ದಾಬಸ್ಪೇಟೆ: ಕೆಎಸ್ಆರ್ ಟಿಸಿ ಬಸ್, ಲಾರಿ, ಕ್ಯಾಂಟರ್, ಮೂರು ಕಾರು, ಬೈಕ್ ನಡುವೆ ಸರಣಿ ಅಪಘಾತವಾಗಿರುವ ಘಟನೆ ಸೋಂಪುರ ಹೋಬಳಿಯ ಅಂಚೆಮನೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ತುಮಕೂರು-ಬೆಂಗಳೂರು ರಸ್ತೆಯಲ್ಲಿ ನಡೆದಿದೆ.
ಬುಧವಾರ ಸಂಜೆ ಬೆಂಗಳೂರು ಕಡೆಯಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಕಾರು ಟ್ರಾಫಿಕ್ ಜಾಮ್ನಿಂದ ರಸ್ತೆ ಮಧ್ಯೆ ನಿಧಾನವಾಗಿ ಚಲಿಸುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕೆಎಸ್ಆರ್ಟಿಸಿ ಬಸ್ ಕಾರಿಗೆ ಡಿಕ್ಕಿಹೊಡೆದಿದೆ. ಆಗ ಮುಂದಿದ್ದ ಇನ್ನೆರಡು ಕಾರುಗಳಿಗೆ ಡಿಕ್ಕಿ ಹೊಡೆದೆದೆ. ಎಕ್ಸಯೂವಿ ಕಾರು ಸಂಪೂರ್ಣ ಜಖಂಗೊಂಡಿದೆ. ಕೆಎಸ್ಆರ್ ಟಿಸಿಬಸ್ಗೆ ಟ್ರಕ್ ಲಾರಿ ಡಿಕ್ಕಿ ಹೊಡೆದಿದ್ದು, ಸರಣಿ ಅಪಘಾತ ತಪ್ಪಿಸಲು ಹೋದ ಪೈಂಟ್ ತುಂಬಿಕೊಂಡು ಹೋಗುತ್ತಿದ್ದ ಕ್ಯಾಂಟರ್ ನಿಯಂತ್ರಣ ತಪ್ಪಿ ಟ್ರಕ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಹಳ್ಳಕ್ಕೆ ಪಲ್ಟಿಯಾಗಿದೆ. ಪೈಂಟ್ ಡಬ್ಬಗಳೆಲ್ಲಾ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಅದೇ ವೇಳೆ ಕ್ಯಾಂಟರ್ ಪಕ್ಕ ಬರುತ್ತಿದ್ದ ಬೈಕ್ ಕ್ಯಾಂಟರ್ ಹಿಂಬದಿಗೆ ಸಿಲುಕಿ ಕ್ಯಾಂಟರ್ ಸಮೇತ ಹಳ್ಳಕ್ಕೆ ಬಿದ್ದಿದ್ದು ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಅಪಘಾತದಲ್ಲಿ ಟ್ರಕ್ ಲಾರಿ ಹಾಗೂ ಕ್ಯಾಂಟರ್ ಚಾಲಕನಿಗೆ ಕಾಲು ಮುರಿದಿದ್ದು, ಬಸ್ ಹಾಗೂ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರಣಿ ಅಪಘಾತದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಏಳೆಂಟು ಕಿಮೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.ಅಪಘಾತದ ಸ್ಥಳದಲ್ಲಿ ಮಧ್ಯೆ ರಸ್ತೆಯಲ್ಲಿ ನಿಂತಿದ್ದ ಸರಣಿ ಅಪಘಾತದ ವಾಹನಗಳನ್ನು ರಸ್ತೆಯಿಂದ ಹೊರ ಹಾಕಲು ನೆಲಮಂಗಲ ಸಂಚಾರ ಪೊಲೀಸರು ಹಾಗೂ ದಾಬಸ್ ಪೇಟೆ ಪೊಲೀಸ್ ಠಾಣೆಯ 20ಕ್ಕೂ ಹೆಚ್ಚು ಸಿಬ್ಬಂದಿ ಹರಸಾಹಸ ಪಟ್ಟರು. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಟೋ 5 : ಕ್ಯಾಂಟರ್ ಪಲ್ಟಿಯಾಗಿರುವುದು
ಪೋಟೋ 6 : ಟ್ರಕ್ ಲಾರಿ ಜಖಂಗೊಂಡಿರುವುದು