ಕನ್ನಡಪ್ರಭ ವಾರ್ತೆ ಮೈಸೂರು
ಮತದ ಶಕ್ತಿಯನ್ನು ಅರಿತು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದರೆ ಮಾತ್ರ ದಲಿತರು ಆಳುವ ವರ್ಗವಾಗಿ ಹೊರಹೊಮ್ಮಲು ಸಾಧ್ಯ ಎಂದು ಮಾಜಿ ಸಚಿವ ಬಿ. ಸೋಮಶೇಖರ್ ತಿಳಿಸಿದರು.ನಗರದ ರಂಗಾಯಣದ ಬಿ.ವಿ. ಕಾರಂತ ರಂಗ ಚಾವಡಿಯಲ್ಲಿ ಚಾರ್ವಾಕ ಸಂಸ್ಥೆಯು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಅಸ್ಪೃಶ್ಯರು ಆಳುವ ವರ್ಗವಾಗಬೇಕು ಎಂಬ ಕನಸನ್ನು ನನಸು ಮಾಡಲು ಎಡ- ಬಲ ಸಮುದಾಯಗಳ ಜವಾಬ್ದಾರಿ ಕುರಿತು ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಒಂದು ದಿನದ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದಲ್ಲಿ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಹಾಗೂ ಮೂಲಭೂತ ಹಕ್ಕುಗಳಂತಹ ಮೌಲ್ಯಗಳನ್ನು ಅಳವಡಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರು, ದಲಿತ ಸಮುದಾಯಕ್ಕೆ ಸಂವಿಧಾನವನ್ನೇ ಶಕ್ತಿಯುತ ಆಯುಧವಾಗಿ ನೀಡಿದ್ದಾರೆ ಎಂದರು.ಸ್ವಾತಂತ್ರ್ಯ ನಂತರ ನಡೆದ ಅನೇಕ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲೂ ದಲಿತ ಸಮುದಾಯ ತನ್ನ ಮತದ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಪರಿಣಾಮವಾಗಿ ರಾಜಕೀಯವಾಗಿ ಇನ್ನೂ ಇತರರ ಮೇಲೆ ಅವಲಂಬಿತವಾಗಿರುವ ಸ್ಥಿತಿ ಮುಂದುವರಿದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇಂದು ದಲಿತ ಸಮುದಾಯದಲ್ಲಿ ಸಾವಿರಾರು ವೈದ್ಯರು, ಎಂಜಿನಿಯರ್ ಗಳು, ಪ್ರಾಧ್ಯಾಪಕರು, ಐಎಎಸ್, ಐಪಿಎಸ್ ಅಧಿಕಾರಿಗಳು, ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಇದ್ದರೂ ರಾಜಕೀಯ ನಾಯಕತ್ವದ ವಿಚಾರದಲ್ಲಿ ಒಗ್ಗಟ್ಟು ಕಾಣುತ್ತಿಲ್ಲ. ಇದರಿಂದ ಸಮುದಾಯದ ರಾಜಕೀಯ ಪ್ರಭಾವ ಕುಂಠಿತವಾಗಿದೆ ಎಂದು ಅವರು ಹೇಳಿದರು.
ದಲಿತ ಸಂಘಟನೆಗಳು ವಿಭಜನೆಯ ದಾರಿಯಲ್ಲಿ ಸಾಗುತ್ತಿರುವುದು ಸಮುದಾಯದ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ. ಸಮುದಾಯದ ಎಲ್ಲಾ ವರ್ಗದ ವಿದ್ಯಾವಂತರು, ಯುವಕರು ಹಾಗೂ ಸಂಘಟನೆಗಳು ಅಂಬೇಡ್ಕರ್ ಅವರ ಆಶಯಗಳನ್ನು ಅರ್ಥ ಮಾಡಿಕೊಂಡು ರಾಜಕೀಯ ಸಬಲೀಕರಣದತ್ತ ಹೆಜ್ಜೆ ಇರಿಸಬೇಕು ಎಂದು ಅವರು ಕರೆ ನೀಡಿದರು.
ದಸಂಸ ಮುಖಂಡರಾದ ಹರಿಹರ ಆನಂದಸ್ವಾಮಿ, ದೇವಗಳ್ಳಿ ಸೋಮಶೇಖರ್, ದೇವರತ್ನ ಫೌಂಡೇಶನ್ ಅಧ್ಯಕ್ಷ ಶಿವಪ್ರಸಾದ್ ಎಂ.ಸಿ. ಹುಂಡಿ, ಸಂಘಟಕ ನಾಗರಾಜ್ ಅಂಬೇಡ್ಕರ್, ರಮೇಶ್, ಚಾರ್ವಾಕ ಸಂಸ್ಥೆಯ ಅಧ್ಯಕ್ಷ ಗಿರೀಶ್ ಮಾಚಳ್ಳಿ ಮೊದಲಾದವರು ಇದ್ದರು.----
ಕೋಟ್...ಡಾ.ಬಿ.ಆರ್. ಅಂಬೇಡ್ಕರ್ ಅವರು ದಲಿತರು ಹಾಗೂ ಶೋಷಿತ ಸಮುದಾಯಗಳು, ರಾಜಕೀಯ ಅಧಿಕಾರವನ್ನು ಪಡೆದು ಆಳುವ ವರ್ಗವಾಗಿ ಬೆಳೆಯಬೇಕು ಎಂಬ ಕನಸು ಕಂಡಿದ್ದರು. ಆದರೆ, ಒಗ್ಗಟ್ಟಿನ ಕೊರತೆಯಿಂದ ಸ್ವಾತಂತ್ರ್ಯ ಬಂದ ಬಳಿಕವೂ ದಲಿತ ಸಮುದಾಯ ರಾಜಕೀಯವಾಗಿ ನಿರೀಕ್ಷಿತ ಮಟ್ಟದಲ್ಲಿ ಸಬಲವಾಗಿಲ್ಲ.
- ಬಿ. ಸೋಮಶೇಖರ್, ಮಾಜಿ ಸಚಿವರು