ಕರ್ನಾಟಕದ ಸಹಕಾರಿ ರಂಗಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಇದು ಸಹಕಾರಿ ಚಳವಳಿಯ ಉಗಮ ಸ್ಥಾನವಾಗಿದೆ. ರೈತರ ಹಿತ ಕಾಯಲು ಸಹಕಾರಿ ಸಂಘಗಳ ಅಗತ್ಯವಿದೆ.
ಶಿರಹಟ್ಟಿ: ರೈತರ ಆದಾಯ ಮತ್ತು ಬದುಕು ಸ್ಥಿರವಾಗಬೇಕಾದರೆ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ಪಟ್ಟಣದಲ್ಲಿ ಭಾನುವಾರ ಸಂಜೆ ದಿ ಶಿರಹಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟಿಸಿ ಮಾತನಾಡಿ, ಕರ್ನಾಟಕದ ಸಹಕಾರಿ ರಂಗಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಇದು ಸಹಕಾರಿ ಚಳವಳಿಯ ಉಗಮ ಸ್ಥಾನವಾಗಿದೆ. ರೈತರ ಹಿತ ಕಾಯಲು ಸಹಕಾರಿ ಸಂಘಗಳ ಅಗತ್ಯವಿದೆ ಎಂದರು.ರೈತರ ಬೆಳೆಗಳನ್ನು ಮಧ್ಯವರ್ತಿಗಳ ಕಾಟವಿಲ್ಲದೆ, ಕಮಿಷನ್ ಇಲ್ಲದೆ ನೇರವಾಗಿ ಮಾರಾಟ ಮಾಡಿ ಉತ್ತಮ ಬೆಲೆ ಪಡೆಯಲಿ ಎಂಬ ಸದುದ್ದೇಶದಿಂದ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗಿತ್ತು. ಎಪಿಎಂಸಿ ಹಾಗೂ ಈ ಸಹಕಾರಿ ಸಂಸ್ಥೆಗಳು ರೈತರ ಬೆನ್ನೆಲುಬಾಗಿ ನಿಲ್ಲಲು ಹುಟ್ಟಿಕೊಂಡವು ಎಂದರು.ಇಡೀ ರಾಜ್ಯದಲ್ಲಿ ಸಹಕಾರಿ ಸಂಸ್ಥೆಗಳ ಪರಿಸ್ಥಿತಿ ಮೊದಲಿನಂತಿಲ್ಲ. ಅನೇಕ ಕಡೆ ಖರೀದಿದಾರರಿಂದ ರೈತರಿಗೆ ಸಕಾಲದಲ್ಲಿ ಹಣ ಸಂದಾಯವಾಗದ ಕಾರಣ ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಹುಬ್ಬಳ್ಳಿ- ಧಾರವಾಡ ಸೇರಿದಂತೆ ರಾಜ್ಯದ ಪ್ರಮುಖ ಭಾಗಗಳಲ್ಲಿ ಇವುಗಳ ಸ್ಥಿತಿ ಸುಧಾರಿಸಬೇಕಿದೆ. ಆದರೆ, ಗದಗ ಜಿಲ್ಲೆಯು ಮೊದಲಿನಿಂದಲೂ ಸಹಕಾರಿ ರಂಗದಲ್ಲಿ ಮುಂಚೂಣಿಯಲ್ಲಿದ್ದು, ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲೂ ಈ ಸಂಸ್ಥೆಯು ರೈತರಿಗೆ ಇನ್ನಷ್ಟು ಹೆಚ್ಚಿನ ಸೇವೆ ನೀಡುವಂತಾಗಲಿ ಎಂದರು.ಡಿಸಿಸಿ ಬ್ಯಾಂಕ್ ಈ ಹಿಂದೆ ಕೇವಲ ₹೬೦೦ ಕೋಟಿ ಸಾಲ ನೀಡುತ್ತಿತ್ತು. ಆದರೆ ಈಗ ಕೇವಲ ಶೇ. ೩ರ ಬಡ್ಡಿದರದಲ್ಲಿ ಸುಮಾರು ₹೧,೧೦೦ ಕೋಟಿಗೂ ಅಧಿಕ ಹಣವನ್ನು ರೈತರಿಗೆ ಹಾಗೂ ವಿವಿಧ ಸಹಕಾರ ಸೊಸೈಟಿಗಳಿಗೆ ವಿತರಿಸಲಾಗಿದೆ. ತಾವು ನೀರಾವರಿ ಸಚಿವರಾಗಿದ್ದ ಅವಧಿಯಲ್ಲಿ ನಬಾರ್ಡ್ ನೆರವಿನೊಂದಿಗೆ ಕೃಷಿ ಮೂಲ ಸೌಕರ್ಯ ನಿಧಿಯನ್ನು ಆರಂಭಿಸಲಾಗಿತ್ತು. ಈ ಯೋಜನೆಯಡಿ ಕೋಲ್ಡ್ ಸ್ಟೋರೇಜ್(ಶೀತಲೀಕರಣ ಘಟಕ) ಸ್ಥಾಪನೆಗೆ ₹೫೦ ಕೋಟಿಯವರೆಗೆ ಹಣಕಾಸಿನ ನೆರವು ಸಿಗುತ್ತದೆ. ಅಲ್ಲದೆ, ರೈತರು ವೈಯಕ್ತಿಕವಾಗಿ ಗೋದಾಮುಗಳನ್ನು(ರೈತರ ಉಗ್ರಾಣ) ನಿರ್ಮಿಸಿಕೊಳ್ಳಲು ಯಾವುದೇ ಮಿತಿಯಿಲ್ಲದೆ ಸಾಲ ಸೌಲಭ್ಯ ದೊರೆಯುತ್ತದೆ ಎಂದರು.
ಫಕೀರಸಿದ್ದರಾಮ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕ ಡಾ. ಚಂದ್ರು ಲಮಾಣಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ್, ಎಂ.ಎಸ್. ದೊಡ್ಡಗೌಡ್ರ ಮಾತನಾಡಿದರು. ಟಿಎಪಿಸಿಎಂಎಸ್ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಶಿವಪ್ರಕಾಶ ಮಹಾಜನಶೆಟ್ಟರ, ಜಿ.ವಿ. ಪಾಟೀಲ, ಸಿ.ಸಿ. ನೂರಶೆಟ್ಟರ, ತಿಪ್ಪಣ್ಣ ಕೊಂಚಿಗೇರಿ, ಎಲ್.ಡಿ. ಪಾಟೀಲ, ರಾಜು ಕುರಡಗಿ, ನಾಗರಾಜ ಲಕ್ಕುಂಡಿ, ಸೂರ್ಯಕಾಂತ ಕಪ್ಪತ್ತನವರ, ಸಂದೇಶ ಗಾಣಗೇರ, ಸಂದೀಪ ಕಪ್ಪತ್ತನವರ ಇದ್ದರು.