ಕನ್ನಡಪ್ರಭ ವಾರ್ತೆ ನಾಗಮಂಗಲ

ಹೊರಗಿನಿಂದ ನೋಡಿದಾಗ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಜಗತ್ತು ಬೇರೆ ವಿಷಯಗಳಂತೆ ಕಂಡರೂ ಜ್ಞಾನದ ದೃಷ್ಟಿಯಿಂದ ಅವಲೋಕಿಸಿದಾಗ ಅವೆರಡೂ ವ್ಯವಸ್ಥಿತವಾಗಿ ಸಂಪರ್ಕ ಹೊಂದಿರುವುದು ಅರ್ಥವಾಗುತ್ತದೆ ಎಂದು ಆದಿಚುಂಚನಗಿರಿ ಫೀಠಾಧ್ಯಕ್ಷ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಸಭಾಂಗಣದಲ್ಲಿ ಆದಿಚುಂಚನಗಿರಿ ಅಣ್ವಿಕ ವೈದ್ಯಕೀಯ ಸಂಸ್ಥೆ, ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಅನುವಾದಾತ್ಮಕ ಸಂಶೋಧನೆಗಾಗಿ ಆರೋಗ್ಯ ವಿಜ್ಞಾನಗಳಲ್ಲಿ ಅಂತರಶಿಸ್ತೀಯ ವಿಧಾನಗಳು ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪರಮ ಪ್ರಜ್ಞೆಯು ಪ್ರಕೃತಿ ಮೂಲಕ ತನ್ನನ್ನು ತಾನು ಅಭಿವ್ಯಕ್ತಗೊಳಿಸಲು ಬಯಸಿದಾಗ, ಮೊದಲು ಅದು ಗಣಿತದ ಸಮೀಕರಣಗಳ ಮೂಲಕ ವ್ಯಕ್ತವಾಗುತ್ತದೆ. ಅದ್ಭುತವಾದ ಭೌತಿಕ ನಿಯಮಗಳು, ಜೈವಿಕ ಸೃಷ್ಟಿ, ಇವೆಲ್ಲವೂ ಅದರ ಸೊಗಸಾದ ಸಮರೂಪತೆಯನ್ನು ಬಿಂಬಿಸುತ್ತವೆ. ಇನ್ನೂ ಆಳವಾಗಿ ಗಮನಿಸಿದಾಗ ಈ ಜಗತ್ತು ಕೇವಲ ಜಡವಸ್ತುವಿಗಿಂತ ಹೆಚ್ಚಾಗಿ ಒಂದು ಶುದ್ಧ ಪ್ರಜ್ಞೆಯಂತೆ ಕಾಣುತ್ತದೆ ಎಂದರು.

ಈ ವಿಶ್ವವಿದ್ಯಾಲಯದಲ್ಲೇ ನಾವು ವೈದ್ಯಕೀಯ, ಅಣ್ವಿಕ ಜೀವಶಾಸ್ತ್ರ, ಎಂಜಿನಿಯರಿಂಗ್ ತಂತ್ರಜ್ಞಾನ ಮತ್ತು ಅದರಲ್ಲೇ ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್, ಬಿಗ್ ಡೇಟಾ ಹೀಗೆ ಹತ್ತಾರು ಬಗೆಯ ವಿಭಾಗಗಳಿವೆ. ಇವೆಲ್ಲವೂ ಪ್ರತ್ಯೇಕವಾಗಿರುವಂತೆ ಕಾಣುತ್ತವೆ. ಆದರೆ ಇವುಗಳನ್ನು ಒಂದಕ್ಕೊಂದು ಹೇಗೆ ಜೋಡಿಸಬೇಕು ಎಂದು ತಿಳಿದಿದ್ದರೆ ಈ ವಿಭಿನ್ನ ವಿಭಾಗಗಳು ಪ್ರಸ್ತುತ ಇರುವ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಬಲ್ಲವು ಎಂದು ಹೇಳಿದರು.ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ವಿಭಿನ್ನ ಪರಿಹಾರಗಳೊಂದಿಗೆ ನೀವು ಹೇಗೆ ಮುಂದೆ ಬರುತ್ತೀರಿ ಮತ್ತು ಜನರನ್ನು ತಲುಪುತ್ತೀರಿ ಎಂಬುದನ್ನು ತಿಳಿಯಲು ಮತ್ತು ಅರ್ಥಮಾಡಿಕೊಳ್ಳಲು ಈ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.


ತಿರುಪತಿ ಎಸ್‌ಇಆರ್‌ಬಿ ನ್ಯಾಷನಲ್ ಸೈನ್ಸ್ ಚೇರ್ ಮತ್ತು ಐಐಎಸ್‌ಇಆರ್‌ನ ಮಾಜಿ ನಿರ್ದೇಶಕ ಪ್ರೊ.ಕೆ.ಎನ್.ಗಣೇಶ ಮಾತನಾಡಿ, ರಸಾಯನಶಾಸ್ತ್ರವು ಕೇವಲ ಹೊಸ ಔಷಧಿಗಳನ್ನು ಕಂಡುಹಿಡಿಯುವಲ್ಲಿ ಮತ್ತು ಅಭಿವೃದ್ಧಿಪಡಿಸುವಲ್ಲಿ ಮಾತ್ರವಲ್ಲದೆ, ಅತ್ಯಗತ್ಯ ಔಷಧಿಗಳನ್ನು ಕೈಗೆಟುಕುವಂತೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ. ಇತ್ತೀಚಿನ ದಿನಗಳಲ್ಲಿ, ಕ್ಲಿನಿಕಲ್ ಪ್ರಯೋಗಗಳಿಂದ ಪಡೆದ ಬೃಹತ್ ದತ್ತಾಂಶಗಳ ವಿಶ್ಲೇಷಣೆ ಮತ್ತು ತಿಳಿವಳಿಕೆಗೆ ಗಣಿತಶಾಸ್ತ್ರದ ಚೌಕಟ್ಟು ಅತ್ಯಂತ ನಿರ್ಣಾಯಕವಾಗಿದೆ ಎಂದರು.

ಸಾಂಕ್ರಾಮಿಕ ರೋಗಶಾಸ್ತ್ರದ ಮಾದರಿಗಳನ್ನು ಸುಧಾರಿಸಲು, ಕ್ಲಿನಿಕಲ್ ಪ್ರಯೋಗಗಳನ್ನು ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿ ಪಡಿಸಲು ಹಾಗೂ ಗೆಡ್ಡೆಯ ಡೈನಾಮಿಕ್ಸ್‌ಅನ್ನು ಅರ್ಥಮಾಡಿಕೊಳ್ಳಲು ಗಣಿತದ ಕೌಶಲ್ಯಗಳು ಮುಖ್ಯವಾಗಿವೆ ಎಂದರು.

ಉದಯೋನ್ಮುಖ ಕೃತಕ ಬುದ್ಧಿಮತ್ತೆಯು ಆರೋಗ್ಯ ರಕ್ಷಣೆಯಲ್ಲಿ ವೈವಿಧ್ಯಮಯ ಅನ್ವಯಿಕೆಗಳನ್ನು ಹೊಂದಿದೆ. ಕಳೆದ 40 ವರ್ಷಗಳಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಪಡೆದವರಲ್ಲಿ 15 ಕ್ಕೂ ಹೆಚ್ಚು ಜನರು ರಸಾಯನಶಾಸ್ತ್ರ, ಭೌತಶಾಸ್ತ್ರ ಅಥವಾ ಇಂಜಿನಿಯರಿಂಗ್ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಈ ಸಮ್ಮೇಳನವು ಇಂತಹ ಹಲವು ಸವಾಲುಗಳನ್ನು ಚರ್ಚಿಸುತ್ತದೆ ಎಂಬ ಖಾತ್ರಿಯಿದೆ ಎಂದರು.

ಆರೋಗ್ಯ ವಿಜ್ಞಾನಕ್ಕೆ ಸಂಬಂಧಿಸಿದ ಅಂತರಶಿಸ್ತೀಯ ಮತ್ತು ಪ್ರಾಯೋಗಿಕ ಆಯಾಮಗಳು ಯುವ ಸಂಶೋಧಕರಿಗೆ ಈ ವಿಧಾನಗಳ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸಲಿ ಮತ್ತು ಅವುಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಲಿ ಎಂದರು.

ಸಮಾರಂಭದಲ್ಲಿ ಶಾಸಕ ಎನ್.ಚಲುವರಾಯಸ್ವಾಮಿ, ಮೈಸೂರು ವಿವಿ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿವಿ ಮಾಜಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಜಪಾನಿನ ಹೊಕ್ಕೈಡೋ ವಿವಿ ಫ್ಯಾಕಲ್ಟಿ ಆಫ್ ಅಡ್ವಾನ್ಸ್ಡ್ ಲೈಫ್ ಸೈನ್ಸ್ ಹಿರಿಯ ಪ್ರೊಫೆಸರ್ ಶಿನ್ ಇಚಿರೋ ನಿಶಿಮುರಾ ಸಮ್ಮೇಳನ ಕುರಿತು ಮಾತನಾಡಿದರು. ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಎನ್.ಎಸ್.ಶ್ರೀಧರ, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು ಸೇರಿದಂತೆ ಹಲವರು ಇದ್ದರು.