ಹಾಸನ ಎಸ್‌ಆರ್‌ಎಸ್ ಪ್ರಜ್ಞಾ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

| Published : Jan 22 2024, 02:15 AM IST

ಹಾಸನ ಎಸ್‌ಆರ್‌ಎಸ್ ಪ್ರಜ್ಞಾ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಎಸ್ಆರ್‌ಎಸ್ ಪ್ರಜ್ಞಾ ವಿದ್ಯಾಶಾಲೆಯಲ್ಲಿ ಶನಿವಾರ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ವಿಗ್ಯಾನ್ ತರಂಗ್ - ೨೦೨೪ ನ್ನು ಆಯೋಜಿಸಲಾಗಿತ್ತು.

ಉಪನ್ಯಾಸಕ ಅಹಮ್ಮದ್ ಹಗರೆ, ರಾಜಗೋಪಾಲ ಶೆಟ್ಟಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಹಾಸನ

ನಗರದ ಎಸ್ಆರ್‌ಎಸ್ ಪ್ರಜ್ಞಾ ವಿದ್ಯಾಶಾಲೆಯಲ್ಲಿ ಶನಿವಾರ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ವಿಗ್ಯಾನ್ ತರಂಗ್ - ೨೦೨೪ ನ್ನು ಆಯೋಜಿಸಲಾಗಿತ್ತು.

ಕಾರ್ಯಯಕ್ರಮವನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ಕಾರ್ಯದರ್ಶಿ ಹಾಗೂ ಉಪನ್ಯಾಸಕ ಅಹಮ್ಮದ್ ಹಗರೆ ಮತ್ತು ಸಂಸ್ಥೆಯ ಅಧ್ಯಕ್ಷರಾದ ರಾಜಗೋಪಾಲ ಶೆಟ್ಟಿ ದೀಪಬೆಳಗಿಸಿ ಉಪಗ್ರಹವನ್ನೊಳಗೊಂಡ ರಾಕೆಟ್ ಮಾದರಿಯನ್ನು ಮೇಲೆರಿಸುವ ಮೂಲಕ ವಿಜ್ಞಾನ ತರಂಗ ವಸ್ತು ಪ್ರದರ್ಶವನ್ನು ಉದ್ಘಾಟಿಸಿದರು.

ನಂತರ ಮಾತನಾಡಿದ ಅಹಮ್ಮದ್ ಹಗರೆ, ಶಿಕ್ಷಕರು ಹಾಗೂ ಪೋಷಕರ ಮಾರ್ಗದರ್ಶನದಿಂದ ಮಕ್ಕಳು ತಮ್ಮ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಬಳಸಿ ಮಾದರಿಗಳನ್ನು ತಯಾರು ಮಾಡುವುದರಿಂದ ಅವರಲ್ಲಿ ವೈಜ್ಞಾನಿಕ ಅನ್ವೇಷಣೆ ಹಾಗೂ ಆಸಕ್ತಿ ಬೆಳೆದು ಭವಿಷ್ಯದಲ್ಲಿ ಅವರು ವಿಜ್ಞಾನಿಗಳಾಗುವಲ್ಲಿ ಬುನಾದಿಯಾಗುತ್ತದೆ. ವಿಜ್ಞಾನ ಕ್ಷೇತ್ರ ಶರವೇಗದಲ್ಲಿ ಬೆಳೆಯುತ್ತಿದ್ದು ಅನ್ವೇಷಣೆ ಮತ್ತು ಸಂಶೋಧನೆಗಳಿಗೆ ವಿಫುಲ ಅವಕಾಶಗಳಿರುವುದರಿಂದ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ಪ್ರತಿಯೊಂದನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಎಲ್ಲಿ? ಏಕೆ? ಹೇಗೆ? ಎಂಬಿತ್ಯಾದಿ ಪ್ರಶ್ನೆಗಳ ಮೂಲಕ ತಾರ್ಕಿಕವಾಗಿ ವಿಜ್ಞಾನದ ಪರಿಕಲ್ಪನೆಗಳನ್ನು ಮನನ ಮಾಡಿಕೊಳ್ಳಬೇಕು. ಪ್ರತಿ ವಿದ್ಯಾರ್ಥಿಯೊಳಗೊಬ್ಬ ವಿಜ್ಞಾನಿಯಿದ್ದು ಆ ವಿಜ್ಞಾನಿಯನ್ನು ಹೊರತಲು ಇಂತಹ ವಿಜ್ಞಾನ ವಸ್ತು ಪ್ರದರ್ಶನಗಳು ಭೂಮಿಕೆಯಾಗುತ್ತವೆ. ಶಿಕ್ಷಕರು ಭವಿಷ್ಯದ ಭಾವಿ ವಿಜ್ಞಾನಿಗಳನ್ನು ಶಾಲಾ ಹಂತದಿಂದಲೇ ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು ಹಾಗೂ ವಿಜ್ಞಾನವನ್ನು ವಿದ್ಯಾರ್ಥಿಗಳ ದೈನಂದಿನ ಜೀವನಕ್ಕೆ ಅನ್ವಯಿಸಿ ಪರಿಣಾಮಕಾರಿಯಾಗಿ ಬೋಧಿಸಿ ಅವರಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಮೂಡಿಸಬೇಕೆಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಅಧ್ಯಕ್ಷ ಆರ್. ರಾಜಗೋಪಾಲ ಶೆಟ್ಟಿ, ವಿಜ್ಞಾನ ವಸ್ತು ಪ್ರದರ್ಶನಗಳಲ್ಲಿ ವಿದ್ಯಾರ್ಥಿಗಳೇ ವಿಜ್ಞಾನದ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸುವುದರಿಂದ ಅವರಲ್ಲಿ ವೈಜ್ಞಾನಿಕ ಅರಿವು, ತಾರ್ಕಿಕ ಆಲೋಚನೆ, ಮನೋಸಾಮರ್ಥ್ಯ ಹಾಗೂ ಸೃಜನಶೀಲತೆಯನ್ನು ಹೊರಹೊಮ್ಮಿಸಿ, ತಾರ್ಕಿಕ ಚಿಂತನೆಯ ಮೂಲಕ ಕಲಿಕೆಯನ್ನು ಅರ್ಥಪೂರ್ಣಗೊಳಿಸಲು ಸಹಾಯಕವಾಗುತ್ತದೆ. ಭವಿಷ್ಯದ ವಿಜ್ಞಾನಿಗಳು ಇಂದಿನ ಶಾಲೆಗಳಲ್ಲಿ ರೂಪುಗೊಳ್ಳುವುದರಿಂದ ಕಿರಿಯ ವಿಜ್ಞಾನಿಗಳ ಪ್ರತಿಭೆಗಳನ್ನು ಅನಾವರಣಗೊಳಿಸಿ, ಗುರುತಿಸಿ ಪೋತ್ಸಾಹಿಸುವ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಕಾರ್ಯದರ್ಶಿ ನಟರಾಜ್. ಎಂ., ಸಂಸ್ಥೆಯ ಟ್ರಸ್ಟಿ ಆಶಾ ನಟರಾಜ್, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಎಸ್‌ಆರ್‌ಎಸ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನವನ್ನು ಸಂಸ್ಥೆಯ ಅಧ್ಯಕ್ಷರಾದ ರಾಜಗೋಪಾಲ ಶೆಟ್ಟಿ ಉದ್ಘಾಟಿಸಿದರು.