ಧಾರವಾಡಿಗರ ಪ್ರತ್ಯೇಕ ಮಹಾನಗರ ಪಾಲಿಕೆ ಕನಸಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸಭಾ ನಾಯಕ ಈರೇಶ ಅಂಚಟಗೇರಿ ಮತ್ತು ಮೇಯರ್ ಜ್ಯೋತಿ ಪಾಟೀಲ್ ಬೆಂಕಿ ಇಟ್ಟಿದ್ದಾರೆ. ಇದು ಇಡೀ ಧಾರವಾಡ ನಗರಕ್ಕೆ ಮಾಡಿದ ದ್ರೋಹ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ:

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಬಿಜೆಪಿ ಮುಖಂಡರು ವಿರೋಧಿಸಿದ್ದು, ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತಾವೇ ಮಾಡಿದ ಪ್ರತ್ಯೇಕ ಪಾಲಿಕೆಯ ಗೊತ್ತುವಳಿ ವಾಪಸ್‌ ಪಡೆದಿರುವುದನ್ನು ಪ್ರತ್ಯೇಕ ಮಹಾನಗರ ಪಾಲಿಕೆ ಅಭಿವೃದ್ಧಿ ವೇದಿಕೆ ಸದಸ್ಯರು ತೀವ್ರವಾಗಿ ಖಂಡಿಸಿದರು.

ಇಲ್ಲಿಯ ಜ್ಯುಬಿಲಿ ವೃತ್ತದಲ್ಲಿ ವೇದಿಕೆ ಮುಖಂಡರು ಪ್ರತಿಭಟನೆ ನಡೆಸಿ ಬಿಜೆಪಿ ಮುಖಂಡರ ಭಾವಚಿತ್ರ ಪ್ರದರ್ಶಿಸಿ ಘೋಷಣೆ ಕೂಗಿದರು. ಪ್ರತ್ಯೇಕ ಮಹಾನಗರ ಪಾಲಿಕೆ ಅಭಿವೃದ್ಧಿ ವೇದಿಕೆ ಮುಖ್ಯಸ್ಥ ವೆಂಕಟೇಶ ಮಾಚಕನೂರ, ಪಾಲಿಕೆಯ ಈ ನಿರ್ಧಾರ ಧಾರವಾಡಿಗರನ್ನು ನಿಜಕ್ಕೂ ಅಭಿವೃದ್ಧಿಯಿಂದ ವಂಚನೆ ಮಾಡುವ ವ್ಯವಸ್ಥಿತ ಜಾಲವಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

ಧಾರವಾಡಿಗರ ಪ್ರತ್ಯೇಕ ಮಹಾನಗರ ಪಾಲಿಕೆ ಕನಸಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಸಭಾ ನಾಯಕ ಈರೇಶ ಅಂಚಟಗೇರಿ ಮತ್ತು ಮೇಯರ್ ಜ್ಯೋತಿ ಪಾಟೀಲ್ ಬೆಂಕಿ ಇಟ್ಟಿದ್ದಾರೆ. ಇದು ಇಡೀ ಧಾರವಾಡ ನಗರಕ್ಕೆ ಮಾಡಿದ ದ್ರೋಹ. ಇವರು ಧಾರವಾಡದ ಅಭಿವೃದ್ಧಿಗೆ ವಿರುದ್ಧವಾಗಿದ್ದಾರೆ ಎಂದು ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಲು ಮುಂದಾದ ವೇಳೆ ಪೊಲೀಸರು ಅವರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

ಹೋರಾಟಗಾರರಾದ ವಂಸಂತ ಅರ್ಕಾಚಾರ, ರವಿ ಮಾಳಗೇರ, ಶಂಬು ಸಾಲಿಮನಿ, ಪರಮೇಶ್ವರ ಕಾಳೆ, ದೀಪಾ ನೀರಲಕಟ್ಟಿ, ಕವಿತಾ ಕಬ್ಬೇನೂರ ಮತ್ತಿತರರು ಇದ್ದರು.

ಏಕಪಕ್ಷೀಯ ನಿರ್ಣಯ..

ಬಿಜೆಪಿ ಈ ನಿರ್ಣಯ ಕೈಗೊಳ್ಳುವಾಗಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಚರ್ಚೆಗೆ ಅವಕಾಶ ಕೊಡದೇ ಏಕಪಕ್ಷೀಯ ನಿರ್ಣಯ ಕೈಗೊಂಡಿದೆ. ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟ ಅನಿವಾರ್ಯ

ರಾಜಶೇಖರ್ ಕಮತಿ, ಪಾಲಿಕೆ ಕಾಂಗ್ರೆಸ್‌ ಸದಸ್ಯರು.