ಶಾಲೆಗಳಿಗೆ ಸಾಂಸ್ಕೃತಿಕ ನೀತಿ ಬೇಕು. ಶಾಲೆಗಳು ವಿದ್ಯಾರ್ಥಿಗಳಲ್ಲಿ ಸಂವೇದನೆಯನ್ನುಂಟು ಮಾಡಬೇಕು. ಮಕ್ಕಳು ಮಾತನಾಡುವ ಪ್ರತಿಯೊಂದು ಮಾತೂ ಕೇವಲ ಪದಗಳಲ್ಲ, ಆ ಮಾತಿನ ಹಿಂದೆ ಅವರ ಆಂತರಿಕ ಸಂವೇದನೆ, ಅನುಭವ ಮತ್ತು ಮನಸ್ಥಿತಿ ಅಡಗಿರುತ್ತದೆ. ಮಕ್ಕಳಲ್ಲಿ ಸೂಕ್ಷ್ಮ ಪ್ರವೃತ್ತಿಯನ್ನು ಬೆಳೆಸುವ ಮಹತ್ವದ ಕಾರ್ಯಕ್ರಮವೇ ಸಾಹಿತ್ಯೋತ್ಸವ ಎಂದು ಜನಪದ ವಿದ್ವಾಂಸ ಹಾಗೂ ಜನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ.ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಉಳ್ಳಾಲ

ಶಾಲೆಗಳಿಗೆ ಸಾಂಸ್ಕೃತಿಕ ನೀತಿ ಬೇಕು. ಶಾಲೆಗಳು ವಿದ್ಯಾರ್ಥಿಗಳಲ್ಲಿ ಸಂವೇದನೆಯನ್ನುಂಟು ಮಾಡಬೇಕು. ಮಕ್ಕಳು ಮಾತನಾಡುವ ಪ್ರತಿಯೊಂದು ಮಾತೂ ಕೇವಲ ಪದಗಳಲ್ಲ, ಆ ಮಾತಿನ ಹಿಂದೆ ಅವರ ಆಂತರಿಕ ಸಂವೇದನೆ, ಅನುಭವ ಮತ್ತು ಮನಸ್ಥಿತಿ ಅಡಗಿರುತ್ತದೆ. ಮಕ್ಕಳಲ್ಲಿ ಸೂಕ್ಷ್ಮ ಪ್ರವೃತ್ತಿಯನ್ನು ಬೆಳೆಸುವ ಮಹತ್ವದ ಕಾರ್ಯಕ್ರಮವೇ ಸಾಹಿತ್ಯೋತ್ಸವ ಎಂದು ಜನಪದ ವಿದ್ವಾಂಸ ಹಾಗೂ ಜನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ.ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು.

ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್‌ ವೇದಿಕೆಯಲ್ಲಿ ಜರಗಿದ ಕರಾವಳಿ ಕರ್ನಾಟಕದ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನ ನಾಡು ನುಡಿ ವೈಭವದ ರತ್ನೋತ್ಸವ ೨೦೨೫ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ ರತ್ನೋತ್ಸವದಂತಹ ನಿರಂತರವಾಗಿ ಸಾಹಿತ್ಯಕ್ಕೆ ಕೊಡುಗೆಯನ್ನು ನೀಡುವ ಕಾರ್ಯಕ್ರಮಗಳನ್ನು ಸಂಘಟಿಸುವುದು ಸುಲಭದ ಕೆಲಸವಲ್ಲ. ಇಂತಹ ಸಾರ್ಥಕ ಮತ್ತು ಸಮಾಜಮುಖಿ ಪ್ರಯತ್ನಗಳ ಹಿಂದೆ ಸಂಘಟಕರ ಅಚಲ ನಿಷ್ಠೆ, ಪರಿಶ್ರಮ ಹಾಗೂ ಸಾಹಿತ್ಯದ ಮೇಲಿನ ಪ್ರೀತಿ ಅಡಗಿದೆ ಎಂದರು.

ಉಳ್ಳಾಲ ತಾಲೂಕು ಕಸಾಪ ಅಧ್ಯಕ್ಷ ಧನಂಜಯ ಕುಂಬ್ಳೆ ಅವರು ಮಾತನಾಡಿ, ಇಂಗ್ಲಿಷ್ ಶಾಲೆಗಳಿಗೆ ಕನ್ನಡದ ದೀಕ್ಷೆ ಕೊಡಬೇಕು. ಇಂಗ್ಲಿಷ್ ಭಾಷೆ ಕಲಿಸಿ. ಕನ್ನಡ ಸಂಸ್ಜೃತಿ ಬೆಳೆಸಿ. ಸೌಹಾರ್ದದ ಸಮಾಜವನ್ನು ಕಟ್ಟಬೇಕು. ಕರಾವಳಿ ಎಂದೂ ವಿಘಟನೆಯ ಬೆಂಕಿ ಕೊಟ್ಟ ನಾಡಲ್ಲ. ಸೌಹಾರ್ದದ ದೀಪ ಬೆಳಗಿದ ನಾಡು ಎಂದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಸದಾಶಿವ ಉಳ್ಳಾಲ್ ಮಾತನಾಡಿ, ಶಾಲೆಗಳು ಕೇವಲ ಪಠ್ಯಬೋಧನೆಗೆ ಮಾತ್ರ ಸೀಮಿತವಾಗದೆ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಶಿಕ್ಷಣವನ್ನು ನೀಡಬೇಕಿದೆ ಎಂದರು.

ಸಮ್ಮೇಳನಾಧ್ಯಕ್ಷ ಲೇಖಕ ಡಾ.ನರೇಂದ್ರ ರೈ ದೇರ್ಲ ಮಾತನಾಡಿ,‌ ಗೋಡೆ ಶಾಲೆಯ ಶಿಕ್ಷಣ ಪಡೆಯುವವರಿಗೆ ಲೋಕಶಾಲೆಯ ಶಿಕ್ಷಣ ದೊರಕುವಂತಾಗಲಿ. ಆಕಾರ ಕೇಂದ್ರಿತ, ಅಂಕ ಕೇಂದ್ರಿತ, ಯಂತ್ರ ಕೇಂದ್ರಿತ ಶಿಕ್ಷಣ ಇಂದು ಸಂವೇದನಾ ಶೂನ್ಯ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ. ನಮ್ಮ ನಾಡು, ನುಡಿ ಸಂಸ್ಕ್ರತಿ ಪರಂಪರೆಯನ್ನು ಯನ್ನು ಪರಿಚಯಿಸುವ ಮನದ ಮಾಲಿನ್ಯವನ್ನು ನೀಗುವ ಶಿಕ್ಷಣ ಮಕ್ಕಳಿಗೆ ದೊರಕಲಿ ಎಂದರು.

ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷರಾದ ರವೀಂದ್ರ ರೈ ಕಲ್ಲಿಮಾರು ಮೆರವಣಿಗೆಗೆ ಚಾಲನೆ ನೀಡಿದರು. ದೇರಳಕಟ್ಟೆ ರತ್ನ ಎಜ್ಯುಕೇಶನ್ ಟ್ರಸ್ಟ್ ನ ಕೋಶಾಧಿಕಾರಿ ರತ್ನಾವತಿ ಕೆ. ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ. ಪಿ. ಶ್ರೀನಾಥ್, ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಕಾರ್ಯದರ್ಶಿ ಸೂಡಿ ಸುರೇಶ್ ಬೆಂಗಳೂರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಯುಕ್ತ ದೇರಳಕಟ್ಟೆ ಬೆಳ್ಮ ಪಂಚಾಯತ್ ವಠಾರ, ಶ್ರೀ ಅಯ್ಯಪ್ಪ ದೇವಸ್ಥಾನದಿಂದ ಪೂರ್ಣ ಕುಂಭ ಕಲಶ, ಚೆಂಡೆವಾದನ, ಕೊಂಬುಕಹಳೆ, ಕಂಸಾಲೆ, ಹಾಲಕ್ಕಿ, ವೀರಗಾಸೆ, ಹುಲಿವೇಷ, ಪೂಜಾ ಕುಣಿತ, ಬಣ್ಣದ ಕೊಡೆಗಳು ಹಾಗೂ ಸೈಟ್ಸ್-ಗೈಡ್ಸ್ ವಿದ್ಯಾರ್ಥಿಗಳ ಜೊತೆಗೆ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ಜರಗಿತು.

ರತ್ನ ಎಜ್ಯುಕೇಷನ್‌ ಟ್ರಸ್ಟ್‌ ಉಪಾಧ್ಯಕ್ಷ ಮೋಹನ್‌ ದಾಸ್‌ ಶೆಟ್ಟಿ ಉಳಿದೊಟ್ಟು, ಕಾರ್ಯದರ್ಶಿ ಸೌಮ್ಯ ಆರ್.‌ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ನಯೀಮಾ ಹಮೀದ್‌, ಶಾಲಾ ವಿದ್ಯಾರ್ಥಿ ನಾಯಕ ಭವಿತ್‌ ಸುವರ್ಣ ಉಪಸ್ಥಿತರಿದ್ದರು. ರತ್ನ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ರವೀಂದ್ರ ಶೆಟ್ಡಿ ಉಳಿದೊಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ನವನೀತ್ ಶೆಟ್ಟಿ ಕದ್ರಿ ನಿರೂಪಿಸಿದರು.