ಸಾರಾಂಶ
ಶಿರಸ್ತೇದಾರ್ ಮಂಜುನಾಥ್, ಕೋದಂಡ ರಾಮಶೆಟ್ಟಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಬೇಲೂರುಸರ್ಕಾರಿ ನೌಕರರಿಗೆ ವರ್ಗಾವಣೆ ಅನಿವಾರ್ಯ. ಆದರೆ, ತಾವು ಕೆಲಸ ನಿರ್ವಹಿಸಿದ ಸ್ಥಳದಲ್ಲಿ ಹಾಗೂ ಸ್ಥಳೀಯರಲ್ಲಿ ಶಾಶ್ವತವಾಗಿ ತಮ್ಮ ನೆನಪು ಉಳಿಯುವಂತಾದಾಗ ಮಾತ್ರ ಸೇವೆಗೆ ನಿಜವಾದ ಅರ್ಥ ಬರುತ್ತದೆ ಎಂದು ತಹಸೀಲ್ದಾರ್ ಎಂ.ಮಮತಾ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ 40 ವರ್ಷಗಳಿಗೂ ಹೆಚ್ಚು ಕಾಲ ಸರ್ಕಾರಿ ನೌಕರಿಯಲ್ಲಿದ್ದು ನಿವೃತ್ತರಾದ ಆಹಾರ ಇಲಾಖೆಯ ಶಿರಸ್ತೇದಾರ್ ಮಂಜುನಾಥ್ ಹಾಗೂ ಕೋದಂಡ ರಾಮಶೆಟ್ಟಿ ಅವರ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಮಾತನಾಡಿದರು.ತಾಲೂಕು ಮಟ್ಟದ ಅಧಿಕಾರಿಗಳು ಹಲವು ಒತ್ತಡಗಳ ನಡುವೆ ಕಾರ್ಯನಿರ್ವಹಿಸಬೇಕಾಗಿದೆ. ಇದಲ್ಲದೇ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವುದು, ಸಮರ್ಪಕ ನಿರ್ವಹಣೆ, ಸಿಬ್ಬಂ ಸಹಕಾರದೊಂದಿಗೆ ಕಾರ್ಯರೂಪಗೊಳಿಸಿದಾಗ ಜನತೆಗೆ ತಲುಪುತ್ತದೆ. ಈ ನಿಟ್ಟಿನಲ್ಲಿ ಆಹಾರ ಇಲಾಖೆಯ ಶಿರಸ್ತೇದಾರ್ ಮಂಜುನಾಥ್ ಅವರು ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ಪಡೆದಿರುವ ಬಡವರಿಗೆ ನ್ಯಾಯಯುತವಾಗಿ ಪಡಿತರ ಸಿಗುವಲ್ಲಿ ಕಾರ್ಯನಿರ್ವಹಿಸುವ ಮೂಲಕ ಜನತೆಯ ಮನದಲ್ಲಿ ಉಳಿದಿದ್ದಾರೆ ಎಂದು ಹೇಳಿದರು.
‘ತಾವು ಕರ್ತವ್ಯ ನಿರ್ವಹಿಸುವಾಗ ಕಳಂಕ ರಹಿತ ಸೇವೆ ಮಾಡುವುದು ಮುಖ್ಯ. ಆ ನಿಟ್ಟಿನಲ್ಲಿ ಶಿರಸ್ತೇದಾರರಾದ ಮಂಜುನಾಥ್ ಹಾಗೂ ಕೊದಂಡರಾಮ ಶೆಟ್ಟಿ ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ಮಾಡಿ ತಮ್ಮ ವೃತ್ತಿಗೆ ನ್ಯಾಯ ಒದಗಿಸಿ ಸರ್ಕಾರಿ ನೌಕರರಿಗೆ ಮಾದರಿಯಾಗಿದ್ದಾರೆ. ಯುವ ಸಿಬ್ಬಂದಿ ಕೆಲವು ಸಂದರ್ಭದಲ್ಲಿ ಮಾಹಿತಿ ಕೊರತೆಯಿಂದ ತಡವರಿಸುತ್ತಾರೆ. ಆಗ ನಿವೃತ್ತಿ ಹೊಂದಿದ ಇಂತಹ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆದುಕೊಳ್ಳಬೇಕು. ತಾಲೂಕು ಕೇಂದ್ರಗಳಲ್ಲಿ ಕಂದಾಯ ಇಲಾಖೆ ಕಾರ್ಯಗಾರವನ್ನು ಏರ್ಪಡಿಸಿ ಸಿಬ್ಬಂದಿಗೆ ನಿವೃತ್ತಿ ಹೊಂದಿರುವ ಹಿರಿಯ ಮುತ್ಸದ್ಧಿಗಳಿಂದ ತರಬೇತಿ ನೀಡುವ ನಿಟ್ಟಿನಲ್ಲಿ ಮುಂದಾಗಬೇಕಿದೆ’ ಎಂದು ಹೇಳಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅಹಾರ ಇಲಾಖೆಯ ಶಿರಸ್ತೇದಾರ್ ಮಂಜುನಾಥ್, ‘2019ಕ್ಕೆ ಪದೋನ್ನತ್ತಿ ಹೊಂದಿ ತಾಲೂಕಿಗೆ ವರ್ಗಾವಣೆಯಾಗಿ ಕೆಲಸ ನಿರ್ವಹಿಸಿ ಜೂ.30 ಕ್ಕೆ ನಿವೃತ್ತಿ ಹೊಂದುತ್ತಿದ್ದೇನೆ. ಸುಮಾರು 39 ವರ್ಷಗಳ ಕಾಲ ಸರ್ಕಾರಿ ಕೆಲಸ ಮಾಡಿದ್ದೇನೆ. ನಮ್ಮ ಇಲಾಖೆ ಬಡವರಿಗೆ ಹತ್ತಿರವಾದ ಇಲಾಖೆ ಇವರ ಅವಧಿಯಲ್ಲಿ (ಬಡವರು) ಬಿಪಿಎಲ್ ಕಾರ್ಡ ಪಡೆದುಕೊಂಡಿರುವವರು ಹಾಗೂ ಆಹಾರ ಪಡಿತರ ಪಡೆದುಕೊಳ್ಳುವವರು ಈಗಲೂ ಜಿಲ್ಲೆಯಲ್ಲಿ ಯಾವುದೇ ಹಳ್ಳಿಗೆ ಹೋದರೆ ಗುರುತು ಮಾಡುತ್ತಾರೆ. ಇಲಾಖೆಯ ಪ್ರತಿಯೊಂದು ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿದ್ದು ತಮಗೆ ಸಂತೃಪ್ತಿ ತಂದಿದೆ. ಸಿಬ್ಬಂದಿಗೆ ಕಾನೂನಿನ ಅರಿವು ಇಲ್ಲದಿದ್ದರೆ ಜನಸಾಮಾನ್ಯರ ನಗೆಪಾಟಲಿಗೆ ಗುರಿಯಾಗಬೇಕಾಗುತ್ತದೆ. ತಹಸೀಲ್ದಾರ್ ಮಮತಾ ಅವರು ಉತ್ತಮವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು ಅಧಿಕಾರಿಗಳನ್ನು ಸಕಾಲದಲ್ಲಿ ಎಚ್ಚರಿಸುವ ಮೂಲಕ ಉತ್ತಮ ಆಡಳಿತ ನೀಡುತ್ತಿದ್ದಾರೆ’ ಎಂದರು.
ಸನ್ಮಾನಿತರ ಬಗ್ಗೆ ಪುರುಷೋತ್ತಮ್ ರಮೇಶ್ ಮಾತನಾಡಿದರು. ಇದೇ ಸಂದರ್ಭದಲ್ಲಿ ತೆರಿಗೆ ಇಲಾಖೆ, ಗ್ರಾಮ ಸಹಾಯಕರು, ಶಿರಸ್ತೇದಾರ್, ತಾಲೂಕು ಕಚೇರಿ ಸಿಬ್ಬಂದಿ ಹಾಗೂ ಸನ್ಮಾನಿತರ ಬಂಧು ಮಿತ್ರರು ಹಾಜರಿದ್ದರು.