ಸ್ವಾಭಿಮಾನಿ, ವಸ್ತುನಿಷ್ಠ ಬರಹಗಾರ ಇಟ್ನಾಳಮಠ

| Published : Jul 22 2025, 01:15 AM IST

ಸ್ವಾಭಿಮಾನಿ, ವಸ್ತುನಿಷ್ಠ ಬರಹಗಾರ ಇಟ್ನಾಳಮಠ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 3 ದಶಕಗಳ ಕಾಲ ಕನ್ನಡಪ್ರಭ ಮತ್ತು ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್‌ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಚನ್ನಬಸಯ್ಯ ಇಟ್ನಾಳಮಠರು ಸ್ವಾಭಿಮಾನಿ ಮತ್ತು ವಸ್ತುನಿಷ್ಠ ಬರಹಗಾರರಾಗಿದ್ದರು. ಅವರ ಅಗಲಿಕೆಯಿಂದ ಮಾಧ್ಯಮ, ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ನಷ್ಟವಾಗಿದೆ ಎಂದು ಹಿರಿಯ ಸಾಹಿತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಾಳಾಸಾಹೇಬ ಲೋಕಾಪುರ ಕಂಬನಿ ಮಿಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಕಳೆದ 3 ದಶಕಗಳ ಕಾಲ ಕನ್ನಡಪ್ರಭ ಮತ್ತು ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್‌ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಚನ್ನಬಸಯ್ಯ ಇಟ್ನಾಳಮಠರು ಸ್ವಾಭಿಮಾನಿ ಮತ್ತು ವಸ್ತುನಿಷ್ಠ ಬರಹಗಾರರಾಗಿದ್ದರು. ಅವರ ಅಗಲಿಕೆಯಿಂದ ಮಾಧ್ಯಮ, ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ನಷ್ಟವಾಗಿದೆ ಎಂದು ಹಿರಿಯ ಸಾಹಿತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಾಳಾಸಾಹೇಬ ಲೋಕಾಪುರ ಕಂಬನಿ ಮಿಡಿದರು.

ಪಟ್ಟಣದ ಕಾಶಿಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಅಥಣಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಗಲಿದ ಹಿರಿಯ ಪತ್ರಕರ್ತ ಸಿ.ಎ.ಇಟ್ನಾಳಮಠ ಶ್ರದ್ಧಾಂಜಲಿ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಯನಿರತ ಪತ್ರಕರ್ತರ ಸಂಘದ ಹಿರಿಯ ಸದಸ್ಯರಾಗಿದ್ದ ಇಟ್ನಾಳಮಠ ಅವರು ಕನ್ನಡಪ್ರಭ ಮತ್ತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುವ ಮೂಲಕ ವಸ್ತುನಿಷ್ಠ ವರದಿಗಳನ್ನು ಮತ್ತು ಲೇಖನಗಳನ್ನು ನೀಡಿ ಎಲ್ಲರ ಗಮನ ಸೆಳೆದಿದ್ದರು. ಇದಲ್ಲದೇ ಸಾಮಾಜಿಕ, ಧಾರ್ಮಿಕ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ ತೊಡಗಿಸಿಕೊಂಡಿದ್ದರು. ಅಥಣಿಯ ಅನೇಕ ಸಂಗತಿಗಳ ಬಗ್ಗೆ ಇತಿಹಾಸ ಬಲ್ಲವರಾಗಿದ್ದ ಅವರು ಅಪಾರ ಜ್ಞಾನ ಬಂಡಾರ ಹೊಂದಿದ್ದರು ಎಂದು ಬಣ್ಣಿಸಿದರು.ನಿವೃತ್ತ ಇಂಜಿನೀಯರ್‌ ಅರುಣ ಯಲಗುದ್ರಿ ಮಾತನಾಡಿ, ಓರ್ವ ಪ್ರತಿಭಾವಂತ ಹಾಗೂ ಸಾಮಾಜಿಕ ಕಳಕಳಿ ಹಿರಿಯ ಪತ್ರಕರ್ತ ಚನ್ನಬಸಯ್ಯ ಇಟ್ನಾಳಮಠರು ಪತ್ರಿಕಾರಂಗದಲ್ಲಿ ವಿಶೇಷ ಲೇಖನಗಳ ಮೂಲಕ ತಮ್ಮ ಚಾಪು ಮೂಡಿಸಿದ್ದರು ಎಂದು ಸ್ಮರಿಸಿದರು.

ಹಿರಿಯ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಮಾತನಾಡಿ, ಪಟ್ಟಣದ ಹಿರಿಯ ಪತ್ರಕರ್ತ ಚನ್ನಬಸಯ್ಯ ನನ್ನ ಆತ್ಮೀಯ ಸ್ನೇಹಿತ. ಒಳ್ಳೆಯ ಬರಹಗಾರನಾಗಿ, ಸಾಹಿತಿಯಾಗಿ ಕೆಲಸ ಮಾಡಿದವರು. ಶಾಲಾ ಕಾಲೇಜು ಹಂತದಿಂದಲೇ ನಮ್ಮ ಒಡನಾಟದಲ್ಲಿ ಬೆಳೆದ ಅವರು ಒಬ್ಬ ನೇರ ಮತ್ತು ನಿಷ್ಟುರವಾದಿ ಪತ್ರಕರ್ತರಾಗಿದ್ದರು ಎಂದು ತಿಳಿಸಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪರಶುರಾಮ ನಂದೇಶ್ವರ ಮಾತನಾಡಿ, ನಮ್ಮ ಸಂಘದ ಹಿರಿಯ ಸದಸ್ಯರಾಗಿ ನಮ್ಮೆಲ್ಲರಿಗೆ ಮಾರ್ಗದರ್ಶಕರಾಗಿದ್ದರು. ನಮ್ಮೆಲ್ಲರಿಗೂ ವಸ್ತುನಿಷ್ಠ ವರದಿಗಳನ್ನು, ವಿಶೇಷ ಲೇಖನಗಳನ್ನ ಬರೆಯಲು ಹುರಿದುಂಬಿಸುತ್ತಿದ್ದರು. ಯಾರಿಗೂ ಗೊತ್ತಿಲ್ಲದ ಅನೇಕ ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವರ ಅಗಲಿಕೆ ನಮ್ಮ ಸಂಘದ ಎಲ್ಲ ಸದಸ್ಯರಿಗೆ ದುಃಖ ತಂದಿದ್ದು, ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಕುಟುಂಬದ ದುಃಖದಲ್ಲಿ ನಾವೆಲ್ಲರೂ ಭಾಗಿಯಾಗುವ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಂಘವನ್ನು ಮುನ್ನಡೆಸುತ್ತೇವೆ ಎಂದು ಸಂತಾಪ ಸೂಚಿಸಿದರು.ಪತ್ರಕರ್ತ ಇಟ್ನಾಳಮಠರ ಪುತ್ರ ಡಾ.ಅಭಿನವ ಇಟ್ನಾಳಮಠ ಮಾತನಾಡಿ, ನನ್ನ ತಂದೆಯವರು ಪತ್ರಕರ್ತರಾಗಿ, ಸಾಹಿತಿಯಾಗಿ ಅನೇಕ ಕ್ಷೇತ್ರಗಳಲ್ಲಿ ಸೇವೆ ಮಾಡುವುದರ ಜೊತೆಗೆ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ನನಗೆ ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಿ ಬೆಳೆಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ, ಬಣಜವಾಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಬಣಜವಾಡ, ಸತ್ತಿಯ ಪಾಟೀಲ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ ಚಿದಾನಂದ ಪಾಟೀಲ, ಸಾಹಿತಿ ಡಾ.ಆರ್.ಎಸ್.ದೊಡ್ಡನಿಂಗಪ್ಪಗೋಳ, ಡಾ.ಅರ್ಚನಾ ಅಥಣಿ, ಎಸ್.ಕೆ.ಹೊಳೆಪ್ಪನವರ, ದೇವಿಂದ್ರ ಬಿಸ್ವಾಗರ, ಎಸ್.ಎಸ್.ಹೂಟಿ, ನೀಲೇಶ್ ಝರೆ, ಕೈಲಾಸ ಮದಬಾವಿ, ಪತ್ರಕರ್ತ ಶಿವಕುಮಾರ ಅಪರಾಧ, ಅಣ್ಣಾಸಾಬ ತೆಲಸಂಗ, ರಮೇಶ್ ಬಾದವಾಡಗಿ, ರಾಕೇಶ ಮೈಗೂರ, ಜಬ್ಬಾರ ಚಿಂಚಲಿ, ವಿಲಾಸ ಕಾಂಬಳೆ, ಕನ್ನಡಪರ ಹೋರಾಟಗಾರ ಜಗನ್ನಾಥ ಬಾಮನೆ, ಸಿದ್ದು ಮಾಳಿ ಸೇರಿದಂತೆ ಇನ್ನಿತರರು ಹಿರಿಯ ಪತ್ರಕರ್ತ ಚನ್ನಬಸಯ್ಯ ಇಟ್ನಾಳಮಠ ಅವರಿಗೆ ಶ್ರದ್ಧಾಂಜಲಿಯ ನುಡಿ ನಮನ ಸಲ್ಲಿಸಿದರು.ಸಿ.ಎ.ಇಟ್ನಾಳಮಠರು ಬಡತನ ಮತ್ತು ಅಂಗವಿಕಲತೆ ಮೆಟ್ಟಿನಿಂತು ಸ್ವಾಭಿಮಾನಿ ಮತ್ತು ಮೌಲ್ಯಯುತ ಬದುಕು ನಡೆಸಿಕೊಂಡು ಬಂದವರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಇಹಲೋಕ ತ್ಯೇಜಿಸುವ ಸ್ಥಿತಿ ಬಂದಿದೆ ಎಂಬ ಕೊರಗು ಇಂದು ನಮಗೆಲ್ಲರಿಗೂ ಕಾಡುತ್ತಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ, ಅವರ ಕುಟುಂಬ ಸದಸ್ಯರಿಗೆ ದುಃಖವನ್ನು ಬರಿಸುವ ಶಕ್ತಿ ನೀಡಲಿ.

-ಡಾ.ಬಾಳಾಸಾಹೇಬ ಲೋಕಾಪುರ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.ಇಟ್ನಾಳಮಠರ ಲೇಖನಗಳು ವಿಧಾನಸಭೆ ಅಧಿವೇಶನಗಳಲ್ಲಿ ಸದ್ದು ಮಾಡುತ್ತಿದ್ದವು. ಬೆಳಗಾವಿ ಚಳಿಗಾಲ ಅಧಿವೇಶನ ಬಂದರೇ ಈ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ವಿಶೇಷ ಲೇಖನಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆಯುತ್ತಿದ್ದರು. ಪ್ರಾಮಾಣಿಕ ಮತ್ತು ಉತ್ತಮ ಅಧಿಕಾರಿಗಳೊಂದಿಗೆ, ರಾಜಕೀಯ ಹಿರಿಯ ನಾಯಕರೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದ ಅವರ ಅಗಲಿಕೆ ನಮ್ಮೆಲ್ಲರಿಗೂ ನೋವು ತಂದಿದೆ.

-ಅರುಣ ಯಲಗುದ್ರಿ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಎಮಿನೆಂಟ್‌ ಇಂಜನೀಯರ್‌-2023 ಪ್ರಶಸ್ತಿ ಪುರಸ್ಕೃತರು.ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನದಲ್ಲಿ ತಮ್ಮ ಪುಸ್ತಕವನ್ನು ಬಿಡುಗಡೆಗೊಳಿಸಿ ಎಲ್ಲರ ಗಮನ ಸೆಳೆದಿದ್ದರು. ಅವರ ಅಗಲಿಕೆಯಿಂದ ಪತ್ರಿಕಾರಂಗಕ್ಕೆ ಅಷ್ಟೇ ಅಲ್ಲ ಸಾಹಿತ್ಯ ಲೋಕಕ್ಕೂ ನಷ್ಟವಾಗಿದೆ.

-ಅಪ್ಪಾಸಾಹೇಬ ಅಲಿಬಾದಿ,

ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಸುವರ್ಣ ಕನ್ನಡಿಗ-2025 ಪ್ರಶಸ್ತಿ ಪುರಸ್ಕೃರು.ನನ್ನ ತಂದೆ ನನಗೆ ಒಬ್ಬ ಒಳ್ಳೆಯ ಗೆಳೆಯನಾಗಿ ಆದರ್ಶ ಬದುಕಿನ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ನಾನು ಇಂದು ವೈದ್ಯಕೀಯ ಶಿಕ್ಷಣ ಪಡೆದು ಒಬ್ಬ ವೈದ್ಯನಾಗಿರುವುದು ಅವರಿಗೆ ಬಹಳ ಖುಷಿ ತಂದಿತ್ತು. ಆದರೆ, ಅವರ ಅನಾರೋಗ್ಯದ ಅಗಲಿಕೆ ನಮ್ಮೆಲ್ಲರಿಗೂ ದುಃಖ ತಂದಿದೆ.

-ಡಾ.ಅಭಿನವ ಇಟ್ನಾಳಮಠ,
ಪತ್ರಕರ್ತ ಇಟ್ನಾಳಮಠರ ಪುತ್ರ.