ಗರುಡ ಪುರಾಣ ನೋಡಿ ಆಶೀರ್ವದಿಸಿ: ನಟ ರಿಷಿ

| Published : Jan 08 2025, 12:16 AM IST

ಸಾರಾಂಶ

ಕೊಳ್ಳೇಗಾಲದಲ್ಲಿ ಆಯೋಜಿಸಲಾಗಿದ್ದ ಮಾನಸೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಚಿತ್ರನಟ ರಿಷಿ ಅವರನ್ನು ಗೌರವಿಸಲಾಯಿತು. ಡಾ.ದತ್ತೇಶ್ ಕುಮಾರ್, ರೂಪ, ನಾಗರಾಜು, ಮಾನಸ ಬಾಬು, ನಾಗಭೂಷಣ್ ಇನ್ನಿತರರಿದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಿಗೆ ಬಂದು ವೀಕ್ಷಿಸುವ ಮೂಲಕ ಎಲ್ಲರೂ ಪೋತ್ಸಾಹಿಸಬೇಕು, ನನ್ನ ನಟನೆಯ ಗರುಡ ಪುರಾಣ ಶೀಘ್ರದಲ್ಲೆ ಬಿಡುಗಡೆಯಾಗಲಿದ್ದು ಕನ್ನಡಾಭಿಮಾನಿಗಳು ನೋಡಿ ಆಶೀರ್ವದಿಸಬೇಕು ಎಂದು ಚಿತ್ರನಟ ರಿಷಿ ಹೇಳಿದರು. ಮಾನಸೋತ್ಸವ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ, ಮಾನಸ ಸಂಸ್ಥೆ ನನ್ನ ಕುಟುಂಬವಿದ್ದಂತೆ. ಈ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ, ಮಾತ್ರವಲ್ಲ ಮಾನಸೋತ್ಸವ ಮೂರು ದಿನಗಳ ಕಾಲ ರಂಜಿಸಿದೆ, ಮನೋಲ್ಲಾಸ ಒದಗಿಸಿದೆ, ಎಂದರು.

ಯುವ ಕವಿಗಳು ಕವಿತೆ ಕಟ್ಟಲಿ: ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಾಹಿತಿ ಮಹದೇವ ಶಂಕನಪುರ ಮಾತನಾಡಿ, ಚಾಮರಾಜನಗರ ಜಿಲ್ಲೆ ಮಹಾಕಾವ್ಯಗಳನ್ನು ಕೊಟ್ಟ ಜಿಲ್ಲೆ. ಕವನ ವಾಚನ ಮಾಡಿದ ಎಲ್ಲ ಯುವಕವಿಗಳ ಕವಿತೆಗಳು ಉತ್ತಮವಾಗಿವೆ. ಮಾನಸ ಶಿಕ್ಷಣ ಸಂಸ್ಥೆ ರಾಜ್ಯಮಟ್ಟದಲ್ಲಿ ಹೆಸರು ಮಾಡಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಈ ಸಂಸ್ಥೆ ಹೆಗ್ಗುರುತಾಗಿದೆ. ಶೈಕ್ಷಣಿಕ ಸಾಧನೆ ಸೌಲಭ್ಯ ತರಬೇತಿ ನೀಡುವುದರಲ್ಲಿ ಮಾನಸ ಶಿಕ್ಷಣ ಸಂಸ್ಥೆ ಮುಂಚೂಣಿಯಲ್ಲಿದೆ. ಕಲೆ ಸಾಹಿತ್ಯ ಸಂಸ್ಕೃತಿ ಸಂಗೀತದ ಅಭಿರುಚಿಯನ್ನು ಮಾನಸೋತ್ಸವ ಕಾರ್ಯಕ್ರಮ ಮೂಡಿಸುತ್ತಿದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣ ಮಾಡಲು ಈ ಕಾರ್ಯಕ್ರಮ ಮುಖ್ಯವಾಗಿದೆ. ನನ್ನ ಕವಿತೆ ದೇಶದ 22 ಭಾಷೆಗಳಿಗೆ ಭಾಷಾಂತರವಾಗಿದೆ. ಮೈಸೂರು ವಿವಿಯಲ್ಲಿ ಪಠ್ಯಪುಸ್ತಕವಾಗಿದೆ, ಎಲ್ಲಾ ಯುವ ಕವಿಗಳು ಕವಿತೆ ಕಟ್ಟಲು ಕಾಯಕವನ್ನು ಮುಂದುವರಿಸಬೇಕು ಎಂದರು. ಸಾಹಿತಿ ಜಯಪ್ಪ ಹೊನ್ನಾಳಿ ಮಾತನಾಡಿ, ಕಾವ್ಯವೆಂದರೆ ಸತ್ಯದ ಸಾಕ್ಷಾತ್ಕಾರ ಅದನ್ನು ಬೆಳೆಸಲು ಪರಿಶ್ರಮದ ಅಗತ್ಯವಿದೆ. ಕಾವ್ಯವನ್ನು ಸೃಷ್ಟಿಸುವವನು ಬೆಳಕಿನೆಡೆಗೆ ಸಾಗಬೇಕು. ಕವಿ ಒಬ್ಬ ಸಾಂಸ್ಕೃತಿಕ ಶಾಸನ. ಆತ ತನ್ನ ಸಮಾಜವನ್ನು ಬೆಳಕಿನೆಡೆಗೆ ಸಾಗಿಸಬೇಕಾಗುತ್ತದೆ. ವಾಸ್ತವ ಮತ್ತು ಅವಾಸ್ತವಗಳ ಕಲ್ಪನೆ ಕಾವ್ಯಗಳಲ್ಲಿ ಇರಬೇಕು. ಕವಿ ಕಾಲಾತೀತವಾಗುವುದು ಕವಿತೆಯಿಂದ ಜನರ ಮನೋಭೂಮಿಕೆಯನ್ನು ಕವಿ ಏರಬೇಕಿದೆ ಎಂದರು.

ರಂಜಿಸಿದ ಮಾನಸೋತ್ಸವ:ಮೂರು ದಿನಗಳ ಕಾಲ ನಡೆದ ಮಾನಸೋತ್ಸವದಲ್ಲಿ ನಗೆ ಹಬ್ಬ, ಸಾಂಸ್ಕೃತಿಕ ವೈಭವ, ವಿದ್ಯಾರ್ಥಿಗಳ, ಖ್ಯಾತ ಗಾಯಕ ಮಹದೇವಸ್ವಾಮಿ ಅವರ ಗಾಯನ, ನೃತ್ಯ ಹೀಗೆ ನಾನಾ ಕಾರ್ಯಕ್ರಮಗಳು ನೆರೆದಿದ್ದ ಗಣ್ಯರು ಹಾಗೂ ಪೋಷಕರನ್ನು ರಂಜಿಸಿತು. ಹಲವು ವಿದ್ಯಾರ್ಥಿಗಳು ನಡೆಸಿಕೊಟ್ಟ ಕಾರ್ಯಕ್ರಮಗಳು ಪ್ರಶಂಸೆಗೆ ಭಾಜನವಾಯಿತು.

ಮಾನಸೋತ್ಸವ 3 ದಿನಗಳ ಕಾಲ ಮನಸೋಲ್ಲಾಸವನ್ನು ಉಂಟುಮಾಡಿದೆ. ಮನುಷ್ಯನ ಮನಸ್ಸು ಬದ್ಧತೆಯಿಂದ ಬುದ್ಧತೆಯಡೆ ಸಾಗಬೇಕು. ಕಾವ್ಯವೆಂಬುವುದು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಒಂದು ಅಂಗ, ಸಂಗೀತಕ್ಕೂ ಕಾವ್ಯಕ್ಕೂ ಸಂಬಂಧವಿದೆ. ಎಲ್ಲೆಡೆ ಮತಾಂಧತೆ ಭ್ರಷ್ಟಾಚಾರ, ವಿಕೃತಿ, ಹಿಂಸಾಚಾರ, ವಿಕೃತಿ ಕಂಡು ಬರುತ್ತಿದೆ. ಸಂಸ್ಕೃತಿಗೆ ವಿಕೃತಿಯಿಂದ ಪಾರು ಮಾಡುವ ಶಕ್ತಿಯಿದೆ. ಮನುಷ್ಯ ಮೃಗಗಳಿಗೆ ಹೆದರಬೇಕು ಆದರೆ ಮನುಷ್ಯರಿಗೆ ಹೆದರುವ ಸ್ಥಿತಿ ಎದುರಾಗಿದೆ.- ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್