ಎಸ್‌ಡಿಎಂ ಆಯುರ್ವೇದ ಕಾಲೇಜ್‌: ನಾಳೆ ಯೋಗ ಸಂಗಮ ಆಚರಣೆ

| Published : Jun 19 2025, 11:49 PM IST

ಸಾರಾಂಶ

ಕುತ್ಪಾಡಿಯ ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸ್ವಸ್ಥವೃತ್ತ ಮತ್ತು ಯೋಗ ವಿಭಾಗ ಶನಿವಾರ ಮೋರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಸಹಯೋಗದಲ್ಲಿ, 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ‘ಯೋಗ ಸಂಗಮ’ ಎಂಬ ವಿಶಿಷ್ಟ ಯೋಗ ಕಾರ್ಯಕ್ರಮ ಆಯೋಜಿಸುತ್ತಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಉದ್ಯಾವರ ಕುತ್ಪಾಡಿಯ ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸ್ವಸ್ಥವೃತ್ತ ಮತ್ತು ಯೋಗ ವಿಭಾಗ ಶನಿವಾರ ಮೋರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಸಹಯೋಗದಲ್ಲಿ, 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ‘ಯೋಗ ಸಂಗಮ’ ಎಂಬ ವಿಶಿಷ್ಟ ಯೋಗ ಕಾರ್ಯಕ್ರಮ ಆಯೋಜಿಸುತ್ತಿದೆ.

ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಂದು ಬೆಳಗ್ಗೆ 6 ಗಂಟೆಯಿಂದ 8 ಗಂಟೆ ವರೆಗೆ ನಡೆಯುವ ಈ ಯೋಗ ಕಾರ್ಯಕ್ರಮದಲ್ಲಿ ಕಾಲೇಜಿನ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಆಸಕ್ತ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು.

ಈ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದ ಸಲಹೆಗಾರ ಡಾ. ಕೌಸ್ತುಭ್ ಉಪಾಧ್ಯಾಯ ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ, ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಕೆಡಕಾರು ಗ್ರಾಪಂ ಅಧ್ಯಕ್ಷ ಜಯಕರ ಶೇರಿಗಾರ್, ಹೂಡೆಯ ಬೀಚ್ ಹೀಲಿಂಗ್ ಸಂಸ್ಥೆಯ ನಿರ್ದೇಶಕ ಡಾ. ಮೊಹಮ್ಮದ್ ರಫೀಕ್ ಭಾಗವಹಿಸಲಿದ್ದು, ಕಾಲೇಜಿನ ಪ್ರಾಂಶುಪಾಲರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಯೋಗದ ಮೂಲಕ ರಾಷ್ಟ್ರೀಯ ಏಕತೆ ಸಾರುವುದು, ಆರೋಗ್ಯ ಕ್ಕಾಗಿ ಯೋಗದ ದೈನಂದಿನ ಅನುಷ್ಠಾನಕ್ಕೆ ಪ್ರೋತ್ಸಾಹ, ಭಾರತೀಯ ಸಂಸ್ಕೃತಿಯ ಆಚರಣೆ ಹಾಗೂ ಎಲ್ಲರಿಗೂ ಯೋಗ ಲಭ್ಯವಾಗುವಂತೆ ಮಾಡುವುದು ಈ ಕಾರ್ಯಕ್ರಮ ಉದ್ದೇಶ ಎಂದರು.

ಸುದ್ದಿಗೋಷ್ಠಿಯಲ್ಲಿ ಸ್ವಸ್ಥವೃತ್ತ ವಿಭಾಗದ ಡಾ. ಸಂದೇಶ್ ಶೆಟ್ಟಿ, ಕಾರ್ಯಕ್ರಮದ ಉಸ್ತುವಾರಿ ಡಾ.ವಿಜಯ ನೆಗಳೂರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿಧಿ ಬಲ್ಲಾಳ್ ಇದ್ದರು.