ಚಾಮುಲ್‌ನಲ್ಲಿ ಐಸ್ ಕ್ರೀಂ ಘಟಕ ಸ್ಥಾಪನೆ ಅನಗತ್ಯ

| Published : Apr 10 2025, 01:00 AM IST

ಸಾರಾಂಶ

ಚಾಮರಾಜನಗರ ತಾಲೂಕಿನ ಕುದೇರಿನ ಚಾಮುಲ್‌ನಲ್ಲಿ ಐಸ್‌ಕ್ರೀಂ ಉತ್ಪಾದನಾ ಘಟಕ ಸ್ಥಾಪನೆ ಅನಗತ್ಯವಾದದ್ದು, ಯೋಜನೆ ಕೈಬಿಡಬೇಕು ಎಂದು ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಹೊನ್ನೂರು ಪ್ರಕಾಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಕುದೇರಿನ ಚಾಮುಲ್‌ನಲ್ಲಿ ಐಸ್‌ಕ್ರೀಂ ಉತ್ಪಾದನಾ ಘಟಕ ಸ್ಥಾಪನೆ ಅನಗತ್ಯವಾದದ್ದು, ಯೋಜನೆ ಕೈಬಿಡಬೇಕು ಎಂದು ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕ ಹೊನ್ನೂರು ಪ್ರಕಾಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ₹83 ಕೋಟಿ ವೆಚ್ಚದಲ್ಲಿ ಚಾಮುಲ್‌ ಸ್ಥಾಪನೆ ಮಾಡಲು ₹50 ಕೋಟಿ ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಳ್ಳಲಾಗಿದೆ. ಈಗ ಚಾಮುಲ್‌ನಲ್ಲಿ ಐಸ್‌ ಕ್ರೀಂ ಉತ್ಪಾದನಾ ಘಟಕ ಸ್ಥಾಪನೆ ಮಾಡಲು ₹50 ಕೋಟಿ ಮತ್ತೇ ಸಾಲ ತೆಗೆದುಕೊಂಡರೆ ₹100 ಕೋಟಿ ಸಾಲದ ಹೊರೆ ಬೀಳಲಿದ್ದು, ಐಸ್‌ ಕ್ರೀಂ ಉತ್ಪಾದನಾ ಘಟಕ ಚಾಮುಲ್‌ನಲ್ಲಿ ಸ್ಥಾಪನೆ ಮಾಡುವುದು ಅನಗತ್ಯ ಎಂದರು.

ಹಾಸನದಲ್ಲಿರುವ ಐಸ್‌ಕ್ರೀಂ ಉತ್ಪಾದನಾ ಘಟಕದಲ್ಲಿ ನಷ್ಟವಾಗುತ್ತಿದೆ. ಐಸ್‌ ಕ್ರೀಂ ಸೀಸನ್‌ ಪದಾರ್ಥವಾಗಿದ್ದು, ಹೆಚ್ಚು ಲಾಭವಿಲ್ಲ. ಹಾಸನದ ಹಾಲು ಉತ್ಪಾದನಾ ಘಟಕದಲ್ಲಿ ಮಾತ್ರ ಐಸ್‌ ಕ್ರೀಂ ಉತ್ಪಾದನಾ ಘಟಕ ಸ್ಥಾಪನೆಯಾಗಿದೆ ಹೊರತು ಮೈಸೂರಿಲ್ಲಿರುವ ಮೈಮುಲ್‌ನಲ್ಲೂ ಐಸ್‌ಕ್ರೀಂ ಉತ್ಪಾದನಾ ಘಟಕ ಸ್ಥಾಪನೆ ಮಾಡಿಲ್ಲ, ಚಾಮುಲ್‌ನಲ್ಲಿ ಸ್ಥಾಪನೆ ಮಾಡುವುದಕ್ಕೆ ಹೊರಟಿರುವುದು ಘಟಕ ಸ್ಥಾಪನೆಯಿಂದ ಬರುವ ಕಮಿಷನ್‌ ಪಡೆಯುವ ಉದ್ದೇಶ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ತಿಳಿಸಿದರು.

ಚಾಮುಲ್‌ನಲ್ಲಿ ರೈತರಿಗೆ ನೀಡುತ್ತಿದ್ದ ಹಾಲಿನ ಹಣದಲ್ಲಿ ಒಂದು ರು. ಕಡಿತ ಮಾಡಿ ಚಾಮುಲ್‌ಗೆ 4 ಕೋಟಿ ಲಾಭ ಬಂದಿದೆ ಎಂದು ತೋರಿಸಿ 80 ಲಕ್ಷ ರು. ಅನ್ನು ಸಿಬ್ಬಂದಿಗೆ 80 ಲಕ್ಷ ರು. ಬೋನಸ್‌ ನೀಡಲಾಗಿದೆ. ರೈತರಿಗೆ ನೀಡಬೇಕಾದ ಹಣವನ್ನು ನೀಡದೇ ಅದನ್ನೇ ಲಾಭ ಎಂದು ತೋರಿಸಿಕೊಂಡಿದ್ದಾರೆ ಎಂದರು.ಸರ್ಕಾರ ಮಧ್ಯ ಪ್ರವೇಶಿಸಿ ಐಸ್ ಕ್ರೀಂ ಉತ್ಪಾದನಾ ಘಟಕ ಸ್ಥಾಪನೆ ಮಾಡದಂತೆ ಕ್ರಮವಹಿಸಬೇಕು. ಮೊದಲಿಗೆ ಚಾಮುಲ್‌ನಲ್ಲಿ ಲಾಭ ಮಾಡಿ ಆ ನಂತರ ಘಟಕ ಸ್ಥಾಪನೆ ಮಾಡಿ. ಈ ತಿಂಗಳ ಕೊನೆ ತನಕ ಸಮಯ ಕೊಡಲಾಗುತ್ತದೆ. ಒಂದು ವೇಳೆ ಘಟಕ ಸ್ಥಾಪನೆ ಕೈಬಿಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

12, 13, 14 ರಂದು ರೈತರಿಂದ ನೇರ ಮಾರಾಟ:

ತರಕಾರಿ ಬೆಳೆಗಳ ದರ ಇಳಿಕೆಯಾಗಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಯಲು ರಂಗಮಂದಿರದಲ್ಲಿ ಏ.12, 13, 14 ರಂದು ಮೂರು ದಿನಗಳ ಕಾಲ ರೈತರು ಬೆಳೆದ ತರಕಾರಿ, ದವಸ ಧಾನ್ಯಗಳು, ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ರೈತರು ತಾವು ಬೆಳೆದ ತರಕಾರಿ, ಹಣ್ಣುಗಳನ್ನು ತಂದು ಮಾರಾಟ ಮಾಡಬೇಕು. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ 9620622213 ಅನ್ನು ಸಂಪರ್ಕಿಸಬೇಕು ಎಂದು ಹೊನ್ನೂರು ಪ್ರಕಾಶ್ ಮನವಿ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಪದಾಧಿಕಾರಿಗಳಾದ ಅಂಬಳೆ ಶಿವಕುಮಾರ್, ಮಹದೇವಸ್ವಾಮಿ, ಮಾದಪ್ಪ, ಮಾಡ್ರಳ್ಳಿ ಪಾಪಣ್ಣ, ಈಶ್ವರ್ ಪ್ರಭು, ಗುರುಮಲ್ಲಪ್ಪ ಇದ್ದರು.