ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜೀವನದ ಶ್ರೇಷ್ಠತೆ ಯೌವನದಲ್ಲಿರದೇ ವಯೋವೃದ್ಧರ ಅನುಭವದಲ್ಲಿದ್ದು, ಹಿರಿಯ ಜೀವಿಗಳನ್ನು ಭವಿಷ್ಯದ ಮಾರ್ಗದರ್ಶಕರಂತೆ ಕಾಣಬೇಕಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲೆಯ ಹಿರಿಯ ನಾಗರಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯರ ಅನುಭವ, ತ್ಯಾಗ, ಪ್ರೀತಿ ಮತ್ತು ಮಾರ್ಗದರ್ಶನ ನಮ್ಮ ಸಮಾಜದ ಬಲವಾದ ಮೂಲಸ್ತಂಭವಾಗಿದೆ ಎಂದು ಹೇಳಿದರು.
ಹಳೆಯ ಮರದ ನೆರಳಿನಲ್ಲಿ ಹೊಸ ಬೀಜಗಳು ಎಂಬಂತೆ, ಹಿರಿಯರ ಅನುಭವನದ ನೆರಳಿಲ್ಲದೇ ಯುವಜನಾಂಗದ ಬೆಳೆವಣಿಗೆ ಅಸಾಧ್ಯ. ನಮ್ಮ ಭವಿಷ್ಯದ ದಾರಿದೀಪವೂ ಹೌದು. ಇಂದು ನಾವು ಹಿರಿಯರನ್ಮು ಗೌರವಿಸುವುದಷ್ಟೇ ಅಲ್ಲ, ಅವರೊಂದಿಗೆ ಸಂಪರ್ಕ ಸಾಧಿಸುವ, ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ಅವರ ಬದುಕಿಗೆ ಗೌರವ ನೀಡುವ ನಿಜವಾದ ಸಂಸ್ಕೃತಿ ಬೆಳೆಸಬೇಕಿದೆ ಎಂದು ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಮಾತನಾಡಿ, ಹಳೆಯ ಬೇರು, ಹೊಸ ಚಿಗುರು ಎಂಬಂತೆ ಒಂದು ಮರ ತನ್ನ ಹಳೆಯ ಬೇರುಗಳ ಆಧಾರದ ಮೂಲಕ ಹೊಸ ಚಿಗುರು ಬಿಟ್ಟು ಬೆಳೆದಾಗ ಮಾತ್ರ ಸೌಂದರ್ಯವನ್ನು ಪಡೆಯುತ್ತದೆ. ಅದೇ ರೀತಿ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರಗಳು ಮೂಲ ಬೇರಾಗಿದ್ದು, ಆಧುನಿಕತೆ ಹೊಸ ಚಿಗುರಾಗಬೇಕಿದೆ ಎಂದರು.
ವೈದ್ಯಾಧಿಕಾರಿ ಸಚಿನ್ ದೇಸಾಯಿ ಉಪನ್ಯಾಸ, ಮುರುಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಹಿರಿಯ ನಾಗರಿಕರಾದ ಸಿದ್ದಲಿಂಗಯ್ಯ ಗುಳೇದ, ಮಲ್ಲಿಕಾರ್ಜುನ ಯಾಳವಾರ, ಮಲ್ಲಪ್ಪ ಗಣಿಗೇರ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕೆ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಗಿರಿಜಾ ಪಾಟೀಲ, ಪ್ರಭು ಹಳ್ಳೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.ಹಿರಿಯ ಸಾಧಕರಿಗೆ ಸನ್ಮಾನ: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಯಾಳವಾರ, ಮಲ್ಲಪ್ಪ ಗಾಣಿಗೇರ, ಸಿದ್ದಲಿಂಗಪ್ಪ ಶಿರೂರ, ಹುಚ್ಚನಗೌಡ ಗೌಡರ, ಶಾಂತಾಬಾಯಿ ಕಠಾರಿ, ದುಂಡಪ್ಪ ಬಡಿಗೇರ, ಮಹಾದೇವಪ್ಪ ಕಡಕಭಾವಿ, ಸಂಗಯ್ಯ ಚನ್ನಯ್ಯ ಹಿರೇಮಠ, ಸದಾಶಿವ ತಮ್ಮನಪ್ಪ ಗೊಂದಕರ ಅವರನ್ನು ಸನ್ಮಾನಿಸಲಾಯಿತು.