ಕಂಪ್ಯೂಟರನಲ್ಲಿ ಎಸ್ಎಟಿಎಸ್ ಸಾಫ್ಟವೇರನಲ್ಲಿ ಪಠ್ಯಪುಸ್ತಕದ ಇಂಡೆಂಟ್ ಹಾಕುವಾಗ ಬಹಳಷ್ಟು ಸಮಸ್ಯೆ ಆಗುತ್ತಿವೆ. ಮುಖ್ಯವಾಗಿ ಶಾಲೆಯ ಯುಸರ್ ಐಡಿ ಹಾಕಿದಾಗ ಯುಸರ್ ನಾಟ್ ಫೌಂಡ್ ಎಂದು ತೋರಿಸುತ್ತಿದೆ. ಕೆಲವೊಮ್ಮೆ ಒಟಿಪಿ ಬರುವುದಿಲ್ಲ.

ಎಸ್.ಜಿ. ತೆಗ್ಗಿನಮನಿನರಗುಂದ: ಸರ್ವರ್ ಸಮಸ್ಯೆಯಿಂದ 2026- 27ನೇ ಸಾಲಿನ ಪ್ರಾಥಮಿಕ, ಪ್ರೌಢಶಾಲೆಗಳ ಪಠ್ಯಪುಸ್ತಕದ ಇಂಡೆಂಟ್ ಸಲ್ಲಿಕೆ ಪ್ರಕ್ರಿಯೆಗೆ ತೀವ್ರ ಹಿನ್ನಡೆಯಾಗಿದೆ.

ಈಗಾಗಲೇ ಇಂಡೆಂಟ್ ಸಲ್ಲಿಕೆ ಅವಧಿ ಮುಗಿದಿದ್ದು, ಈ ಅವಧಿಯಲ್ಲಿ ಕೇವಲ 20 ಶಾಲೆಗಳು ಮಾತ್ರ ಇಂಡೆಂಟ್ ಸಲ್ಲಿಸಿವೆ. ಹೀಗಾಗಿ ಇಂಡೆಂಟ್ ಸಲ್ಲಿಕೆಯ ಅವಧಿಯನ್ನು ವಿಸ್ತರಿಸಬೇಕೆಂದು ಶಾಲೆಗಳ ಮುಖ್ಯ ಶಿಕ್ಷಕರು ಇಲಾಖೆಯ ಮೊರೆ ಇಟ್ಟಿದ್ದಾರೆ.

ತಾಲೂಕಿನಲ್ಲಿ ಒಟ್ಟು 115 ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. ಈ ಶಾಲೆಗಳಿಂದ 2026- 27ನೇ ಸಾಲಿನ ಪಠ್ಯಪುಸ್ತಕದ ಇಂಡೆಂಟ್ ಹಾಕಲು ಎಸ್ಎಟಿಎಸ್ (ಸ್ಟುಡೆಂಟ್ ಅಚೀವ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್) ಸಾಫ್ಟವೇರನಲ್ಲಿ ಸಮಸ್ಯೆ ಉಂಟಾಗಿದೆ. ಅಲ್ಲದೇ ಈ ಪ್ರಕ್ರಿಯೆ ಪೂರ್ಣಗೊಳಿಸಲು ಶಿಕ್ಷಣ ಇಲಾಖೆಯವರು ಫೆ. 24ರ ವರೆಗೆ ಕಾಲಾವಧಿ ನೀಡಿದ್ದು, ಈ ಅವಧಿಯಲ್ಲಿ ಕೇವಲ ಸುಮಾರು 20 ಶಾಲೆಗಳು ಇಂಡೆಂಟ್ ಹಾಕಿವೆ.

ಏನು ಸಮಸ್ಯೆ?: ಕಂಪ್ಯೂಟರನಲ್ಲಿ ಎಸ್ಎಟಿಎಸ್ ಸಾಫ್ಟವೇರನಲ್ಲಿ ಪಠ್ಯಪುಸ್ತಕದ ಇಂಡೆಂಟ್ ಹಾಕುವಾಗ ಬಹಳಷ್ಟು ಸಮಸ್ಯೆ ಆಗುತ್ತಿವೆ. ಮುಖ್ಯವಾಗಿ ಶಾಲೆಯ ಯುಸರ್ ಐಡಿ ಹಾಕಿದಾಗ ಯುಸರ್ ನಾಟ್ ಫೌಂಡ್ ಎಂದು ತೋರಿಸುತ್ತಿದೆ. ಕೆಲವೊಮ್ಮೆ ಒಟಿಪಿ ಬರುವುದಿಲ್ಲ. ಇದರಿಂದ ತಾಲೂಕಿನ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಇಂಡೆಂಟ್ ಹಾಕಲು ಪರದಾಡುತ್ತಿದ್ದಾರೆ. ಇದೇ ರೀತಿಯ ಸಮಸ್ಯೆಯನ್ನು ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು ಎದುರಿಸುತ್ತಿವೆ.ಬೋಧನೆಗೆ ಸಮಸ್ಯೆ: ಮುಖ್ಯ ಶಿಕ್ಷಕರೊಂದಿಗೆ ಸಹ ಶಿಕ್ಷಕರು ಕೂಡ ಇಂಡೆಂಟ್ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಿರತರಾಗಿದ್ದರಿಂದ ದೈನಂದಿನ ಪಾಠ ಬೋಧನೆಗೆ ಹಿನ್ನಡೆಯಾಗುತ್ತಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಇಲಾಖೆಯವರು ಕರ್ನಾಟಕ ಪಠ್ಯಪುಸ್ತಕ ಸೊಸೈಟಿಗೆ ಸಿಎಟಿಎಸ್ ಸಾಫ್ಟವೇರ್ ಅನ್ನು ಅಪ್ಡೇಟ್ ಮಾಡಿ ಸರ್ವರ್ ಸಮಸ್ಯೆಯನ್ನು ಬಗೆಹರಿಸಲು ತಾಲೂಕಿನ ಮುಖ್ಯ ಶಿಕ್ಷಕರು ಮನವಿ ಮಾಡಿದ್ದಾರೆ.

ಅವಧಿ ವಿಸ್ತರಿಸಿ: ಸರ್ವರ್ ಸಮಸ್ಯೆ ಮುಂದುವರಿದಲ್ಲಿ ಪಠ್ಯಪುಸ್ತಕದ ಇಂಡೆಂಟ್ ಹಾಕಲು ಇನ್ನೂ ಒಂದು ವಾರಗಳ ಕಾಲ ಅವಕಾಶ ಕೊಟ್ಟರೆ ಮಾತ್ರ ಪ್ರಕ್ರಿಯೆ ಪೂರ್ಣಗೊಳಸಲು ಸಾಧ್ಯವಾಗುತ್ತದೆ. ಕೂಡಲೇ ಇಂಡೆಂಟ್ ಸಲ್ಲಿಕೆಯ ಅವಧಿಯನ್ನು ವಿಸ್ತರಿಸುವಂತೆ ಮುಖ್ಯ ಶಿಕ್ಷಕರು ಮನವಿ ಮಾಡಿದ್ದಾರೆ.ಸರ್ವರ್ ಮೇಲೆ ಒತ್ತಡ: ಎಸ್ಎಟಿಎಸ್ ಸಾಫ್ಟವೇರನಲ್ಲಿ ಸರ್ವರ್ ಸಮಸ್ಯೆ ಉಂಟಾಗಿದೆ. ಈ ಸಾಫ್ಟವೇರನ ಬಳಕೆದಾರರು ಸಂಖ್ಯೆ ಹೆಚ್ಚಾದಲ್ಲಿ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಆಗ ಸಾಫ್ಟವೇರ್ ಕಾರ್ಯ ನಿರ್ವಹಿಸುವುದೇ ಇಲ್ಲ. ಕೆಲವು ಬಾರಿ ಸಾಫ್ಟವೇರನ ವೇಗ ನಿಧಾನವಾಗುತ್ತದೆ. ಇದರಿಂದ ಇಂಡೆಂಟ್ ಸಲ್ಲಿಕೆ ಪ್ರಕ್ರಿಯೆ ನಡೆಸಲು ಸಾಧ್ಯವಾಗುವುದೇ ಇಲ್ಲ ಎಂದು ನರಗುಂದದ ಜ್ಞಾನಮುದ್ರಾ ಪಬ್ಲಿಕ ಸ್ಕೂಲನ ಆಡಳಿತ ಅಧಿಕಾರಿ ಮಂಜುನಾಥ ನಾಯಕ ತಿಳಿಸಿದರು.ಶಿಕ್ಷಕರಿಗೆ ತೊಂದರೆ: ಎಸ್ಎಟಿಎಸ್ ಸಾಫ್ಟವೇರನ ಸರ್ವರ್ ಸಮಸ್ಯೆಯಿಂದ ತಾಲೂಕಿನ ಶಾಲೆಗಳಗೆ ಪಠ್ಯಪುಸ್ತಕದ ಇಂಡೆಂಟ್ ಸಲ್ಲಿಕೆಗೆ ತೊಂದರೆಯಾಗಿದೆ ಎಂದು ವಿವಿಧ ಶಾಲೆಗಳ ಶಿಕ್ಷಕರು ತಿಳಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಇಂಡೆಂಟ್ ಅವಧಿ ವಿಸ್ತರಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಕಂಬಳಿ ತಿಳಿಸಿದರು.