ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕೊಡಗು ಜಿಲ್ಲಾ ಸಂಸ್ಥೆಯ ವಾರ್ಷಿಕ ಮಹಾಸಭೆ ನಡೆಯಿತು. ಉಪವಿಭಾಗಾಧಿಕಾರಿ ನಿತಿನ್‌ ಚಕ್ಕಿ ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ವಾರ್ಷಿಕ ಮಹಾಸಭೆಯು ಸೋಮವಾರ ಪೊನ್ನಮ್ಮ ಕುಶಾಲಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ಭವನ ಸಭಾಂಗಣದಲ್ಲಿ ಕೊಡಗು ಜಿಲ್ಲೆಯ ಉಪ ವಿಭಾಗಧಿಕಾರಿ ನಿತಿನ್ ಚಕ್ಕಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.2024-2025 ನೇ ಸಾಲಿನಲ್ಲಿ ನಿಧನರಾದ ಸೋಮವಾರಪೇಟೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್, ಸಾವಿತ್ರಿ, ಗೈಡ್ ವಿಭಾಗದ ಸಂಘಟಕರಾಗಿದ್ದ ಜಾನಕಿ ವೇಣುಗೋಪಾಲ್ ಅವರಿಗೆ ಸಂತಾಪ ಸೂಚಿಸಲಾಯಿತು.

ಪ್ರಾಸ್ತವಿಕವಾಗಿ ಜಿಲ್ಲಾ ಸ್ಕೌಟ್ ಆಯುಕ್ತರಾದ ಜಿಮ್ಮಿ ಸಿಕ್ವೇರಾ ಅವರು ಮಾತನಾಡಿದರು. ಹಿಂದಿನ ಸಾಲಿನ ವರದಿಯನ್ನು ಜಿಲ್ಲಾ ಕಾರ್ಯದರ್ಶಿಯವರಾದ ಎಂ.ಎಂ ವಸಂತಿ ಅವರು ಮಂಡಿಸಿದರು. 2024-2025ನೇ ಸಾಲಿನ ವಾರ್ಷಿಕ ಚಟುವಟಿಕೆಯ ಕಾರ್ಯಕ್ರಮವನ್ನು ಸುಧೀರ್ಘವಾಗಿ ಜಿಲ್ಲಾ ಸಂಘಟಕರಾದ ಯು.ಸಿ.ದಮಯಂತಿ ಅವರು ಮಂಡಿಸಿದರು. 2025-2026ನೇ ಸಾಲಿನ ಕಾರ್ಯಯೋಜನೆ ಬಗ್ಗೆ ಕುಶಾಲನಗರ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಅವರು ಮಂಡಿಸಿದರು. 2024-2025 ನೇ ಸಾಲಿನ ಲೆಕ್ಕಪತ್ರ ಆಡಿಟ್ ವರದಿಯನ್ನು, 2025-2026ನೇ ಆಯವ್ಯಯವನ್ನು ಜಿಲ್ಲಾ ಸಂಸ್ಥೆಯ ಖಜಾಂಜಿಯವರಾದ ಟಿ.ಎಂ.ಮುದ್ದಯ್ಯ ಅವರು ಮಂಡಿಸಿದರು. ಉತ್ತಮ ಸಂಸ್ಥೆ:

ಪೊನ್ನಂಪೇಟೆ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಕಾಳಿಮಾಡ ಮೋಟಯ್ಯ ಮಾತನಾಡಿ ಹಲವಾರು ಸಂಸ್ಥೆಗಳು ಇದ್ದರೂ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಸ್ಕೌಟ್ಸ್ ಗೈಡ್ ಸಂಸ್ಥೆಯು ಉತ್ತಮ ಸಂಸ್ಥೆಯಾಗಿದೆ ಎಂದು ನುಡಿದರು.

ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಡಾ.ಪ್ರವೀಣ್ ದೇವರಗುಂಡ ಮಾತನಾಡಿ ಕುಶಾಲನಗರದಲ್ಲಿ ಎಲ್ಲಾ ದಾನಿಗಳ ಸಹಕಾರದಿಂದ, ಜಿಲ್ಲಾ ಸಂಸ್ಥೆಯ ಸಹಾಯದಿಂದ 24ರ ಡಿಸೆಂಬರ್‌ನಲ್ಲಿ ಅತ್ಯುತ್ತಮ ರ‍್ಯಾಲಿಯನ್ನು ಮಾಡಿದ್ದೇವೆ. ಮತ್ತು ನಾನು ಈ ಸಂಸ್ಥೆಗೆ ಅನಿರೀಕ್ಷಿತವಾಗಿ ಅಧ್ಯಕ್ಷನಾದೆ ನಾವು ಮಾಡುವ ಕಾರ್ಯಕ್ರಮದಿಂದ 10 ಮಕ್ಕಳಿಗೆ ಒಳ್ಳೆಯದಾದರು ದೇಶಕ್ಕೆ ಒಳ್ಳೆಯದು. ನಾನು ಶಾಲಾ ಸಮಯದಲ್ಲಿ ಸ್ಕೌಟ್ ಆಗಿದೆ ಎಂದು ನುಡಿದರು. ಅಲ್ಲದೆ ಮುಂದಕ್ಕೂ ಕೂಡ ಕುಶಾಲನಗರದಲ್ಲಿ ಮಕ್ಕಳಿಗಾಗಿ ಉತ್ತಮ ಕಾರ್ಯಕ್ರಮಗಳನ್ನು ಎಲ್ಲರ ಸಹಕಾರದೊಂದಿಗೆ ಮಾಡುತ್ತೇವೆ ಎಂದು ನುಡಿದರು.ಸೋಮವಾರಪೇಟೆ ಸ್ಥಳೀಯ ಸಂಸ್ಥೆಯ ಗೈಡ್ ಕ್ಯಾಪ್ಟನ್ ಚಂದ್ರಕಲಾ ಮಾತನಾಡಿ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದ್ದು. ಮುಂದಿನ ದಿನಗಳಲ್ಲಿ ಪಿ.ಪಿ.ಟಿ ಮೂಲಕ ತೋರಿಸಬೇಕೆಂದು ಸಲಹೆ ನೀಡಿದ್ದರು.

ಅಂಕೂರ್ ಶಾಲೆಯ ಸ್ಕೌಟ್ ಮಾಸ್ಟರ್ ಮತ್ತು ವಿಧ್ಯಾರ್ಥಿಗಳು ಲಕ್ನೋದಲ್ಲಿ ನಡೆದ ಜಾಂಬೂರಿಯಲ್ಲಿ ಭಾಗವಹಿಸಿ ಅಲ್ಲಿಯ ಅನುಭವವನ್ನು ತಿಳಿಸಿದರು.ಜಿಲ್ಲಾ ಪ್ರಧಾನ ಆಯುಕ್ತರಾದ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ಕುಶಾಲನಗರ ಸ್ಥಳೀಯ ಸಂಸ್ಥೆಯವರು ಪ್ರಸ್ತುತ ಸಾಲಿನಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದ್ದು. 2024-2025ನೇ ಸಾಲಿನ ಉತ್ತಮ ಸ್ಥಳೀಯ ಸಂಸ್ಥೆ ಎಂದು ಗುರುತಿಸಲ್ಪಟಿದ್ದು. ಮುಂದಿನ ದಿನಗಳಲ್ಲಿ ಅವರನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು. ರಾಜ್ಯ ಸಂಸ್ಥೆಯಿಂದ ತರಬೇತಿ ಭವನ ಕಟ್ಟಲು 2 ಕೋಟಿ ಅನುದಾನ ಬಿಡುಗಡೆ ಮಾಡಲಿದ್ದು ಅದಕ್ಕೆ ಜಾಗದ ಈ ಖಾತೆ ಆಗಬೇಕಾಗಿದ್ದು ಇದನ್ನು ಮಾಡಿಸಿ ಕೊಡುವಂತೆ ಉಪವಿಭಾಗಧಿಕಾರಿಗಳಲ್ಲಿ ಮನವಿ ಮಾಡಿಕೊಂಡರಲ್ಲದೆ ಡಿಸೆಂಬರ್ 27 ರಿಂದ ಬೆಳಗಾವಿಯಲ್ಲಿ ನಡೆಯುವ ರಾಜ್ಯ ಜಾಂಬೂರಿಯ ಬಗ್ಗೆ ತಿಳಿಸಿದರು. ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತ ಮುಂದಿನ ಪ್ರಜೆಗಳನ್ನು ತಯಾರು ಮಾಡುವಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ನುಡಿದರು.ಸಂಪೂರ್ಣ ಸಹಕಾರ:

ಅಧ್ಯಕ್ಷ ಸ್ಥಾನ ವಹಿಸಿದ್ದ ಉಪ ವಿಭಾಗಧಿಕಾರಿ ನಿತಿನ್ ಚಕ್ಕಿ ಅವರು ಮಾತನಾಡಿ ಒನ್ಸ್ ಎ ಸ್ಕೌಟ್ ಆಲ್‌ವೇಸ್ ಸ್ಕೌಟ್ ನನಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷ ತಂದಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್‌ನಿಂದ ಸಂಪೂರ್ಣ ಸಹಕಾರ ನೀಡುತ್ತೇವೆ, ನೀವು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯುವುದು ಒಳ್ಳೆಯದು ಎಂದು ಸಲಹೆ ನೀಡಿದರು. ಖಾಸಗಿ ಶಾಲೆಯವರು ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳುವಂತೆ ಪ್ರೇರೇಪಿಸಬೇಕು. ಸ್ವಚ್ಛತಾ ಅರಿವು ಕಾರ್ಯಕ್ರಮಗಳನ್ನು ಸಮವಸ್ತ್ರದಲ್ಲಿ ಮಾಡಿದರೆ ಒಳ್ಳೆ ಪರಿಣಾಮ ಬೀರುತ್ತದೆ ಎಂದರು.ಸಭೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಗೈಡ್ ಆಯುಕ್ತರಾದ ರಾಣಿಮಾಚಯ್ಯ, ಸ್ಥಾನಿಕ ಆಯುಕ್ತರಾದ ಹೆಚ್.ಆರ್ ಮುತ್ತಪ್ಪ, ಗೈಡ್ ಸಹಾಯಕ ಆಯುಕ್ತರಾದ ಸುಲೋಚನ, ಎಲ್ಲಾ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು, ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು. ಸಂಪಾಜೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಉಷಾರಾಣಿ ಅವರು ನಿರೂಪಿಸಿದರು.