ಕೇರಳ ಬಾಲಕಿ ಸಾವಿನ ಬಳಿಕ ಎಚ್ಚೆತ್ತ ಆಡಳಿತ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕೇರಳ ಮೂಲದ ಬಾಲಕಿಯ ಅಸಹಜ ಸಾವಿನ ಘಟನೆ ಬಳಿಕ ಚಿಕ್ಕಮಗಳೂರು ಪ್ರವಾಸಿ ತಾಣಗಳಲ್ಲಿ ಭದ್ರತೆ ಹೆಚ್ಚಿಸಿದ್ದು, ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಬೇಸಿಗೆ ರಜೆ, ವೀಕೆಂಡ್ ಹಿನ್ನೆಲೆ ರಾಜ್ಯದ ವಿವಿಧ ಭಾಗ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಆಗಮಿಸುತ್ತಿದ್ದಾರೆ. ವಿಶೇಷವಾಗಿ ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಮಾಣಿಕ್ಯಾಧಾರ ಪ್ರದೇಶಗಳಲ್ಲಿ ಭಾರೀ ಜನಸಾಗರ ಕಂಡುಬರುತ್ತಿದೆ.ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆ ಮೊದಲ ಆದ್ಯತೆಯಾಗಿ ಪರಿಗಣಿಸಿ ಭದ್ರತಾ ಕ್ರಮಗಳನ್ನು ಬಲಪಡಿಸಲಾಗಿದೆ. ಚಂದ್ರ ದ್ರೋಣ ಪರ್ವತಶ್ರೇಣಿ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಪ್ರದೇಶಗಳಲ್ಲಿ ವಿಶೇಷ ನಿಗಾವಹಿಸಲಾಗಿದೆ. ಕಂದಕಗಳು, ಜಲಪಾತಗಳು ಮತ್ತು ಎತ್ತರದ ಪರ್ವತ ಪ್ರದೇಶಗಳಲ್ಲಿ ಪ್ರವಾಸಿಗರು ನಿರ್ಲಕ್ಷ್ಯ ತೋರಬಾರದು ಎಂಬ ಉದ್ದೇಶದಿಂದ ಪೊಲೀಸರ ತಂಡಗಳನ್ನು ನಿಯೋಜಿಸಲಾಗಿದೆ.
ಪಿಎಸ್ ಐ ನೇತೃತ್ವದಲ್ಲಿ ದಿನದ 24 ಗಂಟೆ ಭದ್ರತೆದತ್ತಪೀಠ–ಮಾಣಿಕ್ಯಾಧಾರ ತಪ್ಪಲು ಪ್ರದೇಶದಲ್ಲಿ ಪಿ.ಎಸ್.ಐ ನೇತೃತ್ವದಲ್ಲಿ ನಾಲ್ವರು ಪೊಲೀಸರನ್ನು ಶಾಶ್ವತವಾಗಿ ನಿಯೋಜಿಸಲಾಗಿದೆ. ಜೊತೆಗೆ ಚಿಕ್ಕಮಗಳೂರು ವಿಭಾಗದ 15 ಪೊಲೀಸ್ ಠಾಣೆಗಳ ಪಿಎಸ್ ಐ ಗಳು ಪರ್ಯಾಯವಾಗಿ ಪ್ರತಿದಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಠಾಣೆಯಿಂದ ಕೆಲ ಸಿಬ್ಬಂದಿಯನ್ನು ವಾರಪೂರ್ತಿ ಅಲ್ಲಿಯೇ ಮೊಕ್ಕಾಂ ಹಾಕುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ 24 ಗಂಟೆಗಳ ಭದ್ರತೆ ಒದಗಿಸಲಾಗುತ್ತಿದೆ.ಪ್ರಮುಖ ಪ್ರವಾಸಿ ತಾಣಗಳಲ್ಲಿ ನಿರಂತರ ಗಸ್ತು ನಡೆಸಲಾಗುತ್ತಿದ್ದು, ನಿಯಮ ಉಲ್ಲಂಘಿಸುವ ಪ್ರವಾಸಿಗರಿಗೆ ಸ್ಥಳದಲ್ಲೇ ಎಚ್ಚರಿಕೆ ನೀಡಲಾಗುತ್ತಿದೆ. ಅಪಾಯಕಾರಿ ಸ್ಥಳಗಳಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವುದು, ಅತಿರೇಕದ ಸಾಹಸ ಚಟು ವಟಿಕೆಗಳಲ್ಲಿ ತೊಡಗುವುದು ಮುಂತಾದ ವರ್ತನೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಗತ್ಯವಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಸಾರ್ವಜನಿಕರು ಹಾಗೂ ಪ್ರವಾಸಿಗರು ಸುರಕ್ಷತಾ ಮಾರ್ಗಸೂಚಿ ಪಾಲಿಸಿ, ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.