ವಿಜ್ಞಾನ ವಿಷಯವಾಗಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ವಿಜ್ಞಾನ ವಸ್ತು ಪ್ರದರ್ಶನ ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಬಿಇಒ ಸಮೀರ್ ಮುಲ್ಲಾ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ವಿಜ್ಞಾನ ವಿಷಯವಾಗಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ವಿಜ್ಞಾನ ವಸ್ತು ಪ್ರದರ್ಶನ ಇದೊಂದು ಉತ್ತಮ ವೇದಿಕೆಯಾಗಿದೆ, ವಿಜ್ಞಾನ ನಮ್ಮಲ್ಲಿರುವ ಅಂಧಕಾರ ತೊಲಗಿಸುತ್ತದೆ. ಸಮಾಜವನ್ನು ಉತ್ತಮ ರೀತಿಯಲ್ಲಿ ನಡೆಸಲು ಇದು ಅವಕಾಶ ಮಾಡಿಕೊಡುತ್ತದೆ. ಮಕ್ಕಳಲ್ಲಿ ಮೂಢನಂಬಿಕೆ ತೊಲಗಿಸಿ ವೈಜ್ಞಾನಿಕ ಮನೋಭಾವ ಬೆಳೆಸಲು ಹಾಗೂ ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಲು ಈ ಪ್ರದರ್ಶನ ಹೆಚ್ಚು ಸಹಕಾರಿಯಾಗುತ್ತದೆ ಎಂದು ಬಿಇಒ ಸಮೀರ್ ಮುಲ್ಲಾ ಹೇಳಿದರು.ಮುಧೋಳ ರಾಯಲ್ ಸ್ಕೂಲ್ ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮುಧೋಳ ರಾಯಲ್ ಎಕ್ಸಪೋ 2025-26 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಜ್ಞಾನ ವೃದ್ಧಿಗೆ ಪ್ರದರ್ಶನಗಳು ಪೂರಕವಾಗಿವೆ. ಅವರಲ್ಲಿ ಗಣಿತ, ವಿಜ್ಞಾನ, ತಂತ್ರಜ್ಞಾನ, ಕೃಷಿ, ಉದ್ಯಮೆ, ಪರಿಸರ ಕಾಳಜಿ ಹಾಗೂ ಚರಿತ್ರೆಯ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಅವರಲ್ಲಿರುವ ಸೃಜನಶೀಲತೆಗೆ ಉತ್ತೇಜನ ಸಿಗುತ್ತದೆ. ವಿಜ್ಞಾನ ಎಂದರೆ ಒಂದು ಸಂಜೀವಿನಿಯಂತೆ ಬದುಕಿನಲ್ಲಿ ನಮಗೆ ಜ್ಞಾನ ಹಾಗೂ ಸರಿಯಾದ ಪ್ರಜ್ಞೆ ಬರಬೇಕೆಂದರೆ ವಿಜ್ಞಾನದ ಅವಶ್ಯಕತೆ ಇದೆ ಎಂದು ಹೇಳಿ, ಮುಧೋಳ ರಾಯಲ್ ಸ್ಕೂಲ್ ಎಂದರೆ ವಿಶೇಷ ವಿನೂತನ ಕಾರ್ಯಕ್ರಮ ರೂಪಿಸುವ ಕಣಜ. ಇಂದಿನ ಯುಗವನ್ನು ಜ್ಞಾನದ ಯುಗ, ವಿಜ್ಞಾನದ ಯುಗ ಎಂದು ಹೇಳಬಹುದು. ಮಕ್ಕಳಿಗೆ ಅನ್ವೇಷಣೆ, ಸಂಶೋಧನೆ ಹಾಗೂ ಸೃಜನಾತ್ಮಕ ಮನೋಧೋರಣೆಯನ್ನು ಬೆಳೆಸಲು ಇಂತಹ ವಿಜ್ಞಾನ ವಸ್ತು ಪ್ರದರ್ಶನ ಅನುಕೂಲವಾಗಿದೆ ಎಂದು ಹೇಳಿದರು.
ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ತಿಮ್ಮಣ್ಣ ಅರಳಿಕಟ್ಟಿ ಅಧ್ಯಕ್ಷತೆವಹಿಸಿ ಸಾಂದರ್ಭಿಕವಾಗಿ ಮಾತನಾಡಿದರು.ತಾ.ಪಂ ಎಂ.ಐ.ಅಂಬಿಗೇರ, ವಲಯ ಅರಣ್ಯಾಧಿಕಾರಿ ಎಚ್.ಬಿ. ಡೋಣಿ, ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ತಿ.ಅರಳಿಕಟ್ಟಿ, ಕಾರ್ಯದರ್ಶಿ ವಿನಾಯಕ ತಿ.ಅರಳಿಕಟ್ಟಿ, ರಾಯಲ್ ಸ್ಕೂಲ್ ಉಪಾಧ್ಯಕ್ಷೆ ರಾಜೇಶ್ವರಿ ಕೋಮಾರ, ಆಡಳಿತಾಧಿಕಾರಿ ಇಂದಿರಾ ಸಾತನೂರ ವೇದಿಕೆ ಮೇಲಿದ್ದರು ಮುಧೋಳ ರಾಯಲ್ ಸ್ಕೂಲ್ ಮುಖ್ಯಶಿಕ್ಷಕ ಚಂದ್ರಶೇಖರ ಆರ್. ನಾಗವಂದ ನಿರೂಪಿಸಿ, ವಂದಿಸಿದರು.
ಮುಧೋಳ ರಾಯಲ್ ಎಕ್ಸಪೋ ನಲ್ಲಿ ನರ್ಸರಿಯಿಂದ 10ನೇ ತರಗತಿಯ ಮಕ್ಕಳು ಸಿದ್ಧಪಡಿಸಿಕೊಂಡು ಬಂದಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಚಂದ್ರಯಾಣ, ತಂತ್ರಜ್ಞಾನ, ಗಣಿತ, ವಿಜ್ಞಾನದ ಆವಿಷ್ಕಾರಗಳು, ಪ್ರಾಕೃತಿಕ ಪರಿಸರ ಸಂಪತ್ತು ರಕ್ಷಣೆ, ಐತಿಹಾಸಿಕ ಸ್ಥಳಗಳು, ಬಣ್ಣಗಳ ವರ್ಗೀಕರಣ, ಬೆಳಕಿನ ಶಕ್ತಿ ಬಳಕೆ, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ ಪಕ್ಷಿ ಸಂರಕ್ಷಣೆ, ಹಸಿರು ಯೋಜನೆ, ಆಹಾರ ಪದ್ಧತಿ, ಆಧುನಿಕ ಮನುಷ್ಯರ ಜೀವನ ಶೈಲಿ, ಯಂತ್ರಗಳ ಬಳಕೆ ಸೇರಿದಂತೆ ವಿದ್ಯಾರ್ಥಿಗಳು ಪ್ರದರ್ಶಿಸಿದ 150ಕ್ಕೂ ಹೆಚ್ಚು ವಿವಿಧ ಮಾದರಿಗಳು ಶಿಕ್ಷಕರ ಮತ್ತು ಪೋಷಕರ ಗಮನ ಸೆಳೆದವು.