ಬೀದರ್‌ ನಗರದಲ್ಲಿ ಪರಂಪರೆ ಸ್ಕೌಟ್ಸ್, ಗೈಡ್ಸ್ ಕಲರವ

| Published : Feb 09 2024, 01:53 AM IST

ಬೀದರ್‌ ನಗರದಲ್ಲಿ ಪರಂಪರೆ ಸ್ಕೌಟ್ಸ್, ಗೈಡ್ಸ್ ಕಲರವ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ-ಕರ್ನಾಟಕ ಪ್ರಥಮ ಜಾಂಬೊರೇಟ್‌ಗೆ ಚಾಲನೆ. ವಿವಿಧ ಜಿಲ್ಲೆಯಿಂದ 3500ಕ್ಕೂ ಹೆಚ್ಚು ವಿದ್ಯಾರ್ಥಿ ಭಾಗಿ. ನೆಹರು ಕ್ರೀಡಾಂಗಣದಿಂದ ಮೊಹನ್ ಮಾರ್ಕೆಟ್, ಹಳೆಯ ಬಸ್‌ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಭಗತ್‌ಸಿಂಗ್ ವೃತ್ತ, ಮಹಾವೀರ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದ ವರೆಗೆ ಜಾಥಾ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್‌

ನಗರದಲ್ಲಿ ಐದು ದಿನಗಳ ವರೆಗೆ ಕಲ್ಯಾಣ ಕರ್ನಾಟಕದ ಪ್ರಥಮ ಜಾಂಬೊರೇಟ್ ಪರಂಪರೆ ಗುರುವಾರ ಆರಂಭಗೊಂಡಿದೆ.

ನಗರದ ಶಹಾಪುರ ಗೇಟ್ ಸಮೀಪದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಪರಿಸರದಲ್ಲಿ ತೆರೆದ ಜೀಪ್‌ನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಮುಖರ ಮೆರವಣಿಯೊಂದಿಗೆ ಜಾಂಬೊರೇಟ್ ಚಟುವಟಿಕೆಗಳಿಗೆ ಚಾಲನೆ ದೊರಕಿತು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದಿಂದ ಹಮ್ಮಿಕೊಳ್ಳಲಾಗಿತ್ತು. ಬ್ಯಾಂಡ್ ಜತೆಗೆ ತೆರೆದ ಜೀಪ್‌ನಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯ, ಜಾಂಬೋರೇಟ್ ಮುಖ್ಯಸ್ಥ ಡಾ. ಅಬ್ದುಲ್ ಖದೀರ್, ಹೆಚ್ಚುವರಿ ಮುಖ್ಯಸ್ಥೆ ಗುರಮ್ಮ ಸಿದ್ದಾರೆಡ್ಡಿ ಅವರ ಮೆರವಣಿಗೆ ನಡೆಯಿತು.

ಸಮವಸ್ತ್ರ ಧರಿಸಿದ್ದ ಸ್ಕೌಟ್ಸ್ ಹಾಗೂ ಗೈಡ್ಸ್‌ಗಳು ಗಣ್ಯರ ಮೇಲೆ ಪುಷ್ಪವೃಷ್ಟಿ ಮಾಡಿದರು. ಗೌರವ ವಂದನೆ ಸಲ್ಲಿಸಿದರು. ಜಾಂಬೊರೇಟ್ ಗೀತೆ ಹಾಡಿ, ನರ್ತನ ಮಾಡಿ ಸಂಭ್ರಮಿಸಿದರು. ಬಳಿಕ ನೆಹರು ಕ್ರೀಡಾಂಗಣದಿಂದ ಮೊಹನ್ ಮಾರ್ಕೆಟ್, ಹಳೆಯ ಬಸ್ ನಿಲ್ದಾಣ, ಜಿಲ್ಲಾಧಿಕಾರಿ ಕಚೇರಿ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಭಗತ್‌ಸಿಂಗ್ ವೃತ್ತ, ಮಹಾವೀರ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದ ವರೆಗೆ ಜಾಥಾ ಜರುಗಿತು.

ಕೈಯಲ್ಲಿ ಆಯಾ ಜಿಲ್ಲೆಗಳ ಬ್ಯಾನರ್ ಹಿಡಿದುಕೊಂಡಿದ್ದ ಸ್ಕೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್ಸ್‌ಗಳು ಜಾಂಬೊರೇಟ್ ಗೀತೆ ಹಾಡುತ್ತ ಶಿಸ್ತಿನಿಂದ ಸಾಗಿದರು. ಬ್ಯಾಂಡ್ ಜಾಥಾದ ಮೆರಗು ಹೆಚ್ಚಿಸಿತು.

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ 3,500 ಸ್ಕೌಟ್ಸ್, ಗೈಡ್ಸ್, ರೋವರ್ಸ್ ಹಾಗೂ ರೇಂಜರ್ಸ್‌ಗಳು ಭಾಗವಹಿಸಿದ್ದರು.

ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಜಾಥಾಗೆ ಚಾಲನೆ ನೀಡಿದರು.

ಜಾಂಬೊರೇಟ್ ಮುಖ್ಯಸ್ಥ ಡಾ. ಅಬ್ದುಲ್ ಖದೀರ್, ಹೆಚ್ಚುವರಿ ಮುಖ್ಯಸ್ಥೆ ಗುರಮ್ಮ ಸಿದ್ಧಾರೆಡ್ಡಿ, ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಘಟನಾ ಆಯುಕ್ತೆ ಮಲ್ಲೇಶ್ವರಿ ಜುಜಾರೆ, ಕಾರ್ಯದರ್ಶಿ ಕೆ. ಗಂಗಪ್ಪ ಗೌಡ, ಗೈಡ್ ರಾಜ್ಯ ಆಯುಕ್ತೆ ಗೀತಾ ನಟರಾಜ, ಸ್ಕೌಟ್ ಆಯುಕ್ತ ಖಾಲೀದ್, ಕಲಬುರಗಿ ವಿಭಾಗೀಯ ಆಯುಕ್ತ ಸಿ.ಬಿ. ಪಾಟೀಲ ಓಕಳಿ, ಡಾ. ಕುಗ್ಗಲ್ ವೀರೇಶ, ವಿಜಯಸಿಂಗ್, ನಾಗರಾಜ, ಬೇಬಿ ಮ್ಯಾಥ್ಯೂ, ಗಜಾನನ ಮನಿಕೇರಿ, ಜಾಂಬೊರೇಟ್ ಕಾರ್ಯದರ್ಶಿ ಎಚ್.ಬಿ. ಭರಶೆಟ್ಟಿ, ಖಜಾಂಚಿ ತೌಸಿಫ್, ಬಾಬುರಾವ್ ನಿಂಬೂರೆ, ಅನಿಲ್ ಶಾಸ್ತ್ರಿ, ಶಾಮಲಾ ಕೆ.ವಿ. ಕೃಪಾ ವಿಜಯ್, ರಾಮಲತಾ ಮೊದಲಾದವರು ಪಾಲ್ಗೊಂಡಿದ್ದರು.

ಸಂಜೆ ಶಾಹೀನ್ ಕಾಲೇಜು ಆವರಣದಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವೈಭವ ಪ್ರದರ್ಶನ ನಡೆಯಿತು. ಜಾಂಬೊರೇಟ್ ಫೆ.12 ರವರೆಗೆ ಜರುಗಲಿದೆ.