವ್ವ ಕೌಡಕಿ, ಶೇಖಪ್ಪ ಪೂಜಾರ, ದುರಗಪ್ಪ ಕೋತಬಾಳ, ಪರಪ್ಪ ತೊಂಡಿಹಾಳ, ಸಂಗಪ್ಪ ಪೂಜಾರ, ರೇಷ್ಮೆ ಇಲಾಖೆ ಸುರೇಶ ಡಾಣಕ, ತೋಟಗಾರಿಕೆ ಇಲಾಖೆಯ ಮಹಾಂತೇಶ ಆಂಟಿನ್, ನರೇಗಾ ಹಾಗೂ ಪಂಚಾಯಿತಿ ಸಿಬ್ಬಂದಿ ಇತರರು ಇದ್ದರು.