ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಭಾರತ ದೇಶದಲ್ಲಿ ನೂರಾರು ಭಾಷೆ, ಸಾವಿರಾರು ಜಾತಿಗಳಿದ್ದರೂ ಅನೇಕ ಮಹಾತ್ಮರು, ಸಂತರು, ಶರಣರು ಜನಿಸಿದ ಕಾರಣದಿಂದಾಗಿ ಸಮಾಜವು ಸಾಮರಸ್ಯದಿಂದ ಜೀವನ ಸಾಗಿಸುತ್ತಿದೆ. ಬಂಜಾರ ಸಮಾಜದಲ್ಲಿ ಜನಿಸಿದ ಸಂತ ಸೇವಾಲಾಲರು ಮಾನವೀಯ ಮೌಲ್ಯ ಪ್ರತಿಪಾದನೆ ಮಾಡುವ ಮೂಲಕ ಸಮಾಜಕ್ಕೆ ಸನ್ಮಾರ್ಗದ ತೋರಿಸಿದ್ದಾರೆ ಎಂದು ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಬಸವ ಭವನದಲ್ಲಿ ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದಿಂದ ಸಂತ ಸೇವಾಲಾಲರ 287ನೇ ಜಯಂತಿ ಉತ್ಸವದಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂತ ಸೇವಾಲಾಲರು ಬೋಧಿಸಿರುವ ತತ್ವಗಳನ್ನು ಸಮಾಜ ಬಾಂಧವರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಈ ಸಮಾಜ ಬಾಂಧವರ ಬಹುದಿನಗಳ ಬೇಡಿಕೆಯಾಗಿರುವ ಸಂತ ಸೇವಾಲಾಲರ ಸಮುದಾಯ ಭವನವನ್ನು ಪಟ್ಟಣದಲ್ಲಿ ಶೀಘ್ರವೇ ನಿರ್ಮಿಸಲಾಗುವುದು ಎಂದರು.ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ದಿ ನಿಗಮ ಅಧ್ಯಕ್ಷರಾದ ಕಾಂತಾ ನಾಯಕ ಮಾತನಾಡಿ, ಹಿಂದುಳಿದ ಸಮಾಜದಲ್ಲಿ ಜನಿಸಿದ ಸಂತ ಸೇವಾಲಾಲರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಮಾಜ ಬಾಂಧವರು ಯಾವುದೇ ದುಶ್ಚಟಗಳಿಗೆ ಒಳಗಾಗಬಾರದು. ಜಯಂತಿ ಆಚರಣೆಯಾಗದೇ ಸಮಾಜದ ಆರಾಧ್ಯದೈವ ಸಂತ ಸೇವಾಲಾಲರು ಬೋಧಿಸಿದ ತತ್ವಗಳು ಆಚರಣೆಗೆ ಬರುವಂತಾಗಬೇಕೆಂದರು. ಸರ್ಕಾರ ಬಂಜಾರ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಸಮಾಜ ಬಾಂಧವರು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಿಕೊಳ್ಳಬೇಕು. ಕೌಶಲ್ಯ ಅಭಿವೃದ್ಧಿಯಲ್ಲಿ ನಿರುದ್ಯೋಗ ಯುವಕರಿಗೆ ಯುವತಿಯರಿಗೆ ಸಾಕಷ್ಟು ಯೋಜನೆಗಳಿವೆ. ಯುವಜನಾಂಗ ಸರ್ಕಾರದ ಯೋಜನೆ ಬಳಸಿಕೊಳ್ಳುವುದರೊಂದಿಗೆ ಸ್ವಾವಲಂಬಿಯಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಜಿಲ್ಲಾಧ್ಯಕ್ಷ ಡಾ.ಬಸವರಾಜ ಚವ್ಹಾಣ ಮಾತನಾಡಿ, ನಮ್ಮ ಸಮಾಜಕ್ಕೆ ಒಳಮೀಸಲಾತಿಯಲ್ಲಿ ಅನ್ಯಾಯವಾಗಿದ್ದು, ಸರ್ಕಾರ ನ್ಯಾಯ ಒದಗಿಸಬೇಕಿದೆ. ಸರ್ಕಾರ ರೋಸ್ಟರ್ ಪದ್ಧತಿ ಕುರಿತು ಗಮನ ಹರಿಸಬೇಕಿದೆ. ಸಚಿವ ಶಿವಾನಂದ ಪಾಟೀಲರು ಇದರ ಬಗ್ಗೆ ನಮಗೆ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆ ಎಂದರು.
ನೇತೃತ್ವ ವಹಿಸಿದ್ದ ನರಸಲಗಿಯ ಶ್ರೀಕಾಂತ ಮಹಾರಾಜರು ಮಾತನಾಡಿ, ಸಮಾಜದವರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಮೊಬೈಲ್ ಸೇರಿದಂತೆ ವಸ್ತುಗಳು ಹಾಳಾದರೆ ಇನ್ನೊಂದು ಖರೀದಿಸಬಹುದು. ಅದೇ ತಮ್ಮ ಮಕ್ಕಳು ಹಾಳಾದರೆ ಮತ್ತೆ ಮಕ್ಕಳನ್ನು ಪಡೆಯಲು ಸಾಧ್ಯವಿಲ್ಲ. ಇದನ್ನು ಅರಿತುಕೊಂಡು ಸಮಾಜ ಬದುಕು ಸಾಗಿಸಬೇಕಿದೆ ಎಂದರು.
ನ್ಯಾಯವಾದಿ ರವಿ ರಾಠೋಡ ಪ್ರಾಸ್ತಾವಿಕ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಕೆರರಟ್ಟಿಯ ಸೋಮಲಿಂಗ ಸ್ವಾಮೀಜಿ, ಶಾಸಕ ರಾಜುಗೌಡ ಪಾಟೀಲ, ಕೆಪಿಸಿಸಿ ರಾಜ್ಯ ಸಂಯೋಜಕ ಡಾ.ಪ್ರಭುಗೌಡ ಪಾಟೀಲ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಸಂತ ಸೇವಾಲಾಲರ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಬೈಕ್ ರ್ಯಾಲಿ ಜರುಗಿತು.ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ, ಅನಿಲ ಅಗರವಾಲ, ಬಸವರಾಜ ಲಮಾಣಿ, ಹರಿಲಾಲ ನಾಯಕ, ರುಕ್ಮಿಣಿ ರಾಠೋಡ, ಸುನೀತಾ ಪವಾರ, ಮಲ್ಲು ಪವಾರ, ನೇಮು ನಾಯಕ, ಪ್ರಶಾಂತ ಪವಾರ, ತಹಶೀಲ್ದಾರ ಯಮನಪ್ಪ ಸೋಮನಕಟ್ಟಿ,ಬಿಇಓ ವಸಂತ ರಾಠೋಡ,ತಾಪಂ ಅಧಿಕಾರಿ ಪ್ರಕಾಶ ದೇಸಾಯಿ ಇತರರು ಇದ್ದರು. ರಾಜು ರಾಠೋಡ ಸ್ವಾಗತಿಸಿದರು. ಗಿರಿಜಾ ಪಾಟೀಲ ನಿರೂಪಿಸಿದರು. ರವಿ ರಾಠೋಡ ವಂದಿಸಿದರು.