ಸಾರಾಂಶ
ಫೆ.2ರಂದು ನೂತನ ಶಾಲಾ ಕಟ್ಟಡ ಉದ್ಘಾಟನೆ: ಶ್ರೀನಿವಾಸಮೂರ್ತಿ
ಕನ್ನಡ ಪ್ರಭ ವಾರ್ತೆ ಮೊಳಕಾಲ್ಮುರು
6 ವರ್ಷದಿಂದ 16ವರ್ಷದ ಒಳಗಿನ ಬುದ್ಧಿಮಾಂದ್ಯ ಮಕ್ಕಳಿಗೆ ವಿಶೇಷ ಶಿಕ್ಷಣದ ಜತಗೆ ವಸತಿ ಸೌಲಭ್ಯ ಕಲ್ಪಿಸಿ ಸುಧಾರಿತ ಮಕ್ಕಳನ್ನಾಗಿಸಲು ಬೌದ್ಧಿಕ ವಿಕಲಚೇತನ ಮಕ್ಕಳ ಶಾಲೆಯನ್ನು ಆರಂಭಿಸಲಾಗಿದ್ದು, ಫೆ.2ರಂದು ನೂತನ ಶಾಲಾ ಕಟ್ಟಡ ಉದ್ಘಾಟಿಸಲಾಗುವುದು. ಪ್ರತಿಯೊಬ್ಬರೂ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ನಮ್ಮ ಆಶ್ರಮ ಸಂಸ್ಥೆಯ ಅಧ್ಯಕ್ಷ ಮೊಳಕಾಲ್ಮೂರು ಶ್ರೀನಿವಾಸಮೂರ್ತಿ ಹೇಳಿದರು.ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಕೃಷ್ಣ ಟ್ರಸ್ಟ್ ಬೆಂಗಳೂರು ಹಾಗೂ ‘ನಮ್ಮ ಆಶ್ರಮ’ ಸಂಸ್ಥೆ ಮೊಳಕಾಲ್ಮೂರು ಇವರ ಸಹಯೋಗದೊಂದಿಗೆ ಮಹಾವನ ಬೌದ್ಧಿಕ ವಿಕಲಚೇತನ ಮಕ್ಕಳ ವಸತಿಯುಕ್ತ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬೌದ್ಧಿಕ ವಿಕಲಚೇತನ ಮಕ್ಕಳಿದ್ದ ಕುಟುಂಬಗಳು ಸಂಕಟಮಯವಾಗಿರುವುದನ್ನು ಕಾಣಲಾಗಿದೆ. ಕೆಲ ವರ್ಷಗಳ ಹಿಂದೆ ತಾಲೂಕಿನ ನಾನಾ ಗ್ರಾಮಗಳಿಗೆ ತೆರಳಿ ಅತ್ಯಂತ ಕಡು ಬಡತನದಲ್ಲಿರುವ ಕುಟುಂಬಗಳ ಬುದ್ಧಿಮಾಂದ್ಯ ಮಕ್ಕಳ ಪೋಷಣೆ ಕಷ್ಟಕರವಾಗಿದೆ. ಇಂತಹ ಮಕ್ಕಳಿಗೆ ವಿಶೇಷ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ಕರೆತಂದಲ್ಲಿ ಅವರ ಭವಿಷ್ಯ ಉಜ್ವಲಗೊಳ್ಳಲಿದೆ ಎಂದರು.ಜಿಲ್ಲೆಯಲ್ಲಿ ಸುಮಾರು 612 ಮಕ್ಕಳಿದ್ದು ಅವರನ್ನು ದಿವ್ಯಾಂಗ ಮಕ್ಕಳೆಂದು ಪರಿಗಣಿಸಲಾಗಿದೆ. ತಾಲೂಕಿನಲ್ಲಿ ಸುಮಾರು 150 ರಿಂದ 200 ಮಕ್ಕಳಿದ್ದು ಇವರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ಸುಧಾರಿತ ಮಕ್ಕಳನ್ನಾಗಿಸಲು ಶ್ರಮಿಸಲಾಗುವುದು ಎಂದರು.
ಪಟ್ಟಣದಲ್ಲಿ ಈಗಾಗಲೇ ಕಳೆದ ಎರಡು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಸಲಾಗುತ್ತಿತ್ತು. ಹಾನಗಲ್ ರಸ್ತೆಯಲ್ಲಿ ಸುಸಜ್ಜಿತ ನೂತನ ಕಟ್ಟಡ ನಿರ್ಮಿಸಲಾಗಿದೆ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಫೆ.2 ರಂದು ನೂತನ ಕಟ್ಟಡ ಉದ್ಘಾಟನ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಲಿದ್ದಾರೆ. ವಿಕಲಚೆತನರ ಹಾಗೂ ಹಿರಿಯ ನಾಗರೀಕರ ನಿರ್ದೇಶನಾಲಯದ ನಿರ್ದೇಶಕ ಟಿ.ರಾಘವೇಂದ್ರ, ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಟಿ.ಜಗಧೀಶ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಶ್ರೀಕೃಷ್ಣ ಟ್ರಸ್ಟ್ನ ಅಧ್ಯಕ್ಷ ಎಂ.ಸದಾಶಿವ ಆಗಮಿಸಲಿದ್ದಾರೆ. ನಮ್ಮ ಅಶ್ರಮದ ಬೌದ್ದಿಕ ವಿಕಲಚೇತನ ಮಕ್ಕಳ ಶಾಲೆಗೆ ಬುದ್ದಿಮಾಂದ್ಯ ಮಕ್ಕಳನ್ನು ಸೇರಿಸಿ ವಿಶೇಷ ಶಿಕ್ಷಣ ಕಲ್ಪಿಸಿ ಉತ್ತಮ ಭವಿಷ್ಯ ಕಲ್ಪಿಸಲು ಸಹಕರಿಸಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ನಮ್ಮ ಅಶ್ರಮ ಸಂಸ್ಥೆಯ ರಾಜ್ಯ ಸಂಚಾಲಕ ಯಧುಪತಿ, ಸಂಸ್ಥೆಯ ಉಪಾಧ್ಯಕ್ಷ ಶ್ರೀಧರ, ಕಾರ್ಯದರ್ಶಿ ಜನಾರ್ಧನ, ಸಂಸ್ಥೆಯ ಧರ್ಮದರ್ಶಿ ಪಿ.ವಿರುಪಾಕ್ಷಪ್ಪ ಇದ್ದರು.