ಸಾರಾಂಶ
ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಇತ್ತೀಚೆಗೆ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ನುಡಿನಮನ ಮತ್ತು ವಿದ್ಯಾರ್ಥಿ ವಿಚಾರ ಸಂಕಿರಣ ನೆರವೇರಿತು.
ಬೆಳ್ತಂಗಡಿ: ನಮ್ಮ ದೇಶದ ಜನರಲ್ಲಿ ನಾಗರೀಕತೆ, ಸಂಸ್ಕೃತಿ - ಸಂಪ್ರದಾಯ ಉಳಿದಿದೆ ಎಂದರೆ ಅದಕ್ಕೆ ಕಾರಣ ಸಾಹಿತ್ಯ ಮಾತ್ರ. ಅಂತಹ ಸಾಹಿತ್ಯ ರಚನಾಕಾರರಲ್ಲಿ ಡಾ. ಎಸ್.ಎಲ್. ಭೈರಪ್ಪ ಸಹ ಒಬ್ಬರು. ಅವರು ಆಲೋಚಿಸಿದ ವಿಚಾರಗಳು ಬಹಳ ವಿಶಿಷ್ಟವಾದದ್ದು. ಆದ್ದರಿಂದಲೇ ಅವರು ಇಂದು ಎಲ್ಲರ ಮನದಲ್ಲಿ ಉಳಿದಿದ್ದಾರೆ ಎಂದು ಉಜಿರೆ ಎಸ್ಡಿಎಂ ಕಾಲೇಜಿನ ಪ್ರಾಚಾರ್ಯ ಡಾ. ವಿಶ್ವನಾಥ ಪಿ. ಅಭಿಪ್ರಾಯಪಟ್ಟರು.
ಕಾಲೇಜಿನಲ್ಲಿ ಕನ್ನಡ ವಿಭಾಗ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೆಳ್ತಂಗಡಿ ತಾಲೂಕು ಕಸಾಪ ಹಾಗೂ ಹೋಬಳಿ ಕಸಾಪ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಡಾ. ಎಸ್.ಎಲ್. ಭೈರಪ್ಪ ನುಡಿನಮನ ಮತ್ತು ವಿದ್ಯಾರ್ಥಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬರಹಗಾರ, ಬ್ಯಾಂಕ್ ಆಫ್ ಬರೋಡ ನೂಜಿಬಾಳ್ತಿಲ ಶಾಖಾ ಪ್ರಬಂಧಕ ಶಿವಪ್ರಸಾದ್ ಸುರ್ಯ ನುಡಿನಮನ ಸಲ್ಲಿಸಿ, ಭೈರಪ್ಪ ಅವರ ಬರವಣಿಗೆಗಳು ಎಂಥವರನ್ನೂ ಮಂತ್ರಮುಗ್ಧರನ್ನಾಗಿ ಮಾಡುತ್ತವೆ. ಅವರ ಬರವಣಿಗೆಯೇ ಹಾಗೆ ಎಲ್ಲಿಯೂ ಸ್ವಾರಸ್ಯವನ್ನು ಬಿಟ್ಟುಕೊಡುವುದಿಲ್ಲ. ನಾವು ಸಹ ಅವರ ಪುಸ್ತಕಗಳನ್ನು ಓದಿ ಅವರಂತೆಯೇ ಉತ್ತುಂಗಕ್ಕೆ ಏರಬೇಕು ಎಂದು ಹೇಳಿದರು.ಮುಖ್ಯ ಅತಿಥಿ, ಎಸ್ಡಿಎಂ ಕಾಲೇಜಿನ ಕಲಾ ನಿಕಾಯದ ಡೀನ್ ಡಾ. ಭಾಸ್ಕರ ಹೆಗಡೆ ಮಾತನಾಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಈ ನುಡಿನಮನ ಕಾರ್ಯಕ್ರಮ ನಮ್ಮಲ್ಲಿ ಮಾತ್ರವಲ್ಲದೆ ಬೇರೆ ಬೇರೆ ದೇಶ, ರಾಜ್ಯಗಳಲ್ಲಿ ನಡೆಯುತ್ತಿದೆ. ಏಕೆಂದರೆ ಭೈರಪ್ಪ ಅವರು ಅಷ್ಟರ ಮಟ್ಟಿಗೆ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಎಂದು ಹೇಳಿದರು.ವಿದ್ಯಾರ್ಥಿಗಳಾದ ಅಮೃತಾ, ಸಂಕೇತ್, ಪವನ್, ಕವನ, ರಂಗಸ್ವಾಮಿ, ಚೈತನ್ಯ, ಸ್ವಪ್ನ, ರಚನಾ ಅವರು ಕ್ರಮವಾಗಿ ಭೈರಪ್ಪ ಅವರ ಕಾದಂಬರಿಗಳ ಕುರಿತು ವಿಚಾರ ಮಂಡಿಸಿದರು.ಬೆಳ್ತಂಗಡಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ದಿವಾಕರ ಕೊಕ್ಕಡ, ಎಸ್ಡಿಎಂ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್. ಉಪಸ್ಥಿತರಿದ್ದರು.ತಾಲೂಕು ಕಸಾಪ ಅಧ್ಯಕ್ಷ ಡಿ. ಯದುಪತಿ ಗೌಡ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಪ್ರಣಮ್ಯ ವಂದಿಸಿ, ಅಮೃತಾ ನಿರೂಪಿಸಿದರು.