ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಅಕ್ಷಮ್ಯ -ಎಸ್‌ಡಿಪಿಐ

| Published : Feb 10 2024, 01:45 AM IST

ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ಅಕ್ಷಮ್ಯ -ಎಸ್‌ಡಿಪಿಐ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಪ್ರದೇಶದ ಜ್ಞಾನ ವಾಪಿ ಮಸೀದಿಯ ನೆಲ ಅಂತಸ್ತಿನಲ್ಲಿ ಪೂಜೆಗೆ ಅವಕಾಶ ಮಾಡಿ ಕೊಟ್ಟಿರುವ ಕ್ರಮವು ಅತ್ಯಂತ ಆಘಾತಕಾರಿಯಾಗಿದೆ ಇದು ಅಕ್ಷಮ್ಯ ಅಪರಾಧವಾಗಿದೆ ಎಂದು ಆರೋಪಿಸಿ ಎಸ್‌ಡಿಪಿಐ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಉತ್ತರ ಪ್ರದೇಶದ ಸರ್ಕಾರ ವಿರುದ್ಧ ಧಿಕ್ಕಾರದ ಘೋಷಣೆ । ಮಸೀದಿಯನ್ನು ಮಂಡಳಿಯ ಒಡೆತನಕ್ಕೆ ಬಿಟ್ಟುಕೊಡಬೇಕೆಂದು ಆಗ್ರಹ

ಕನ್ನಡಪ್ರಭ ವಾರ್ತೆ ಚಾಮರಾಜನಗರಉತ್ತರ ಪ್ರದೇಶದ ಜ್ಞಾನ ವಾಪಿ ಮಸೀದಿಯ ನೆಲ ಅಂತಸ್ತಿನಲ್ಲಿ ಪೂಜೆಗೆ ಅವಕಾಶ ಮಾಡಿ ಕೊಟ್ಟಿರುವ ಕ್ರಮವು ಅತ್ಯಂತ ಆಘಾತಕಾರಿಯಾಗಿದೆ ಇದು ಅಕ್ಷಮ್ಯ ಅಪರಾಧವಾಗಿದೆ ಎಂದು ಆರೋಪಿಸಿ ಎಸ್‌ಡಿಪಿಐ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಸುಲ್ತಾನ್ ಷರೀಪ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಉತ್ತರ ಪ್ರದೇಶದ ಸರ್ಕಾರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಅಬ್ರಾರ್ ಅಹಮದ್ "೧೯೯೧ರ ಪ್ರಾರ್ಥನಾ ಸ್ಥಳದ ಕಾಯಿದೆ ಪ್ರಕಾರ ೧೯೪೭ ಆಗಸ್ಟ್ ೧೫ ರಂದು ದೇಶದಾದ್ಯಂತ ಈಗಾಗಲೇ ಅಸ್ತಿತ್ವದಲ್ಲಿರುವ ಯಾವುದೇ ಧಾರ್ಮಿಕ ಸ್ಥಳವನ್ನು (ಬಾಬರಿ ಮಸೀದಿ ಹೊರತುಪಡಿಸಿ) ಯಥಾ ಸ್ಥಿತಿಯಲ್ಲಿ ಮುಂದುವರಿಸಬೇಕೆಂದೂ ಹಾಗೂ ಯಾವುದೇ ರೀತಿಯ ವಿವಾದಗಳಿಗಾಗಲಿ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ ಎಂದು ಸದರಿ ಕಾಯಿದೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಕಾನೂನಿನ ಹೊರತಾಗಿಯೂ ಮಸೀದಿಯ ಮೇಲೆ ದುರುದ್ದೇಶ ಪೂರಿತ ವಿವಾದವನ್ನು ಸೃಷ್ಟಿಸಿ ಸಮುದಾಯಗಳ ನಡುವೆ ದ್ವೇಷ ಸಂಘರ್ಷವನ್ನು ನಡೆಸುವ ಹುನ್ನಾರ ಮಾಡಿರುವುದು ಅತ್ಯಂತ ಖಂಡನೀಯ ಎಂದರು.

ವಾರಣಾಸಿ ಜಿಲ್ಲಾ ನ್ಯಾಯಾಧೀಶರು ತನ್ನ ನಿವೃತ್ತಿಯ ಒಂದು ದಿನಕ್ಕೆ ಮೊದಲು ತರಾತುರಿಯಲ್ಲಿ ಪೂಜೆಗೆ ಅವಕಾಶ ಕೊಡುವ ತೀರ್ಪು ನೀಡಿದ ಕ್ರಮವು ಕೂಡ ಅತ್ಯಂತ ಕಳವಳಕಾರಿಯಾಗಿದೆ. ಸುಮಾರು 400 ವರ್ಷಗಳಿಗೂ ಹಿಂದೆ ಸ್ಥಾಪಿಸಲ್ಪಟ್ಟ ಈ ಮಸೀದಿಯಲ್ಲಿ ನಮಾಜ್ ಪ್ರಾರ್ಥನೆ ನಡೆಯುತ್ತಲೇ ಬಂದಿತ್ತು ಎಂದರು.

ಕೇವಲ ರಾಜಕೀಯ ಅಧಿಕಾರವನ್ನು ಕಬಳಿಸುವ ಹುನ್ನಾರದ ಅಂಗವಾಗಿ ಮಸ್ಟಿದ್ ಮಂದಿರ ವಿವಾದವನ್ನು ಹುಟ್ಟು ಹಾಕಿದ ಶಕ್ತಿಗಳು ದೇಶದಲ್ಲಿ ದ್ವೇಷ- ಹಗೆ ಹಿಂಸೆಯನ್ನು ಪ್ರಚೋದಿಸುತ್ತಿದೆ. ಅದರ ಅಂಗವಾಗಿ ಈ ಹಿಂದೆಯೂ ’ಬಾಬರಿ ಮಸ್ಟಿದ್ ಮಂದಿರ " ವಿವಾದವನ್ನು ಹುಟ್ಟು ಹಾಕುವ ಮೂಲಕ ದೇಶದಾದ್ಯಂತ ಹತ್ಯಾಕಾಂಡ, ಧ್ವಂಸ, ರಕ್ತಪಾತವನ್ನು ನಡೆಸಿ ದ್ವೇಷದ ರಾಜಕೀಯವನ್ನು ಇಡೀ ಜಗತ್ತೇ ಕಂಡಿದೆ. ಇದೀಗ ಅದೇ ಹಾದಿಯಲ್ಲಿ ಜ್ಞಾನವಾಪಿ ವಿವಾದವನ್ನು ಹುಟ್ಟುಹಾಕಿರುವ ಹುನ್ನಾರವನ್ನು ನಾಗರಿಕ ಸಮಾಜವು ಒಕ್ಕೊರಲಿನಿಂದ ಖಂಡಿಸಬೇಕಾಗಿದೆ.

ಇಂತಹ ಕ್ಷುದ್ರ ವಿವಾದಗಳನ್ನು ಹುಟ್ಟು ಹಾಕುವವರು ಎಷ್ಟೇ ಪ್ರಭಾವಿತರಾಗಿದ್ದರೂ ನ್ಯಾಯಾಲಯವು ಅವರ ಮೇಲೆ ನಿರ್ಧಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ. ಮಾತ್ರವಲ್ಲದೆ ೧೯೯೧ರ ಪ್ರಾರ್ಥನಾ ಸ್ಥಳದ ಕಾಯಿದೆ ಪ್ರಕಾರ ದೇಶದಾದ್ಯಂತ ಎಲ್ಲಾ ಪ್ರಾರ್ಥನಾ ಮಂದಿರಗಳಿಗೆ ಸೂಕ್ತ ರಕ್ಷಣೆಯನ್ನು ಕೊಡಬೇಕು ಹಾಗೂ ಯಥಾಸ್ಥಿತಿಯನ್ನು ಕಾಪಾಡಬೇಕು. ಜ್ಞಾನ ವಾಪಿ ಮಸೀದಿಯಲ್ಲಿ ಯಾವುದೇ ಕಾರಣಕ್ಕೂ ವಿವಾದಗಳನ್ನು ಹುಟ್ಟು ಹಾಕಲು ಬಿಡದೆ ಸಂಪೂರ್ಣವಾಗಿ ಮಸೀದಿಯನ್ನು ಮಂಡಳಿಯ ಒಡೆತನಕ್ಕೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸೈಯದ್ ಅರೀಫ್, ಮಹೇಶ್‌ಮ ಮೌಲಾನಾ ಅಹಮದ್ ಅಪೀಕ್, ಜಮೀನೂರ್, ಸೈಯದ್ ಇರ್ಫಾನ್, ಎಂಎಸ್‌ಎ ರಫಿ, ನಸ್ರುಲ್ಲಾ, ಅಪ್ಸರ್ ಪಾಷ, ಮಹಮದ್ ಅಮೀಕ್ ಮತ್ತಿತರರು ಭಾಗವಹಿಸಿದ್ದರು.