ಒಳ ಚರಂಡಿ ಕಾಮಗಾರಿ ಪೂರ್ಣಗೊಳಿಸುವ 21 ಕೋಟಿ ಅನುದಾನ

| Published : Sep 11 2024, 01:08 AM IST

ಒಳ ಚರಂಡಿ ಕಾಮಗಾರಿ ಪೂರ್ಣಗೊಳಿಸುವ 21 ಕೋಟಿ ಅನುದಾನ
Share this Article
  • FB
  • TW
  • Linkdin
  • Email

ಸಾರಾಂಶ

2003ರಿಂದಲೂ ಕೂಡ ನಂಜನಗೂಡು ಒಳಚರಂಡಿ ಕಾಮಗಾರಿ ಪೂರ್ಣ

ಕನ್ನಡಪ್ರಭ ವಾರ್ತೆ ನಂಜನಗೂಡುತೀವ್ರ ನೆನೆಗುದಿಗೆ ಬಿದ್ದಿರುವ ಒಳ ಚರಂಡಿ ಕಾಮಗಾರಿ ಪೂರ್ಣಗೊಳಿಸುವ ಸಲುವಾಗಿ ಹೊಸದಾಗಿ 21 ಕೋಟಿ ಅನುದಾನ ಬಂದಿದ್ದು ಈ ವರ್ಷದ ಕೊನೆಯಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡು ನಾಗರೀಕರಿಗೆ ಸೇವೆ ಒದಗಿಸಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.ಪಟ್ಟಣದ ಶಂಕರಪುರ, ಆನಂದಪುರ, ನೀಲಕಂಠನಗರ ಬಡಾವಣೆಗಳಲ್ಲಿ ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ ಹಾಗೂ ನಗರಸಭಾ ಅಧಿಕಾರಿಗಳ ಜೊತೆಗೂಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸಾರ್ವಜನಿಕರಿಂದ ಸಮಸ್ಯೆ, ದೂರುಗಳನ್ನು ಆಲಿಸಿ ಅವರು ಮಾತನಾಡಿದರು. 2003ರಿಂದಲೂ ಕೂಡ ನಂಜನಗೂಡು ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳದೆ ಜನರಿಗೆ ಸಮಸ್ಯೆ ಎದುರಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲು, ಹೊಸ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಮತ್ತೆ 21 ಕೋಟಿ ಅನುದಾನ ನೀಡಲಾಗಿದೆ. ಕಾಮಮಗಾರಿ ಶೀಘ್ರ ಪೂರ್ಣಗೊಂಡು ಸಾರ್ವಜನಿಕರಿಗೆ ಮನೆ ಮನಗೆ ಸಂಪರ್ಕ ಕಲ್ಪಿಸಲಾಗುವುದು. ತಾಲೂಕಿನ ಮಹದೇವನಗರ ಬಳಿ ಒಳಚರಂಡಿ ತ್ಯಾಜ್ಯ ನೀರಿನ ಸಂಸ್ಕರಣೆ ಮಾಡುವ ಸಲುವಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ವ್ಯವಸ್ಥೆಯನ್ನು ಸಂಸ್ಕರಣಾ ಘಟಕದಲ್ಲಿ ಅಳವಡಿಸಲಾಗಿದೆ. ಆ ತ್ಯಾಜ್ಯ ನೀರನ್ನು ಕೃಷಿಗೆ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗುವುದು. ತ್ಯಾಜ್ಯ ನೀರು ಮ್ಯಾನ್ ಹೋಲ್ ಮೇಲೆ ಹುಕ್ಕಿ ರಸ್ತೆಯ ಮೇಲೆ ಹರಿಯುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ಒಳ ಚರಂಡಿಯ ತ್ಯಾಜ್ಯ ನೀರು ಮೇಲೆ ಬರದಂತೆ ನಿರಂತರವಾಗಿ ಸ್ವಚ್ಚತೆಯಲ್ಲಿ ತೊಡಗಲು ಕ್ರಮವಹಿಸಿ ಎಂದು ಈಗಾಗಲೇ ನಗರಸಭಾ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು. ಪೌತಿ ಖಾತೆ ಆಂದೋಲನಶಂಕರಪುರ ಮತ್ತು ಆನಂದಪುರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಮನೆಗಳು ಖಾತೆ ಬದಲಾವಣೆಯಾಗದೆ ಮರಣ ಹೊಂದಿದವರ ಹೆಸರಿನಲ್ಲೇ ಉಳಿದಿರುವುದರಿಂದ ಮನೆ ಕಟ್ಟಲು ಸಾಲ ಸೌಲಭ್ಯ, ಅಂಬೇಡ್ಕರ್ ವಸತಿ ಯೋಜನೆಯ ಫಲಾನುಭವಿಗಳಾಗಲು ತೊಂದರೆಯಾಗಿರುವುದನ್ನು ಗಮನಿಸಿದ್ದೇನೆ ಮುಂದಿನ ದಿನಗಳಲ್ಲಿ ಪೌತಿ ಖಾತೆ ಆಂದೋಲನ ನಡೆಸಿ ತೊಂದರೆಗಳನ್ನು ನಿವಾರಿಸಿ ಖಾತೆ ಮಾಡಿಕೊಡಲಾಗುವುದು ಎಂದರು. 24*7 ಕನಿಷ್ಠ ನೀರಿನ ದರ ನಿಗದಿಗೆ ಕ್ರಮ ನೀರಿನ ದರ ಸಾಕಷ್ಟು ನ್ಯೂನತೆಗಳು ಕಂಡು ಬಂದಿದೆ, ಈ ಭಾಗದ ಜನರಿಗೆ ಸಮಸ್ಯೆ ಹೆಚ್ಚಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನಗರಸಭಾ ಅಧ್ಯಕ್ಷರು ಮತ್ತು ಆಯುಕ್ತರಿಗೆ ಸೂಚನೆ ನೀಡಲಾಗಿದ್ದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚೆರ್ಚೆ ನಡೆಸಿ ನಿರ್ಣಯ ಕೈಗೊಂಡು ಕನಿಷ್ಠ ಶುಲ್ಕವನ್ನು ನಿಗದಿಗೊಳಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ನಿರುದ್ಯೋಗ ನಿವಾರಣೆಗೆ ಕ್ರಮನಂಜನಗೂಡಿನಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, ಯುವಕರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ವರ್ಷ ವರ್ಷ ಧ್ರುವನಾರಾಯಣ್ ರವರ ಹುಟ್ಟಹಬ್ಬದಂದು ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ. ಅಲ್ಲದೆ ಪ್ರತಿ ಸೋಮವಾರ ತಾಪಂ ನನ್ನ ಶಾಸಕರ ಕಚೇರಿಯಲ್ಲಿ ನಾನು ಲಭ್ಯವಿರುತ್ತೇನೆ, ಉದ್ಯೋಗ ಆಕಾಂಕ್ಷಿಗಳು ತಮ್ಮ ವಯಕ್ತಿಕ ವಿವರಗಳೊಂದಿಗೆ ನನ್ನನ್ನು ನೇರವಾಗಿ ಸಂಪರ್ಕಿಸಿದಲ್ಲಿ ವಿವಿಧ ಕಂಪನಿಗಳಲ್ಲಿ ಉದ್ಯೋಗ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಅವರು ತಿಳಿಸಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಎನ್. ಶ್ರೀಕಂಠಸ್ವಾಮಿ, ಉಪಾಧ್ಯಕ್ಷೆ ರಿಯಾನಾಭಾನು, ಸದಸ್ಯರಾದ ಪ್ರದೀಪ್, ಸಿದ್ದಿಖ್, ರಂಗಸ್ವಾಮಿ, ಸುರೇಶ್, ಮುಖಂಡ ಅಶೋಕ್, ನಗರಸಭಾ ಆಯುಕ್ತ ನಂಜುಂಡಸ್ವಾಮಿ, ಎಇಇ ಮಹೇಶ್, ಅಧಿಕಾರಿಗಳಾದ ರೇಖಾ ಇದ್ದರು.