ಸಾರಾಂಶ
ಹಾವೇರಿ: ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ನಾಲ್ಕು ವರ್ಷಗಳಿಂದ ವಿತರಣೆ ಮಾಡದೇ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಎಸ್ಎಫ್ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ನಂತರ ಸುಮಾರು 22ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು ಸುಮಾರು 51 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಂಕಪಟ್ಟಿ ವಿತರಣೆ ಮಾಡಿಲ್ಲ. ಪ್ರಸ್ತುತ ರಾಜ್ಯ ಸರ್ಕಾರ ರಾಜ್ಯದಲ್ಲಿ ಎಸ್ಇಪಿ ಜಾರಿಗೊಳಿಸಿದೆ. ಆದರೆ ಇದರಲ್ಲೂ ಅಂಕಪಟ್ಟಿ ಸಿಗುತ್ತಿಲ್ಲ. ಉನ್ನತ ವಿದ್ಯಾಭ್ಯಾಸಕ್ಕೆ ಅಂಕ ಪಟ್ಟಿ ಬೇಕಾಗಿರುವ ಕಾರಣ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ವಿಶ್ವವಿದ್ಯಾನಿಲಯದ ಬಳಿ ವಿದ್ಯಾರ್ಥಿಗಳು ಅಂಕಪಟ್ಟಿ ಕೇಳಿಕೊಂಡು ಹೋದರೆ ಡಿಜಿ ಲಾಕರ್ನಲ್ಲಿ ಅಂಕಪಟ್ಟಿ ತೆಗೆದುಕೊಳ್ಳಿ ಎಂದು ತಿಳಿಸುತ್ತಿದ್ದಾರೆ. ಆದರೆ ಅಲ್ಲಿಯೂ ಸಹ ಅಂಕಪಟ್ಟಿ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಆದರಿಂದ ತಕ್ಷಣ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಅಂಕಪಟ್ಟಿ ವಿತರಣೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ಅಂಕಪಟ್ಟಿ ವಿತರಣೆಯಲ್ಲಿ ಸುಮಾರು 200 ಕೋಟಿ ಹಣ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಆದರಿಂದ ಅಂಕಪಟ್ಟಿ ವಿತರಣೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ಆಗ್ರಹಿಸಿದರು. ಕಾಲೇಜ್ ಘಟಕದ ಅಧ್ಯಕ್ಷ ತಿರಕಪ್ಪ ಬಾತಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಪರಶು ಕೊಪ್ಪಳದರ್, ವಸಂತ ವಿ, ಸುನೀಲ್ ಎಲ್., ಸಾಗರ ಹಿರೇಲಿಂಗದಹಳ್ಳಿ, ಕಾಲೇಜ್ ಘಟಕ ಕಾರ್ಯದರ್ಶಿ ಲಕ್ಷ್ಮಿ ಲಮಾಣಿ, ಉಪಾಧ್ಯಕ್ಷ ಲಿಂಗರಾಜ ಸಿ ಎಮ್, ಕಾಂತೇಶ್ ಈಳಿಗೇರ್, ಜ್ಯೋತಿ ಪಟ್ಟಣ್ಣಶೆಟ್ಟಿ, ನಾಗವೇಣಿ, ಬೈಲನಾಯ್ಕರ, ಸಹ ಕಾರ್ಯದರ್ಶಿ ಅನ್ನಪೂರ್ಣ ಗಾಜಿಗೌಡ್ರ, ಸಂಜನಾ ಬಾರ್ಕಿ, ಮಹಮ್ಮದ್ ಸಾಧಿಕ್, ಜಗದೀಶ್ ದೊಡ್ಡಮನಿ ಇತರರು ಇದ್ದರು.