18 ವರ್ಷದೊಳಗಿನವರಿಗೆ ಮಾದಕ ವಸ್ತು ಮಾರಾಟ ಅಪರಾಧ: ನಿರಂಜನಗೌಡ

| Published : Jun 28 2024, 12:56 AM IST

18 ವರ್ಷದೊಳಗಿನವರಿಗೆ ಮಾದಕ ವಸ್ತು ಮಾರಾಟ ಅಪರಾಧ: ನಿರಂಜನಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ 18 ವರ್ಷದ ಒಳಗಿನ ಮಕ್ಕಳಿಗೆ ಮಾದಕ ವಸ್ತು ಮಾರಾಟ ಮಾಡಿದರೆ ಅಪರಾಧವಾಗುತ್ತದೆ ಎಂದು ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ ತಿಳಿಸಿದರು. ಬುಧವಾರ ಮುತ್ತಿನಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲೆಯಲ್ಲಿ ಧ.ಗ್ರಾ.ಯೋಜನೆಯ ಶೆಟ್ಟಿಕೊಪ್ಪ ವಲಯದ ಮುತ್ತಿನಕೊಪ್ಪ ಕಾರ್ಯ ಕ್ಷೇತ್ರದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಶಾಲಾ, ಕಾಲೇಜಿನ 100 ಮೀ. ಒಳಗೆ ಮಾದಕ ವಸ್ತು ಮಾರಾಟ ಮಾಡುವುದನ್ನು ನಿಷೇದಿಸಲಾಗಿದೆ ಎಂದರು.

- ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಮಾದಕ ವಸ್ತು ವಿರೋದಿ ದಿನಾಚರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

18 ವರ್ಷದ ಒಳಗಿನ ಮಕ್ಕಳಿಗೆ ಮಾದಕ ವಸ್ತು ಮಾರಾಟ ಮಾಡಿದರೆ ಅಪರಾಧವಾಗುತ್ತದೆ ಎಂದು ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ ತಿಳಿಸಿದರು.

ಬುಧವಾರ ಮುತ್ತಿನಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲೆಯಲ್ಲಿ ಧ.ಗ್ರಾ.ಯೋಜನೆಯ ಶೆಟ್ಟಿಕೊಪ್ಪ ವಲಯದ ಮುತ್ತಿನಕೊಪ್ಪ ಕಾರ್ಯ ಕ್ಷೇತ್ರದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಶಾಲಾ, ಕಾಲೇಜಿನ 100 ಮೀ. ಒಳಗೆ ಮಾದಕ ವಸ್ತು ಮಾರಾಟ ಮಾಡುವುದನ್ನು ನಿಷೇದಿಸಲಾಗಿದೆ. ನಿಯಮ ಮೀರಿ ಮಾರಾಟ ಮಾಡಿದರೆ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾರಾದರೂ ಶಾಲಾ ಆವರಣದಲ್ಲಿ ಮಾದಕ ವಸ್ತು ಸೇವನೆ ಮಾಡಿದರೆ ಅಂತಹವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು. 18 ವರ್ಷದ ಒಳಗಿನ ಮಕ್ಕಳು ವಾಹನ ಚಾಲನೆ ಮಾಡುವುದು ಕಾನೂನು ಪ್ರಕಾರ ಅಪರಾಧ. 18 ವರ್ಷದ ಒಳಗಿನ ಮಕ್ಕಳು ವಾಹನ ಚಾಲನೆ ಮಾಡಿ ಅಪಘಾತವಾದರೆ ವಾಹನದ ಮಾಲೀಕರು ಹಾಗೂ ಪೋಷಕರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷಣೆ ವಿಧಿಸಲಾಗುವುದು ಎಂದು ಎಚ್ಚರಿಸಿದರು. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವಾದರೆ ಪೊಲೀಸರಿಗೆ ತಿಳಿಸಬೇಕು. ಸಂತ್ರಸ್ತೆ ಹೆಸರನ್ನು ಬಹಿರಂಗ ಪಡಿಸದೆ ಗೌಪ್ಯವಾಗಿ ಇಡಲಾಗುವುದು ಎಂದರು.ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ನಾಗೇಂದ್ರ ಮಾತನಾಡಿ, ಭೂಮಿಯ ಮೇಲೆ ವಾಸ ಮಾಡುವ ಎಲ್ಲಾ ಜೀವಿಗಳಿಗಿಂತ ಮನುಷ್ಯ ಅತಿ ಬುದ್ದಿವಂತ.ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬುದು ಮನುಷ್ಯರಿಗೆ ಗೊತ್ತಾಗಲಿದೆ. ಕೆಲವು ಬಾರಿ ಸಹವಾಸ ದೋಷದಿಂದ ದುಶ್ಚಟಕ್ಕೆ ಬಲಿಯಾಗುತ್ತಾರೆ.ಇದರಿಂದ ಇಡೀ ಕುಟುಂಬವೇ ತೊಂದರೆಗೆ ಸಿಲುಕುತ್ತದೆ. ಮಕ್ಕಳ ಶಿಕ್ಷಣಕ್ಕೂ ಅಡ್ಡಿಯಾಗಲಿದೆ ಎಂದರು. ಧ.ಗ್ರಾ.ಯೋಜನೆ ಶೆಟ್ಟಿಕೊಪ್ಪ ವಲಯದ ಮೇಲ್ವಿಚಾರಕ ಪಿ.ಸತೀಶ್ ಮಾತನಾಡಿ, ಧ.ಗ್ರಾ.ಯೋಜನೆಯಿಂದ ಹಲವಾರು ಸಮಾಜ ಮುಖಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಮದ್ಯ ವರ್ಜನ ಶಿಬಿರ, ಸ್ವಾಸ್ಥ್ಯ ಸಂಕಲ್ಪ, ಸುಜ್ಞಾನ ನಿಧಿ ಶಿಷ್ಯ ವೇತನ, ಜ್ಞಾನ ದೀಪ ಯೋಜನೆಯಡಿ ಶಿಕ್ಷಕರ ನೇಮಕಾತಿ, ನಿರ್ಗತಿಕರಿಗೆ ಮಾಸಾಶನ, ವಿಕಲ ಚೇತನರಿಗೆ ವೀಲ್ ಚೇರ್, ಊರು ಗೋಲು, ವಾಟರ್ ಬೆಡ್, ಕೃಷಿ ಅಧ್ಯಯನ ಪ್ರವಾಸ, ಸ್ವ ಉದ್ಯೋಗ ಮುಂತಾದ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಸಭೆ ಅಧ್ಯಕ್ಷತೆಯನ್ನು ಸಹ ಶಿಕ್ಷಕ ಶಿವಾನಂದ ವಹಿಸಿದ್ದರು. ಅತಿಥಿಗಳಾಗಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಟುಕಪ್ಪ, ಮಥಾಯಿ, ವರ್ಗೀಸ್,ಶೌರ್ಯ ವಿಪತ್ತು ತಂಡದ ಸ್ವಯಂ ಸೇವಕರಾದ ಮಧು,ಉಷಾ, ಯಶೋಧ, ಸದಾನಂದ, ಸೇವಾ ಪ್ರತಿನಿಧಿಗಳಾದ ದೀಪಾ, ಸೌಮ್ಯ ಹಾಗೂ ಒಕ್ಕೂಟದ ಪದಾಧಿಕಾರಿಗಳು ಇದ್ದರು. ಇದೇ ಸಂದರ್ಭದಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಪದವಿಪೂರ್ವ ಕಾಲೇಜು ವಿಭಾಗದಲ್ಲಿ ಮದನ್ ಎಂ.ಪ್ರಥಮ,ಕೆ,ಎಸ್.ಅನು ದ್ವಿತೀಯ ಬಹುಮಾನ ಪಡೆದರು. ಪ್ರೌಢ ಶಾಲಾ ವಿಭಾಗದಲ್ಲಿ ಸಿಮ್ರಾನ್ ಪ್ರಥಮ, ಉಮಿಮಾ ಅಭಿಬಾ ದ್ವಿತೀಯ ಸ್ಥಾನ ಪಡೆದರು. ಚಂದ್ರಪ್ಪ ಸ್ವಾಗತಿಸಿದರು. ವರ್ಗೀಸ್ ಕಾರ್ಯಕ್ರಮ ನಿರೂಪಿಸಿದರು.