ಬೆಳೆ ಹಾನಿ ಅನುಭವಿಸಿದ ರೈತರಲ್ಲಿ ಶೇ. 20ರಷ್ಟು ಜನ ಬೆಳೆ ವಿಮೆಗೆ ನೋಂದಾಯಿಸಿಲ್ಲ. ಅಂತಹ ರೈತರ ಪಟ್ಟಿಯನ್ನು ಅಧಿಕಾರಿಗಳಿಂದ ಪಡೆದು ಅವರಿಗೆ ಪ್ರತ್ಯೇಕ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಜಮೀರ ಅಹ್ಮದ್‌ ಖಾನ್‌ ಹೇಳಿದರು.

ಹರಪನಹಳ್ಳಿ: ಬೆಳೆ ಹಾನಿ ಅನುಭವಿಸಿದ ರೈತರಲ್ಲಿ ಶೇ. 20ರಷ್ಟು ಜನ ಬೆಳೆ ವಿಮೆಗೆ ನೋಂದಾಯಿಸಿಲ್ಲ. ಅಂತಹ ರೈತರ ಪಟ್ಟಿಯನ್ನು ಅಧಿಕಾರಿಗಳಿಂದ ಪಡೆದು ಅವರಿಗೆ ಪ್ರತ್ಯೇಕ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಜಮೀರ ಅಹ್ಮದ್‌ ಖಾನ್‌ ಹೇಳಿದರು.

ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದ ಬಳಿ ಶುಕ್ರವಾರ ಸೋಮನಗೌಡ ಹಾಗೂ ನಿಂಗಪ್ಪ ಎಂಬುವವರ ಜಮೀನಿನಲ್ಲಿ ಬೆಳೆ ಹಾನಿ ಪರಿಶೀಲಿಸಿ ಮಾತನಾಡಿದರು.

ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ಮಳೆ ಇಲ್ಲದೆ ಬೆಳೆ ನಷ್ಟ ಸಂಭವಿಸಿದೆ. ಬಹಳಷ್ಟು ರೈತರು ಬೆಳೆ ವಿಮೆಗೆ ನೋಂದಾಯಿಸಿದ್ದಾರೆ. ಆದರೆ, ಇನ್ನೂ ಶೇ. 20ರಷ್ಟು ರೈತರು ವಿಮೆ ನೋಂದಾಯಿಸಿಲ್ಲ. ಮಳೆ ಆಗದೆ ಬೆಳೆ ಕುಂಠಿತವಾಗಿರುವ ಕಡೆಯೂ ಲದ್ದಿಹುಳುಗಳ ಕಾಟವಿದೆ. ಈ ಎಲ್ಲ ಸಮಸ್ಯೆಗಳನ್ನು ಕುರಿತು ನೇರವಾಗಿ ಮುಖ್ಯಮಂತ್ರಿಯವರ ಬಳಿ ಚರ್ಚಿಸಿ ಸೂಕ್ತ ಪರಿಹಾರಕ್ಕೆ ಮನವಿ ಮಾಡುತ್ತೇನೆ ಎಂದರು.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ನೊಂಗಾಯ್ಜ್ ಮೊಹಮದ್‌ ಅಕ್ರಮ ಷಾ ಅಲಿ, ಎಸ್ಪಿ ಜಾಹ್ನವಿ, ಡಿವೈಎಸ್ಪಿಗಳಾದ ಸಂತೋಷ ಚವ್ಹಾಣ, ಮಲ್ಲೇಶ ದೊಡ್ಡಮನಿ, ಸಿಪಿಐ ಮಹಾಂತೇಶ ಸಜ್ಜನ್, ಉಪವಿಭಾಗಾಧಿಕಾರಿ ಸುರೇಶಕುಮಾರ, ತಹಸೀಲ್ದಾರ್ ಬಿ.ವಿ. ಗಿರೀಶಬಾಬು, ತಾಪಂ ಇಒ ವೈ.ಎಚ್. ಚಂದ್ರಶೇಖರ, ಪಿಎಸ್‌ ಐ ಶುಂಭುಲಿಂಗ ಹಿರೇಮಠ, ಕಿರಣ್‌ ಕುಮಾರ, ನಾಗರತ್ನಾ, ಕೃಷಿ ಎಡಿ ಮಹಮದ್‌ ಆಶ್ರಪ್, ತೋಟಗಾರಿಕೆಯ ಸಹಾಯಕ ನಿರ್ದೆಶಕ ಜಯಸಿಂಹ, ವಿವಿಧ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ವಿ. ಅಂಜಿನಪ್ಪ, ಕುಬೇರಗೌಡ, ತಾಪಂ ಮಾಜಿ ಸದಸ್ಯರಾ ಮೈದೂರು ರಾಮಣ್ಣ, ದೇವೇಂದ್ರಗೌಡ, ಪೂಜಾರ ಕೃಷ್ಣನಾಯ್ಕ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಕನಕನಬಸ್ಸಾಪುರ ಮಂಜುನಾಥ ರೈತರು ಇದ್ದರು.

ಬಿತ್ತನೆ ಮಾಡದ ಕೃಷಿ ಭೂಮಿಗೂ ಬೆಳೆ ಪರಿಹಾರ ನೀಡಲು ಪ್ರಯತ್ನ

ಕೊಟ್ಟೂರು: ಮಳೆಯಾಗದೆ ಬಿತ್ತನೆ ಮಾಡಲು ಆಗಿಲ್ಲ, ಹೀಗಾಗಿ, ಬೆಳೆ ಹಾನಿ ಪರಿಹಾರವನ್ನು ವಿಮೆ ಮಾಡಿಸಿದವರಿಗೆ ನೀಡದೇ ನಮಗೂ ನೀಡಬೇಕು ಎಂದು ತಾಲೂಕಿನ ರೈತ ಸಿದ್ದಪ್ಪ ಬರ ವೀಕ್ಷಣೆಗೆ ಆಗಮಿಸಿದ ಸಚಿವ ಜಮೀರ್ ಅಹಮದ್ ಅವರ ಬಳಿ ಮನವಿ ಮಾಡಿದರು..ತಾಲೂಕಿನ ಗಜಾಪುರಜಲ್ಲಿ ಮಲ್ಲಿಕಾರ್ಜುನ ಎಂಬುವವರ ಮೆಕ್ಕೆಜೋಳ ಹೊಲಕ್ಕೆ ಶುಕ್ರವಾರ ಬೆಳೆ ಹಾನಿ ಪರಿಶೀಲಿಸಲು ಆಗಮಿಸಿದ ವೇಳೆ ಸಚಿವರಿಗೆ ಮನವಿ ಮಾಡಿದರು. ಕೆಲವರು ಬೆಳೆ ವಿಮೆಗೆ ನೋಂದಣಿ ಮಾಡಿಸಿಯೇ ಇಲ್ಲ. ಅಂತವರಿಗೂ ಪರಿಹಾರದ ಮೊತ್ತ ನೀಡಿ ಎಂದು ಮನವಿ ಮಾಡುತ್ತಿದ್ದಂತೆ ಸಚಿವ ಜಮೀರ್ ಅಹಮದ್ ಈ ವಿಷಯವನ್ನು ಖಂಡಿತವಾಗಿ ಮುಖ್ಯಮಂತ್ರಿ ಬಳಿ ಚರ್ಚಿಸಿ ಎಲ್ಲ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸುವೆ ಎಂದು ಹೇಳಿ ರೈತರನ್ನು ಸಮಾಧಾನ ಪಡಿಸಿದರು.ಈ ವೇಳೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು ವಿಮೆಗೆ ನೋಂದಣಿ ಮಾಡಿಸಿದ ರೈತರು, ನೋಂದಣಿ ಮಾಡಿಸದ ರೈತರು ಮತ್ತು ಮಳೆ ಇಲ್ಲದೆ ಬಿತ್ತನೆ ಮಾಡದ ರೈತರ ಪಟ್ಟಿ ಮಾಡಿ ಕೊಡಿ. ಎಲ್ಲರಿಗೂ ಪರಿಹಾರ ದೊರಕಿಸಲು ಪ್ರಯತ್ನ ಮಾಡುವೆ ಎಂದು ಹೇಳಿದರು.

ಮತ್ತೊಬ್ಬ ರೈತ ಟಿ. ಮೂಗಪ್ಪ ಕಳೆದ ವರ್ಷದ ಬೆಳೆವಿಮೆ ಹಣ ಈಗಲೂ ಬಂದಿಲ್ಲ. ದಯವಿಟ್ಟು ಪರಿಹಾರ ಕೊಡಿಸಿ, ನಮ್ಮ ಬದುಕು ಸಾಗಲು ನೆರವಾಗಿ ಎಂದು ಕೋರಿದರು.ಜೈಕಾರ:

ಸಚಿವ ಜಮೀರ್ ಗಜಾಪುರದ ಮಲ್ಲಿಕಾರ್ಜುನ ಹೊಲಕ್ಕೆ ವೀಕ್ಷಣೆಗೆಂದು ಆಗಮಿಸುತ್ತಿದ್ದಂತೆ ಕೆಲ ರೈತರು ಮತ್ತು ಮಹಿಳೆಯರು ಸಚಿವರಿಗೆ ಹಾರ ಹಾಕಿ ನಿರಂತರ ಜೈಕಾರಗಳನ್ನು ಹಾಕುತ್ತ ಹೊಲಕ್ಕೆ ಕರೆ ತಂದರು. ಇದನ್ನು ಗಮನಿಸಿದ ಅಧಿಕಾರಿಯೊಬ್ಬರು ಬರ ವೀಕ್ಷಣೆಗೆ ಬರುವ ಸಚಿವರಿಗೆ ಅದ್ಧೂರಿಯಾಗಿ, ಆತ್ಮೀಯವಾಗಿ ಸ್ವಾಗತಿಸಿ, ಜೈಕಾರ ಹಾಕಿ ಬರಮಾಡಿಕೊಂಡಿದ್ದಕ್ಕೆ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದರು.ಸಚಿವರೊಂದಿಗೆ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ, ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಜಿಪಂ ಸಿಇಒ ನೊಂಗಾಯ್ಜ್ ಮೊಹಮದ್‌ ಅಕ್ರಮ ಷಾ ಅಲಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ, ಉಪನಿರ್ದೇಶಕ ವಾಮದೇವ ಕೊಳ್ಳಿ, ಸಹಾಯಕ ನಿರ್ದೇಶಕ ತೇಜವರ್ಧನ್, ಸಹಾಯಕ ಅಧಿಕಾರಿ ಶ್ಯಾಮ್ ಸುಂದರ್, ಎಸ್.ಪಿ. ಎಸ್. ಜಾಹ್ನವಿ, ಡಿ.ವೈ.ಎಸ್.ಪಿ. ಮಲ್ಲೇಶ ದೊಡ್ಡಮನಿ, ಸಿಪಿಐ ದುರುಗಪ್ಪ, ಜಿಪಂಮಾಜಿ ಸದಸ್ಯ ಕೆ.ಎಂ. ಶಶಿಧರ, ಪಪಂ ಮಾಜಿ ಅಧ್ಯಕ್ಷ ಶಿವಪ್ಪ ಕಾವಲಿ ಮತ್ತಿತರ ಮುಖಂಡರು ಇದ್ದರು.