ಸಾರಾಂಶ
ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ:ತಾಲೂಕಿನ ಜನರು ಹಾಗೂ ಅನೇಕ ಹೋರಾಟಗಾರರು 70 ವರ್ಷ ಕಂಡಿದ್ದ ರೈಲು ಸಂಚಾರದ ಕನಸನ್ನು ಗುರುವಾರ ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಕುಷ್ಟಗಿ-ಹುಬ್ಬಳ್ಳಿ ನಡುವಿನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ನನಸು ಮಾಡಿದ್ದಾರೆ.
ಈ ದಿನಕ್ಕಾಗಿ ಕಾದಿದ್ದ ಜನರ ಖುಷಿಗೆ ಗುರುವಾರ ಪಾರವೇ ಇರಲಿಲ್ಲ. ಪಟ್ಟಣದಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಜನತೆ ಹೊಸ ರೈಲಿನ ಮುಂದೇ ನಿಂತು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ವಿವಿಧ ಹೂವಿಗಳಿಂದ ಶೃಂಗರಿಸಿದ್ದ ರೈಲು ನೋಡಿ ಕೊನೆಗೆ ನಮ್ಮ ಕನಸು ಈಡೇರಿತಲ್ಲ ಎನ್ನುವ ಭಾವ ಕಣ್ಣಲ್ಲಿ ಗೋಚರಿಸಿತು.ಉಚಿತ ಪ್ರಯಾಣ:ಕುಷ್ಟಗಿಯಿಂದ ತಳಕಲ್ ವರೆಗೆ ರೈಲು ಅಧಿಕಾರಿಗಳು ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದರು. ನಿಲ್ದಾಣಕ್ಕೆ ಆಗಮಿಸಲು ಸಾರ್ವಜನಿಕರಿಗೆ ವಾಹನದ ವ್ಯವಸ್ಥೆ, ನೀರು, ಲಘು ಉಪಹಾರ, ಉಪ್ಪಿಟ್ಟು, ಪಲಾವ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆ ಸೇರಿದಂತೆ ಅನೇಕ ಸಂಘಟನೆಗಳು ರೈಲ್ವೆ ಯೋಜನೆಯನ್ನು ಸಮರ್ಪಕವಾಗಿ ಸಾಕಾರಗೊಳಿಸಲು ಹಾಗೂ ಕೆಲ ದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸುವ ಮೂಲಕ ಮನವಿ ಸಲ್ಲಿಸಿತು.
ಕಿಟ್ ಹಸ್ತಾಂತರ:ಭಾರತೀಯ ರೆಡ್ಕ್ರಾಸ್ ಸಂಸ್ಥೆ ತಾಲೂಕು ಘಟಕ ಕುಷ್ಟಗಿ ಹಾಗೂ ಜಿಲ್ಲಾ ಘಟಕ ವತಿಯಿಂದ ನೂತನ ರೈಲ್ವೆ ನಿಲ್ದಾಣಕ್ಕೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹಾಗೂ ವೀಲ್ಚೇರ್ ಅನ್ನು ರೈಲ್ವೆ ಸಚಿವ ವಿ. ಸೋಮಣ್ಣ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ಮುಖಾಂತರ ಹಸ್ತಾಂತರಿಸಲಾಯಿತು. ಜಿಲ್ಲಾ ನಿರ್ದೇಶಕ ಡಾ. ರವಿಕುಮಾರ ದಾನಿ, ಡಾ. ಬಸವರಾಜ ವಸ್ತ್ರದ, ಮಹಾಂತಯ್ಯ ಅರಳೆಲಿಮಠ, ಅಪ್ಪಣ್ಣ ನವಲಿ, ಮಲ್ಲಿಕಾರ್ಜುನ ಬಳಿಗಾರ ಇದ್ದರು.
ನಮ್ಮ ಅಜ್ಜನ ಕಾಲದಿಂದಲೂ ರೈಲು ಈ ವರ್ಷ ಬರುತ್ತೆ ಮುಂದಿನ ವರ್ಷ ಬರುತ್ತೆ ಎಂದು ಕೇಳಿಕೊಂಡು ಬರತ್ತಾ ಇದ್ದೀವಿ. ಸುಮಾರು 7 ದಶಕಗಳ ನಂತರ ಕನಸು ನನಸಾಗಿದೆ.ಮಲ್ಲಿಕಾರ್ಜುನ ಹೊಸವಕ್ಕಲ ಕುಷ್ಟಗಿ ನಿವಾಸಿ.ಕುಷ್ಟಗಿ-ಹುಬ್ಬಳ್ಳಿ ರೈಲು ಸಂಚಾರದಿಂದ ವ್ಯಾಪಾರ-ವಹಿವಾಟಿಗೆ ಅನೂಕೂಲವಾಗಲಿದೆ. ಈ ರೈಲು ಸಂಚಾರದಿಂದ ತಾಲೂಕು ಅಭಿವೃದ್ಧಿಯಾಗಲಿದೆ. ರೈಲು ನಿಲ್ದಾಣದಲ್ಲಿ ಎಲ್ಲ ಮೂಲಭೂತ ಸೌಲಭ್ಯ ಒದಗಿಸಿಕೊಡುವ ಕಾರ್ಯವಾಗಬೇಕು.
ಶಿಲ್ಪಾ ಅಂಗಡಿ ಪುಟಗಮರಿ ನಿವಾಸಿಕುಷ್ಟಗಿಯಿಂದ ಮೊದಲ ಬಾರಿಗೆ ರೈಲು ಸಂಚರಿಸುತ್ತಿದ್ದು ಹುಬ್ಬಳ್ಳಿ ವರೆಗೆ ಟಿಕೆಟ್ ತೆಗೆದುಕೊಂಡಿರುವೆ. ಇದು ನನ್ನ ಬಹುದಿನಗಳ ಕನಸಾಗಿತ್ತು.ವಿನೋದ ಕುಮಾರ ಕುಷ್ಟಗಿ